ಈಶೋಪನಿಷತ್
ಉಪನಿಷತ್ತಗಳು
ವೇದ ಸಾಹಿತ್ಯವನ್ನು ಮೂರು ವಿಭಾಗಗಳಾಗಿ ವಿಭಜಿಸಬಹುದು
- ಸಂಹಿತೆಗಳು - ದೇವರುಗಳನ್ನು ಸ್ತುತಿಸಿ, ಪೂಜಿಸಿ ಆರಾಧಿಸುವ ಮಂತ್ರಗಳನ್ನು ಒಳಗೊಂಡ ಸಂಹಿತೆಗಳು ವೇದದ ಅತಿ ಹಳೆಯ ಭಾಗದಲ್ಲಿ ಕಂಡುಬರುತ್ತವೆ.
- ಬ್ರಾಹ್ಮಣಗಳು - ಪೂಜೆ, ಪುನಸ್ಕಾರ, ಯಜ್ಞ-ಯಾಗಾದಿಗಳ ವಿಧಿ ವಿಧಾನವನ್ನು ಇವು ವಿವರಿಸುತ್ತವೆ.
- ಉಪನಿಷತ್ತುಗಳು - ಇವು ಆಚರಣೆ, ಪೂಜೆ, ಪುನಸ್ಕಾರಗಳ ಬದಲು ತತ್ವ ಜ್ಞಾನ ಹಾಗೂ ಅಧ್ಯಾತ್ಮದ ವಿವರಣೆಯನ್ನು ಹೊಂದಿವೆ. ಆತ್ಮ ಹಾಗೂ ಪರಮಾತ್ಮನ ಭೇದ ಹಾಗೂ ಐಕ್ಯವನ್ನು ಸಾರುವ ಗ್ರಂಥಗಳು ಇವು.
ವೇದಗಳು ಕರ್ಮಕಾಂಡವನ್ನು ವಿವರಿಸಿದರೆ ಉಪನಿಷತ್ತುಗಳು ಜ್ಞಾನಕಾಂಡವನ್ನು, ತತ್ವಜ್ಞಾನವನ್ನು ಒಳಗೊಂಡು ಬಹಳವೇ ಪ್ರಸಿದ್ಧವಾಗಿವೆ. ವೇದಗಳು ಪೂಜೆ, ಆಚರಣೆ, ಯಜ್ಞ ಇತ್ಯಾದಿಗಳಿಗೆ ಪ್ರಾಮುಖ್ಯತೆ ಕೊಟ್ಟರೆ, ಉಪನಿಷತ್ತುಗಳು ಆತ್ಮಜ್ಞಾನ, ಧ್ಯಾನ ಇತ್ಯಾದಿ ಆಧ್ಯಾತ್ಮವನ್ನು ವಿವರಿಸುತ್ತವೆ.
ಒಟ್ಟು 108 ಉಪನಿಷತ್ತುಗಳಿವೆ ಎಂದು ಹೇಳಲಾಗುವದು- ಅವುಗಳಲ್ಲಿ ಪ್ರಮುಖವೆಂದರೆ - ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ, ತೈತ್ತರೀಯ, ಐತ್ತರೀಯ, ಚಾಂಡೋಗ್ಯ ಹಾಗೂ ಬ್ರಹದಾರಣ್ಯಕ.
ಈಶ ಉಪನಿಷತ್
ಈಶೋಪನಿಷತ್ ಶುಕ್ಲ ಯಜುರ್ವೇದದ ಭಾಗವಾಗಿದೆ. ಇದು ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ. ಇದರ ಮೊದಲ ಶ್ಲೋಕ 'ಈಶಾವಾಸ್ಯಮಿದಂ ..' ಎಂದು ಆರಂಭವಾಗುವದರಿಂದ ಇದಕ್ಕೆ ಈಶಾವಾಸ್ಯ ಉಪನಿಷತ್ ಎಂದೂ ಹೇಳುತ್ತಾರೆ.
ಮಹಾತ್ಮಾ ಗಾಂಧಿಯವರು ಪ್ರಕಾರ-
" ಈ ಉಪನಿಷತ್ತಿನ ಮೊದಲನೇ ಶ್ಲೋಕ ವೇದಗಳ ಸಂಪೂರ್ಣ ತಾತ್ಪರ್ಯವನ್ನು ಒಂದೇ ಒಂದು ಶ್ಲೋಕದಲ್ಲಿ ಹೇಳುತ್ತದೆ"
ಉಪನಿಷತ್ತುಗಳನ್ನು ಶಾಂತಿಮಂತ್ರದೊಂದಿಗೆ ಆರಂಭಿಸುವ ಪರಿಪಾಠವಿದೆ.
ಶಾಂತಿ ಮಂತ್ರ
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ .
