ಈಶೋಪನಿಷತ್

ಉಪನಿಷತ್ತಗಳು

ಉಪನಿಷತ್ತುಗಳು ವೇದಗಳ ಅಂತ್ಯ ಭಾಗದ ರಚನೆಗಳು. ಇವುಗಳು ವೇದಗಳ ರಚನೆಯ ನಂತರದ  ರಚನೆಯಾಗಿದ್ದು ಬಹಳ ಪ್ರಸಿದ್ಧವಾಗಿವೆ. 

ಉಪನಿಷತ್ತುಗಳನ್ನಯ ವೇದಾಂತ ಎಂದೂ ಕರೆಯುತ್ತಾರೆ. ಆತ್ಮಜ್ಞಾನ, ಧ್ಯಾನ ಇತ್ಯಾದಿ ಆಧ್ಯಾತ್ಮವನ್ನು  ವಿವರಿಸುವ ಇವು ಪೂಜೆ, ಆಚರಣೆ, ಯಜ್ಞ ಇತ್ಯಾದಿಗಳನ್ನು ವಿವರಿಸುವ ವೇದಗಳಿಗಿಂತ ವಿಭಿನ್ನವಾಗಿವೆ.

ಒಟ್ಟು 200ಕ್ಕೂ ಹೆಚ್ಚು ಉಪನಿಷತ್ತುಗಳಿದ್ದರೂ ಅವುಗಳಲ್ಲಿ  ಪ್ರಮುಖವೆಂದರೆ - ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ, ತೈತ್ತರೀಯ, ಐತ್ತರೀಯ, ಚಾಂಡೋಗ್ಯ, ಬ್ರಹದಾರಣ್ಯಕ

ಮ್ಯಾಕ್ಸ್ ಮುಲ್ಲರ್ ಅವರು ಅನುವಾದಿಸಿದ ಹಲವು ಉಪನಿಷತ್ತುಗಳ ಆಂಗ್ಲ ಅನುವಾದ ಹಿಂದೂವೆಬ್ಸೈಟ್ ನಲ್ಲಿ ಲಬ್ಧವಿದೆ 

ಈಶ ಉಪನಿಷತ್

ಈಶೋಪನಿಷತ್ ಶುಕ್ಲ ಯಜುರ್ವೇದದ ಭಾಗವಾಗಿದೆ. ಕೇವಲ ೧೮ ಶ್ಲೋಕಗಳನ್ನು  ಹೊಂದಿರುವ ಈ ಉಪನಿಷದ್ ಸಂಕೀರ್ಣವಾದರೂ ಅರ್ಥಗರ್ಭಿತವಾಗಿದೆ.   

ಇದರ ಮೊದಲ ಶ್ಲೋಕ 'ಈಶಾವಾಸ್ಯಮಿದಂ ..' ಎಂದು ಆರಂಭವಾಗುವದರಿಂದ ಇದಕ್ಕೆ  ಈಶಾವಾಸ್ಯ ಉಪನಿಷತ್ ಎಂದೂ ಹೇಳುತ್ತಾರೆ. 

ಮಹಾತ್ಮಾ ಗಾಂಧಿಯವರು ಹೇಳಿದ್ದರಂತೆ 

" ಈ ಉಪನಿಷತ್ತಿನ ಮೊದಲನೇ ಶ್ಲೋಕವೊಂದೇ ವೇದಗಳ ಸಂಪೂರ್ಣ ತಾತ್ಪರ್ಯವನ್ನು ಒಂದೇ ಒಂದು ಶ್ಲೋಕದಲ್ಲಿ ಹೇಳುತ್ತದೆ"


ಶಾಂತಿ ಮಂತ್ರ 

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ .
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ..
ಓಂ ಶಾಂತಿಃ ಶಾಂತಿಃ ಶಾಂತಿಃ ..


ಓಂ , ಅದು (ಬಾಹ್ಯ ಜಗತ್ತು , ಕಣ್ಣಿಗೆ ಕಾಣುವ ಜಗತ್ತು) ಪರಿಪೂರ್ಣ. ಇದು ಪರಿಪೂರ್ಣ ( ಕಣ್ಣಿಗೆ ಕಾಣದ ಜಗತ್ತು). ಪೂರ್ಣದಿಂದ ಪೂರ್ಣ ಉತ್ಪತ್ತಿಯಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದರು ಪೂರ್ಣವೇ ಉಳಿಯುತ್ತದೆ.

ಸಚ್ಚಿದಾನಂದ ಪರಬ್ರಹ್ಮನು ಪರಿಪೂರ್ಣ. ಅವನಿಂದ ರಚಿತವಾದ ಈ ಜಗತ್ತು ಪೂರ್ಣ. ಈ ಪೂರ್ಣ ಜಗತ್ತಿನಿಂದ ಎಲ್ಲವನ್ನು ಹೊರ ತೆಗೆದರೂ ಪೂರ್ಣವೇ ಉಳಿಯುತ್ತದೆ. 

ನೀವು ಸಂಪೂರ್ಣವಾದ ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿದರೆ,ಮೊದಲಿನ ದೀಪದ  ಬೆಳಕೂ ಸಹ  ಪೂರ್ಣವಾಗಿಯೇ ಇರುವದಲ್ಲ. 

ಇನ್ನೊಂದು ಉದಾಹರಣೆ ಜ್ಞಾನ - ನಿಮ್ಮ ಸಂಪೂರ್ಣ ಜ್ಞಾನವನ್ನು ಇನ್ನೊಬ್ಬರಿಗೆ ಹೇಳಿಕೊಟ್ಟರೆ, ನಿಮ್ಮ  ಜ್ಞಾನ ಸಂಪೂರ್ಣವಾಗಿಯೂ  ಉಳಿಯುತ್ತದೆ ತಾನೇ?

ಅಥ ಈಶೋಪನಿಷತ್ ..
 

ಓಂ ಈಶಾ ವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ .
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ .. 1..

 
ಈ ಜಗತ್ತೆಲ್ಲವೂ ಈಶ್ವರನಿಂದ ಆಚ್ಛಾದಿಸಲ್ಪಟ್ಟಿದೆ. ಸಕಲ ಜೀವಿಗಳಲ್ಲೂ ಈಶ್ವರನೇ ಇದ್ದಾನೆ.ಎಲ್ಲ ಚರಾಚರ ಜೀವಜಂತುಗಳಲ್ಲಿ ಈಶ್ವರನಿದ್ದಾನೆ. 
 
ತ್ಯಜಿಸಿ ಸುಖವನ್ನು ಅನುಭವಿಸು. ಆದರೆ ಇತರರ ಧನವನ್ನು ಆಶಿಸಬೇಡ. ಯಾಕೆಂದರೆ ಈ ಧನಕನಕಗಳೆಲ್ಲ ಯಾರದ್ದು? 

ಈ ಬಾಹ್ಯ ಜಗತ್ತನ್ನು ತ್ಯಜಿಸು. ಅಭಿಮಾನ, ಅಹಂಕಾರ, ಸ್ವಾರ್ಥ, ದೇಹದ ಮೋಹ ಎಲ್ಲವನ್ನು ತ್ಯಜಿಸು. ಆಗ ನೀನು 'ಅವನೇ' ಆಗುತ್ತೀಯ . 

'ಕಸ್ಯಸ್ವಿದ್ದನಂ' ಇದರ ಇನ್ನೊಂದು ವ್ಯಾಖ್ಯಾನ ಹೀಗೆ ಹೇಳಬಹುದು - ನೀನು ಅಸೆ ಪಡಲು ಈ ಧನವಾದರೂ ಯಾರದ್ದು? ಎಲ್ಲವು ಆ ಪರಬ್ರಹ್ಮನದ್ದೇ  ಆಗಿರುವಾಗ ನೀನು ಯಾವುದನ್ನು ಕುರಿತು ಮೋಹ, ಲೋಭ ಮಾಡುತ್ತೀಯಾ? 


ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ .
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ .. 2..


ಕರ್ಮವನ್ನು ಮಾಡುತ್ತಲೇ ನೂರು ವರ್ಷಗಳು ಜೀವಿಸಲು ಇಚ್ಛಿಸಬೇಕು. ಕರ್ಮಫಲ ನಿನಗೆ ಅಂಟಿಕೊಳ್ಳದಿರಲು ಇದರ ಹೊರತು ನಿನಗೆ ಬೇರೆ ಮಾರ್ಗವಿಲ್ಲ.  
 