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ..
ಓಂ ಶಾಂತಿಃ ಶಾಂತಿಃ ಶಾಂತಿಃ ..
ಓಂ , ಅದು (ಬಾಹ್ಯ ಜಗತ್ತು , ಪ್ರಕೃತಿ, ಕಣ್ಣಿಗೆ ಕಾಣುವ ಜಗತ್ತು) ಪರಿಪೂರ್ಣ. ಇದು ಪರಿಪೂರ್ಣ ( ಕಣ್ಣಿಗೆ ಕಾಣದ ಜಗತ್ತು, ಬ್ರಹ್ಮ,). ಪೂರ್ಣದಿಂದ ಪೂರ್ಣ ಉತ್ಪತ್ತಿಯಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದರು ಪೂರ್ಣವೇ ಉಳಿಯುತ್ತದೆ.
- ಸಚ್ಚಿದಾನಂದ ಪರಬ್ರಹ್ಮನು ಪರಿಪೂರ್ಣ. ಅವನಿಂದ ರಚಿತವಾದ ಈ ಜಗತ್ತು ಪೂರ್ಣ. ಈ ಪೂರ್ಣ ಜಗತ್ತಿನಿಂದ ಎಲ್ಲವನ್ನು ಹೊರ ತೆಗೆದರೂ ಪೂರ್ಣವೇ ಉಳಿಯುತ್ತದೆ.
- ಉದಾಹರಣೆಗೆ - ನೀವು ಒಂದು ದೀಪದ ಬೆಳಕಿನಿಂದ ಇನ್ನೊಂದು ದೀಪವನ್ನು ಬೆಳಗಿದರೆ,ಮೊದಲಿನ ದೀಪದ ಬೆಳಕೂ ಸಹ ಪೂರ್ಣವಾಗಿಯೇ ಇರುವದಲ್ಲ.
- ಇನ್ನೊಂದು ಉದಾಹರಣೆ ಎಂದರೆ ಜ್ಞಾನ - ನಿಮ್ಮ ಸಂಪೂರ್ಣ ಜ್ಞಾನವನ್ನು ಇನ್ನೊಬ್ಬರಿಗೆ ಕಲಿಸಿಕೊಟ್ಟರೆ, ನಿಮ್ಮ ಜ್ಞಾನ ನಾಶವಾಗುವದೇ? ಇಲ್ಲ - ಅದೂ ಸಹ ಸಂಪೂರ್ಣವಾಗಿಯೂ ಉಳಿಯುತ್ತದೆ ತಾನೇ?
- ಕನಸಿನಲ್ಲಿ ಸಂತೆಗೆ ಹೋದವನು ಅನೇಕರನ್ನು ನೋಡಿದರೂ ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ -ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾ ಮಾಯವಾದರೂ ಕಡಿಮೆಯಾಗಲೂ ಇಲ್ಲ.
ಅಥ ಈಶೋಪನಿಷತ್ ..
ಓಂ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ .ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ .. 1..
- ಈ ಜಗತ್ತಿನಲ್ಲಿ ಸಕಲ ಚರಾಚರಗಳೆಲ್ಲವೂ ಈಶ್ವರನಿಂದ ಆವೃತವಾಗಿವೆ.
- ತ್ಯಜಿಸು ಎಂದರೆ ವೈರಾಗ್ಯ- ಆ ವೈರಾಗ್ಯದಿಂದ ಜಗವನ್ನು ಅನುಭವಿಸು. ಈ ಬಾಹ್ಯ ಜಗತ್ತನ್ನು ತ್ಯಜಿಸು. ಆಸೆ, ಅಭಿಮಾನ, ಅಹಂಕಾರ, ಸ್ವಾರ್ಥ, ದೇಹದ ಮೋಹ ಎಲ್ಲವನ್ನು ತ್ಯಜಿಸು. ಆಗ ನೀನು 'ಅವನೇ' ಆಗುತ್ತೀಯ .
- ತೇನ ತ್ಯಕ್ತೇನ ಭುಂಜೀಥಾ ಎಂದರೆ ತ್ಯಾಗವನ್ನೂ ಮಾಡು, ನೀನೂ ಅನುಭವಿಸು - ಎಂದೂ ಅರ್ಥೈಸಬಹುದು.
- 'ಕಸ್ಯಸ್ವಿದ್ಧನಂ' ಇದರ ಇನ್ನೊಂದು ವ್ಯಾಖ್ಯಾನ ಹೀಗೆ ಹೇಳಬಹುದು - ನೀನು ಅಸೆ ಪಡಲು ಈ ಧನವಾದರೂ ಯಾರದ್ದು? ಎಲ್ಲವೂ ಆ ಪರಬ್ರಹ್ಮನದ್ದೇ ಆಗಿರುವಾಗ ನೀನು ಯಾವುದನ್ನು ಕುರಿತು ಮೋಹ, ಲೋಭ ಮಾಡುತ್ತೀಯಾ?