ನಾವು ವೈರಾಗ್ಯ ಹೊಂದಬೇಕು, ಬೇರೆಯವರ ಐಶ್ವರ್ಯವನ್ನು ವಾಂಚಿಸಬಾರದು. ಎಂದು ಮೊದಲನೇ ಶ್ಲೋಕ ಹೇಳಿದರೆ, ಈ ಎರಡನೇ ಶ್ಲೋಕ ನಾವು ನಮ್ಮ ಕರ್ಮವನ್ನು ಬಿಡಬಾರದು ಎನ್ನುತ್ತದೆ. 
 
ಕರ್ಮದ ಹೊರತು ನಮಗೆ ಅನ್ಯ ಮಾರ್ಗಗಳಿಲ್ಲ.  ಅತಿ ಆಸೆ ಮಾಡದೆ, ನಮ್ಮ ಕರ್ಮವನ್ನು , ಭಗವಂತನ ಆರಾಧನೆಯೆಂದು ತಿಳಿದು ಮಾಡಿದರೆ ನಮಗೆ ಕರ್ಮಫಲ ಅಂಟುವದಿಲ್ಲ . 


ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾಽಽವೃತಾಃ .
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ .. 3..

 
 ಅಜ್ಞಾನದಿಂದ ಆತ್ಮನನ್ನು ಹನನ ಮಾಡುವವರು ಅಸುರ್ಯ (ಅಸುರರ ಲೋಕ, ದುಃಖ ದಾರಿದ್ರ್ಯ ತುಂಬಿದ ಲೋಕ) ಎಂಬ ಕತ್ತಲೆಯಿಂದ ತುಂಬಿದ  ಲೋಕಕ್ಕೆ ಹೋಗುತ್ತಾರೆ.   
 
ಸ್ವಜ್ಞಾನವಿಲ್ಲದೆ, ತಪ್ಪಾದ, ಸ್ವ ಹಾನಿ ಮಾಡುವ, ಒಳ್ಳೇ ಫಲ ಕೊಡದ ಕರ್ಮಗಳನ್ನೇ   ಮಾಡುತ್ತ, ನಮಗೆ ನಾವೇ ಕೇಡು ಮಾಡಿಕೊಳ್ಳುತ್ತ ಇರುವದು ನಮ್ಮ ಆತ್ಮವನ್ನು ನಾವೇ ಕೊಂದಂತೆ.  ಅದರ ಫಲದಿಂದ ಲಭಿಸುವದು ರಾಕ್ಷಸರ ಲೋಕ, ಜ್ಞಾನದ ಪ್ರಕಾಶವಿಲ್ಲದ ಕಾರ್ಗತ್ತಲೆಯ ಲೋಕ ಮತ್ತು  ಜನ್ಮ-ಮೃತ್ಯುಗಳ ಚಕ್ರದಲ್ಲಿ ಪುನಃ ಪುನಃ ಸುತ್ತುತ್ತಲೇ ಇರುವದು. 


ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ .
ತದ್ಧಾವತೋಽನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ .. 4..

 
ಈ ಶ್ಲೋಕ ಮತ್ತು ೫ನೇ ಶ್ಲೋಕಗಳು ಆತ್ಮದ ರೂಪವನ್ನು ವಿವರಿಸುತ್ತವೆ.
 
ಆತ್ಮವು ನಿಶ್ಚಲ, ಸ್ಥಿರ, ಆದರೆ ಅದು ಮನಸ್ಸಿಗಿಂತಲೂ ತ್ವರಿತ. ಇಂದ್ರಿಯಗಳು  ಕೂಡ  ಇದನ್ನು ಹಿಡಿಯಲಾರವು. ಸ್ಥಿರವಾಗಿ ನಿಂತರೂ ಆತ್ಮವು ಎಲ್ಲರನ್ನು ಹಿಂದೆ ಹಾಕುತ್ತದೆ.  ಇದರಲ್ಲಿ ಮಾತರಿಶ್ವ  (ಎಲ್ಲವುಗಳ ಪ್ರಾಣವಾಯುವು) ಸ್ಥಿತವಾಗಿದೆ.
 

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ .
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ .. 5..


ಅದು (ಆತ್ಮವು) ಚಲಿಸುತ್ತದೆ. ಅದು ಚಲಿಸುವದಿಲ್ಲ. ಅದು ದೂರದಲ್ಲಿದೆ. ಅದು ಹತ್ತಿರದಲ್ಲಿದೆ. ಅದು ಸರ್ವರ ಒಳಗಿದೆ. ಅದು ಸರ್ವರ ಬಾಹ್ಯದಲ್ಲಿದೆ. 

 ಒಂದು ಉದಾಹರಣೆ ಹೀಗೆ ಕೊಡಬಹುದೇನೋ - ಮನಸ್ಸಿನ ನಿರ್ಧಾರದಿಂದಲೇ ನಾವು ಚಲಿಸುತ್ತೇವೆ. ಕೈ, ಕಾಲು, ಶರೀರ ಚಲಿಸುತ್ತದೆ. ಹಾಗೆಂದು ಮನಸ್ಸು ಚಲಿಸುವುದಾ? ಇಲ್ಲ. ಅದೇ ರೀತಿ ಆತ್ಮ ಕೂಡ ಚಲನೆಗೆ ಹೇತುವಾಗುತ್ತದೆಯೇ ಹೊರತು  ಅದು  ಚಲಿಸುವದಿಲ್ಲ. 

ಮೂಢರಿಗೆ, ಸಂಸಾರ ಸಾಗರದಲ್ಲಿ ಮುಳುಗಿದರವರಿಗೆ, ಕಾಮ, ಕ್ರೋಧ, ಲೋಭ, ಮದ, ಮತ್ಸರದಿಂದ ತುಂಬಿಕೊಂಡವರಿಗೆ ಆತ್ಮವು ದೂರದಲ್ಲಿದೆ. ಆದರೆ ಚಿತ್ತಶುದ್ಧಿ ಹೊಂದಿ, ಶ್ರವಣ, ಮನನ, ನಿಧಿಧ್ಯಾಸನ ಇತ್ಯಾದಿ ಕರ್ಮ ಮಾಡುತ್ತ, ಧ್ಯಾನಿಸುವವರಿಗೆ ಆತ್ಮ ಬಹಳ ಹತ್ತಿರದಲ್ಲಿದೆ. 
 
ಅತಿ ಸೂಕ್ಷ್ಮವಾದ ಆತ್ಮವು ಎಲ್ಲರ, ಎಲ್ಲವುಗಳ ಅಂತರಾಳದಲ್ಲಿ ಅಡಗಿದೆ. ಆದರೆ ಈ ಆತ್ಮವು ಸರ್ವ ವ್ಯಾಪಿಯಾಗಿ, ಎಲ್ಲವುಗಳ ಹೊರಗೂ ಸಹ ಇದೆ. 


ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ .
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ .. 6..

 
ಯಾರು ಸರ್ವಭೂತಗಳಲ್ಲಿ (ಚರಾಚರ ಜೀವಜಂತುಗಳಲ್ಲಿ) ಆತ್ಮನನ್ನು ನೋಡುತ್ತಾನೋ, ಯಾರು ಆತ್ಮನಲ್ಲಿ ಎಲ್ಲರನ್ನು ನೋಡುತ್ತಾನೋ, ಅವನು ಭಯಹೀನನಾಗುತ್ತಾನೆ ಮತ್ತು ಯಾರಿಂದಲೂ ಹೆದರಿ ಕುಗ್ಗಿ  ಕುಳಿತುಕೊಳ್ಳುವದಿಲ್ಲ, ಯಾರನ್ನು ದ್ವೇಷಿಸುವದಿಲ್ಲ. 
 
ಇಂತಹುದೇ  ವಾಕ್ಯ ಭಾಗವದ್ಗೀತೆಯಲ್ಲೂ ಬಂದಿದೆ. 
"ಸರ್ವ ಭೂತಾಸ್ತಮಾತ್ಮನಾಮ್ ಸರ್ವ ಭೂತಾನಿ ಚಾತ್ಮನಿ 
ಈಕ್ಷತೆ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ" - ಅಧ್ಯಾಯ ೬ ಶ್ಲೋಕ ೨೯


ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ .
ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ .. 7..