- ಈಶಾವಾಸ್ಯಮಿದಂ ಸರ್ವಂ ಅದರ ಇನ್ನೊಂದು ಅರ್ಥದ ಪ್ರಕಾರ - ನೀನು ಸಕಲ ಜಗತ್ತನ್ನು ಈಶ್ವರನಿಂದ ಆಚ್ಛಾದಿಸು - ಈಶ್ವರ ಭಾವದಿಂದ ಇಡೀ ವಿಶ್ವವನ್ನು ನೋಡು.
- ತ್ಯಕ್ತೇನ ಭುಂಜೀಥಾ - ಈ ಶಬ್ದದ ಅರ್ಥ ತ್ಯಜಿಸಿ ಜೀವಿಸು ಎಂದೂ ಆಗುತ್ತದೆ
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ .
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ .. 2..
ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾಽಽವೃತಾಃ .
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ .. 3..
ಅಜ್ಞಾನದಿಂದ ಆತ್ಮನನ್ನು ಹನನ (ಕೊಲೆ) ಮಾಡುವವರು ಅಸುರ್ಯ (ಅಸುರರ ಲೋಕ, ದುಃಖ ದಾರಿದ್ರ್ಯ ತುಂಬಿದ ಲೋಕ) ಎಂಬ ಕತ್ತಲೆಯಿಂದ ತುಂಬಿದ ಲೋಕಕ್ಕೆ ಹೋಗುತ್ತಾರೆ.
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ .
ತದ್ಧಾವತೋಽನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ .. 4..
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ .
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ .. 5..
- ಒಂದು ಉದಾಹರಣೆ ಹೀಗೆ ಕೊಡಬಹುದೇನೋ - ಮನಸ್ಸಿನ ನಿರ್ಧಾರದಿಂದಲೇ ನಾವು ಚಲಿಸುತ್ತೇವೆ. ಕೈ, ಕಾಲು, ಶರೀರ ಚಲಿಸುತ್ತದೆ. ಹಾಗೆಂದು ಮನಸ್ಸು ಚಲಿಸುವುದಾ? ಇಲ್ಲ. ಅದೇ ರೀತಿ ಆತ್ಮ ಕೂಡ ಚಲನೆಗೆ ಹೇತುವಾಗುತ್ತದೆಯೇ ಹೊರತು ಅದು ಚಲಿಸುವದಿಲ್ಲ.
- ಮೂಢರಿಗೆ, ಸಂಸಾರ ಸಾಗರದಲ್ಲಿ ಮುಳುಗಿದರವರಿಗೆ, ಕಾಮ, ಕ್ರೋಧ, ಲೋಭ, ಮದ, ಮತ್ಸರದಿಂದ ತುಂಬಿಕೊಂಡವರಿಗೆ ಆತ್ಮವು ದೂರದಲ್ಲಿದೆ. ಆದರೆ ಚಿತ್ತಶುದ್ಧಿ ಹೊಂದಿ, ಶ್ರವಣ, ಮನನ, ನಿಧಿಧ್ಯಾಸನ ಇತ್ಯಾದಿ ಮಾಡುತ್ತ, ಧ್ಯಾನಿಸುವವರಿಗೆ ಆತ್ಮ ಬಹಳ ಹತ್ತಿರದಲ್ಲಿದೆ.
- ಅತಿ ಸೂಕ್ಷ್ಮವಾದ ಆತ್ಮವು ಎಲ್ಲರ, ಎಲ್ಲವುಗಳ ಅಂತರಾಳದಲ್ಲಿ ಅಡಗಿದೆ. ಆದರೆ ಈ ಆತ್ಮವು ಸರ್ವ ವ್ಯಾಪಿಯಾಗಿ, ಎಲ್ಲವುಗಳ ಹೊರಗೂ ಸಹ ಇದೆ.
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ .
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ .. 6..
ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ .
ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ .. 7..
ಯಸ್ಮಿನ್ = ಯಾರಲ್ಲಿ ಸರ್ವಾಣಿ = ಎಲ್ಲ ಭೂತಾನಿ= ಜೀವಿಗಳು ಆತ್ಮ +ಏವ= ಆತ್ಮವೇ ಭೂತ್= ಆಗಿ ವಿಜಾನತ: = ತಿಳಿದು ತತ್ರ = ಆವಾಗ ಕಃ = ಎಲ್ಲಿ ಏಕತ್ವಂ = ಏಕತ್ವವನ್ನೇ ಅನುಪಶ್ಯತಃ = ನೋಡುತ್ತಾನೆ
ಸ ಪರ್ಯಗಾಚ್ಛುಕ್ರಮಕಾಯಮವ್ರಣ-
ಮಸ್ನಾವಿರಂ ಶುದ್ಧಮಪಾಪವಿದ್ಧಂ .