 
 ಮಾನವನು ಯಾವಾಗ ಸಕಲರಲ್ಲಿ ಆತ್ಮನನ್ನೇ ನೋಡತೊಡಗುತ್ತಾನೋ, ಆಗ ಅವನಲ್ಲಿ ಮೋಹ,ಶೋಕ ಇತ್ಯಾದಿಗಳು ಎಲ್ಲಿಂದ ತಾನೇ ಬರುತ್ತವೆ? ಯಾಕೆಂದರೆ ಅವನು (ಎಲ್ಲದರ) ಏಕತೆಯನ್ನೇ ನೋಡುತ್ತಾನೆ.


ಸ ಪರ್ಯಗಾಚ್ಛುಕ್ರಮಕಾಯಮವ್ರಣ-
ಮಸ್ನಾವಿರಂ ಶುದ್ಧಮಪಾಪವಿದ್ಧಂ .
ಕವಿರ್ಮನೀಷೀ ಪರಿಭೂಃ ಸ್ವಯಂಭೂ-
ರ್ಯಾಥಾತಥ್ಯತೋಽರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ .. 8..


ಅಂತಹ ಮನುಷ್ಯನು "ಯಾರು ದುಃಖದಿಂದ ಮುಕ್ತನೋ, ಸೂಕ್ಷ್ಮ ಶರೀರ ಹೊಂದಿರದವನೋ, ಅನಂತನೋ, ಸ್ಥೂಲ ಶರೀರವಿಲ್ಲದವನೋ, ಶುದ್ಧನೋ, ಪುಣ್ಯ-ಪಾಪಗಳಿಗೆ ಹೊರತಾದವನೋ, ಕವಿಯೋ , ಸರ್ವಾಂತರ್ಯಾಮಿಯೋ , ಸ್ವಯಂಭುವೊ , ಎಲ್ಲರಲ್ಲಿ ಉತ್ತಮನೋ"  ಆ   ಭಗವಂತನನ್ನು ಹೊಂದುತ್ತಾನೆ. 
 

ಅಂಧಂ ತಮಃ ಪ್ರವಿಶಂತಿ ಯೇಽವಿದ್ಯಾಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ  ರತಾಃ .. 9..


ಯಾರು ಅವಿದ್ಯೆಯನ್ನು, ಆಜ್ಞಾನವನ್ನು  ಉಪಾಸನೆ ಮಾಡುತ್ತಾರೋ (ಕರ್ಮವೊಂದನ್ನೆ ಮಾಡುತ್ತಾರೋ) ಅವರ ಕುರುಡಾಗಿಸುವ ಕಾರ್ಗತ್ತಲೆಯನ್ನು ಪ್ರವೇಶಿಸುತ್ತಾರೆ. 
 
ವಿದ್ಯೆಯನ್ನು ಉಪಾಸನೆ ಮಾಡಿಯೂ ಅದನ್ನು ತಪ್ಪಾಗಿ ತಿಳಿದು ತಪ್ಪು ಮಾರ್ಗದಲ್ಲಿ ಹೋಗುವವರು (ಜ್ಞಾನ ಮಾರ್ಗವನ್ನು ಅನುಸರಿಸುತ್ತ, ಕರ್ಮ ಮಾಡದೆ ಇರುವವರು) ಇನ್ನೂ ಘೋರವಾದ ಅಂಧಕಾರವನ್ನು ಪ್ರವೇಶಿಸುತ್ತಾರೆ. 

ಅವಿದ್ಯೆಯೆಂದರೆ ಅಜ್ಞಾನ, ಭ್ರಮೆ. ವಿದ್ಯೆಯಲ್ಲದಿರುವದು. ಅವಿದ್ಯೆ ೫ ಬಗೆಯದು - ತಾಮಸ, ಮೋಹ, ರಾಗ, ದ್ವೇಷ, ಮಿಥ್ಯಾಜ್ಞಾನ.  
 
ವಿದ್ಯೆಯೆಂದರೆ ಜ್ಞಾನ, ವಿಜ್ಞಾನ - ಆತ್ಮಜ್ಞಾನ. 


ಅನ್ಯದೇವಾಹುರ್ವಿದ್ಯಯಾಽನ್ಯದಾಹುರವಿದ್ಯಯಾ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 10..

ವಿದ್ಯೆಯಿಂದ ಬೇರೆ ಫಲಗಳು ದೊರಕುತ್ತವೆ. ಅವಿದ್ಯೆಯಿಂದ ಬೇರೆ ರೀತಿಯ ಫಲಗಳು ದೊರೆಯುತ್ತವೆ. ಈ ಮಾತನ್ನು ನಾವು ಜ್ಞಾನಿಗಳಿಂದ ಕೇಳಿದ್ದೇವೆ  ಮತ್ತು ಅವರು ನಮಗೆ ವಿವರಿಸಿದ್ದಾರೆ. 
 
ಅವಿದ್ಯೆಯ ಹಿಂದೆ ಹೋಗಿ ಕರ್ಮಗಳನ್ನು ಮಾಡಿದರೆ, ಐಶ್ವರ್ಯ, ಧನ ಕನಕ ಸಿಗಬಹುದು. ಆದರೆ ಅವೆಲ್ಲ ಕ್ಷಣಿಕ. ವಿದ್ಯೆಯನ್ನು ಸಂಪಾದಿಸಿದರೆ, ಶಾಂತಿ ಮತ್ತು ಮುಕ್ತಿಯನ್ನು ಪಡೆಯುತ್ತಾನೆ. 

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ  ಸಹ .
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಽಮೃತಮಶ್ನುತೇ .. 11..


ಯಾರು ವಿದ್ಯೆ ಮತ್ತು ಅವಿದ್ಯೆಗಳನ್ನೆರಡನ್ನು ತಿಳಿದಿರುತ್ತಾನೋ, ಅವನಿಗೆ ಅವಿದ್ಯೆಯ ಜ್ಞಾನದಿಂದ ಮೃತ್ಯುವನ್ನೇನೋ ಗೆಲ್ಲಬಹುದು. ಆದರೆ ವಿದ್ಯೆಯ ಅರಿವಿನಿಂದ ಅವನು ಮುಕ್ತಿಯನ್ನು ಪಡೆಯುತ್ತಾನೆ.  

ಅಂಧಂ ತಮಃ ಪ್ರವಿಶಂತಿ ಯೇಽಸಂಭೂತಿಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ  ರತಾಃ .. 12..


ಯಾರು ನಿರ್ಗುಣ ಪ್ರಕೃತಿಯನ್ನು (ಅಸಂಭೂತಿಯನ್ನು)  ಆರಾಧಿಸುತ್ತಾರೋ ಅವರು ಅಂಧಕಾರವನ್ನು ಪ್ರವೇಶಿಸುತ್ತಾರೆ. ಯಾರು ಸಗುಣ - ದೈವವನ್ನು ಆರಾಧಿಸುತ್ತಾರೋ ಅವರು ಇನ್ನೂ ದೊಡ್ಡ ಅಂಧಕಾರವನ್ನು ಪ್ರವೇಶಿಸುತ್ತಾರೆ. 
 

ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 13..


ಸಗುಣ ದೇವರನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ನಿರ್ಗುಣವನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ಹೀಗೆಂದು ನಮಗೆ  ಜ್ಞಾನಿಗಳಿಂದ ನಾವು ಕೇಳಿದ್ದೇವೆ.  


ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ .
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಽಮೃತಮಶ್ನುತೇ .. 14..


ಸಂಭೂತಿ (ಪೃಕೃತಿ) ಮತ್ತು ವಿನಾಶ ಎರಡನ್ನೂ ಯಾರು ಅರಿಯುತ್ತಾನೋ, ಅವನು ವಿನಾಶದ ಅರಿವಿನಿಂದ ಸಾವನ್ನು ಗೆಲ್ಲುತ್ತಾನೆ. ಸಂಭೂತಿಯ ಅರಿವಿನಿಂದ ಅಮೃತವನ್ನು ಹೊಂದುತ್ತಾನೆ.
15ರಿಂದ 18ರವರೆಗಿನ ಶ್ಲೋಕಗಳು ಪ್ರಾರ್ಥನೆಯ ಶ್ಲೋಕಗಳು. ಇವು ಬೇರೆ ಶ್ಲೋಕಗಳಿಗೆ ಅಷ್ಟು ಸಂಬಂಧಿಸಿಲ್ಲ. ಅವು ಆತ್ಮದ ವಿವರಣೆಯನ್ನು ಕೊಡುವ ಶ್ಲೋಕಗಳಲ್ಲ.
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ .
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ .. 15..