ಕವಿರ್ಮನೀಷೀ ಪರಿಭೂಃ ಸ್ವಯಂಭೂ-
ರ್ಯಾಥಾತಥ್ಯತೋಽರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ .. 8..
ಅಂಧಂ ತಮಃ ಪ್ರವಿಶಂತಿ ಯೇಽವಿದ್ಯಾಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ .. 9..
ಅನ್ಯದೇವಾಹುರ್ವಿದ್ಯಯಾಽನ್ಯದಾಹುರವಿದ್ಯಯಾ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 10..
ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ .
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಽಮೃತಮಶ್ನುತೇ .. 11..
ಯಾರು ವಿದ್ಯೆ ಮತ್ತು ಅವಿದ್ಯೆಗಳನ್ನೆರಡನ್ನು ತಿಳಿದಿರುತ್ತಾನೋ, ಅವನಿಗೆ ಅವಿದ್ಯೆಯ ಜ್ಞಾನದಿಂದ ಮೃತ್ಯುವನ್ನೇನೋ ಗೆಲ್ಲಬಹುದು. ಆದರೆ ವಿದ್ಯೆಯ ಅರಿವಿನಿಂದ ಅವನು ಮುಕ್ತಿಯನ್ನು ಪಡೆಯುತ್ತಾನೆ.
ಅಂಧಂ ತಮಃ ಪ್ರವಿಶಂತಿ ಯೇಽಸಂಭೂತಿಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ .. 12..
ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 13..
ಸಗುಣ ದೇವರನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ನಿರ್ಗುಣವನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ಹೀಗೆಂದು ನಮಗೆ ಜ್ಞಾನಿಗಳಿಂದ ನಾವು ಕೇಳಿದ್ದೇವೆ.
ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ .
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಽಮೃತಮಶ್ನುತೇ .. 14..
ಸಂಭೂತಿ (ಪೃಕೃತಿ) ಮತ್ತು ವಿನಾಶ ಎರಡನ್ನೂ ಯಾರು ಅರಿಯುತ್ತಾನೋ, ಅವನು ವಿನಾಶದ ಅರಿವಿನಿಂದ ಸಾವನ್ನು ಗೆಲ್ಲುತ್ತಾನೆ. ಸಂಭೂತಿಯ ಅರಿವಿನಿಂದ ಅಮೃತವನ್ನು ಹೊಂದುತ್ತಾನೆ.
15ರಿಂದ 18ರವರೆಗಿನ ಶ್ಲೋಕಗಳು ಪ್ರಾರ್ಥನೆಯ ಶ್ಲೋಕಗಳು. ಇವು ಬೇರೆ ಶ್ಲೋಕಗಳಿಗೆ ಅಷ್ಟು ಸಂಬಂಧಿಸಿಲ್ಲ. ಅವು ಆತ್ಮದ ವಿವರಣೆಯನ್ನು ಕೊಡುವ ಶ್ಲೋಕಗಳಲ್ಲ.
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ .
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ .. 15..
ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜಃ .
ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ
ಯೋಽಸಾವಸೌ ಪುರುಷಃ ಸೋಽಹಮಸ್ಮಿ .. 16..
ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ .
ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ .. 17..
ನನ್ನ ಪ್ರಾಣವು ಸರ್ವವ್ಯಾಪಿಯಾದ ವಾಯುವಿನಲ್ಲಿ ಸೇರಲಿ, ಶರೀರವು ಭಸ್ಮವಾಗಲಿ. ಓಂ ಮನಸೇ, ನಿನ್ನ ಕರ್ಮಗಳನ್ನು ನೆನಪಿಸಿಕೋ.
ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ .
ಯುಯೋಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂ ತೇ ನಮೌಕ್ತಿಂ ವಿಧೇಮ .. 18..
ಹೇ ಅಗ್ನಿಯೇ, ನಮ್ಮ ಎಲ್ಲ ಕರ್ಮಗಳನ್ನು ಅರಿತವನಾದ ನೀನು, ನಮ್ಮ ಕರ್ಮಫಲ ಆನಂದಿಸುಲು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗು. ನಮ್ಮಲ್ಲಿರುವ ಕುಟಿಲ ಬುದ್ಧಿಯನ್ನು ದೂರ ಮಾಡು. ನಾವು ನಮೃತೆಯಿಂದ ನಿನ್ನನ್ನು ಪ್ರಾರ್ಥಿಸುತ್ತೇವೆ.
Comments
Post a Comment