ಬಂಗಾರದ (ಮೋಹ, ಮಾಯೆಯ) ಪರದೆಯಿಂದ ಸತ್ಯದ ಮುಖವು ಮುಚ್ಚಿದೆ. ಅದನ್ನು ಸರಿಸು, ಹೇ ಸೂರ್ಯನೇ, ನಾನು ಸತ್ಯವನ್ನು ನೋಡುವೆ. 

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜಃ .
ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ
ಯೋಽಸಾವಸೌ ಪುರುಷಃ ಸೋಽಹಮಸ್ಮಿ .. 16..

ಹೇ, ಪೂಷನ್,   ಏಕಾಂಗಿಯಾಗಿ ವಿಹರಿಸುವವನೇ, ಯಮನೇ, ಸೂರ್ಯನೇ, ಪ್ರಜಾಪತಿಯ ಪುತ್ರನೇ, ನಿನ್ನ ಕಿರಣಗಳ ಸಮೂಹವನ್ನು ಸರಿಸು. ಅದರಿಂದ ನಾನು ನಿನ್ನ ಕಲ್ಯಾಣಮಯ ರೂಪವನ್ನು ನೋಡುತ್ತೇನೆ. ಆ ಪರಾತ್ಪರನಾದ ಪುರುಷನೇ ನಾನು. 


ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ .
ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ .. 17..


ನನ್ನ ಪ್ರಾಣವು ಸರ್ವವ್ಯಾಪಿಯಾದ ವಾಯುವಿನಲ್ಲಿ ಸೇರಲಿ, ಶರೀರವು ಭಸ್ಮವಾಗಲಿ. ಓಂ ಮನಸೇ, ನಿನ್ನ ಕರ್ಮಗಳನ್ನು ನೆನಪಿಸಿಕೋ. 

ಈ ಪ್ರಾರ್ಥನೆ ಸಾಧಕನು  ಶರೀರ ತ್ಯಜಿಸುವಾಗ ಮಾಡುವ ಅಂತ್ಯಕಾಲದ ಪ್ರಾರ್ಥನೆ. 


ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ .
ಯುಯೋಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂ ತೇ ನಮೌಕ್ತಿಂ ವಿಧೇಮ .. 18..


ಹೇ ಅಗ್ನಿಯೇ, ನಮ್ಮ ಎಲ್ಲ ಕರ್ಮಗಳನ್ನು ಅರಿತವನಾದ ನೀನು, ನಮ್ಮ ಕರ್ಮಫಲ ಆನಂದಿಸುಲು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗು. ನಮ್ಮಲ್ಲಿರುವ ಕುಟಿಲ ಬುದ್ಧಿಯನ್ನು ದೂರ ಮಾಡು. ನಾವು ನಮೃತೆಯಿಂದ ನಿನ್ನನ್ನು ಪ್ರಾರ್ಥಿಸುತ್ತೇವೆ. 

ಇತಿ ಈಶೋಪನಿಷತ್ ..



P.S. ಈ ಉಪನಿಷತ್ತಿನ ಇಂಗ್ಲಿಷ್ ಅನುವಾದಗಳು ಹಲವು ಕೊಂಡಿಗಳಲ್ಲಿ ಲಬ್ಧವಿವೆ. ಕನ್ನಡ ವಿಕಿಪೀಡಿಯಾದಲ್ಲಿರುವ ಲೇಖನವೂ ಚೆನ್ನಾಗಿದೆ.  

Comments

Popular posts from this blog

ತತ್ತ್ವಬೋಧ

ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ

ಮಹಿಷಾಸುರಮರ್ದಿನಿ ಸ್ತೋತ್ರ