ತತ್ತ್ವಬೋಧ

ತತ್ವಬೋಧ ಒಂದು ಸಂಸ್ಕ್ರತ ಪ್ರಕರಣ ಗ್ರಂಥ. ( ಪ್ರಕರಣ ಗ್ರಂಥವೆಂದರೆ ಪರಿಚಯಿಸುವ, ಪ್ರಾರಂಭಿಕ ಗ್ರಂಥ). ಆದಿಶಂಕರಾಚಾರ್ಯರಿಂದ ರಚಿತವಾಗಿರಬಹುದಾದ ಇದು ಗದ್ಯ ರೂಪದಲ್ಲಿದೆ.

ತತ್ವಬೋಧವು ವೇದಾಂತದ ತತ್ವಗಳನ್ನು ಅತಿ ಸಂಕ್ಷಿಪ್ತವಾಗಿ ಸಂಭಾಷಣೆಯ ರೂಪದಲ್ಲಿ ಹೇಳುತ್ತದೆ. ಅಧ್ಯಾತ್ಮದ ಮುಖ್ಯ ಪದಗಳ ಅರ್ಥ ವಿವರಿಸುತ್ತದೆ.

ಇದು 38 ಮುಖ್ಯ ಭಾಗಗಳನ್ನು ಹೊಂದಿ, ಒಟ್ಟು 103 ಪಂಕ್ತಿಗಳನ್ನು ಹೊಂದಿದೆ. ಇವುಗಳನ್ನು  ಐದು ವಿಭಾಗಗಳಲ್ಲಿ ಜೋಡಿಸಲಾಗಿದೆ:

  1. ಉಪೋದ್ಘಾತ (ಪರಿಚಯ)
  2. ಜೀವ ವಿಚಾರ
  3. ಆತ್ಮ ವಿಚಾರ
  4. ಸೃಷ್ಟಿ ವಿಚಾರ
  5. ಜೀವ ಈಶ್ವರ ವಿಚಾರ
  6. ಜ್ಞಾನಫಲ

ಪ್ರಥಮ ಹಾಗೂ ಅಂತಿಮ ವಾಕ್ಯಗಳು ಮಾತ್ರ ಶ್ಲೋಕ ರೂಪದಲ್ಲಿವೆ. ಉಳಿದೆಲ್ಲ ಸಾಲುಗಳ ಗದ್ಯ ರೂಪದಲ್ಲಿವೆ.

ಶ್ರೀಶಂಕರಭಗವತ್ಪಾದಾಚಾರ್ಯಪ್ರಣೀತಃ
ಮಂಗಲಾಚರಣ 
ವಾಸುದೇವೇಂದ್ರಯೋಗೀಂದ್ರಂ ನತ್ವಾ ಜ್ಞಾನಪ್ರದಂ ಗುರುಂ .
ಮುಮುಕ್ಷೂಣಾಂ ಹಿತಾರ್ಥಾಯ ತತ್ತ್ವಬೋಧೋಭಿಧೀಯತೇ ..
ಯೋಗಿಯರಲ್ಲಿ ಶ್ರೇಷ್ಠನಾದ, ಜ್ಞಾನವನ್ನು ನೀಡುವ ಆಧ್ಯಾತ್ಮಿಕ ಗುರು, ಭಗವಾನ್ ವಾಸುದೇವನಿಗೆ ನಾನು ನಮಸ್ಕರಿಸುತ್ತೇನೆ.
ಮುಮುಕ್ಷುಗಳ (ಮುಕ್ತಿ ಬಯಸುವವರ) ಹಿತಾರ್ಥಕ್ಕಾಗಿ, ತತ್ವಬೋಧವನ್ನು ವಿವರಿಸಲಾಗುತ್ತಿದೆ.

ಯಾವುದೇ ಶುಭ ಕಾರ್ಯವನ್ನು ನಾವು ಪ್ರಾರ್ಥನೆಯಿಂದ ಆರಂಭಿಸುತ್ತೇವಲ್ಲ.  ಈ ಪ್ರಾರ್ಥನೆಯೊಂದಿಗೆ ಲೇಖಕ ಹೇಳುತ್ತಿರುವದು ಏನೆಂದರೆ  "ಇದರ ಜ್ಞಾನದಿಂದ ನನಗೆ ಬಹಳ ಪ್ರಯೋಜನವಾಗಿದೆ. ಅದಕ್ಕಾಗಿ ನಾನು ಇತರರಿಗೂ ಇದನ್ನು ಅರಿಯಲು ಸಹಾಯ ಮಾಡಬೇಕು. "

ಸಾಧನಚತುಷ್ಟಯಸಂಪನ್ನಾಧಿಕಾರಿಣಾಂ ಮೋಕ್ಷಸಾಧನಭೂತಂ
ತತ್ತ್ವವಿವೇಕಪ್ರಕಾರಂ ವಕ್ಷ್ಯಾಮಃ .

ನಾಲ್ಕು ಗುಣಗಳನ್ನು (ಸಾಧನ ಚತುಷ್ಟಯ) ಹೊಂದಿರುವವರಿಗೆ ನಾವು ಮುಕ್ತಿಗೆ ಸಾಧನವಾದ ತತ್ವವಿವೇಕ ವಿಧಾನವನ್ನು ವಿವರಿಸುತ್ತೇವೆ,

ಈ ಪರಿಚಯದ ವಾಕ್ಯದಲ್ಲಿ  ಲೇಖಕರು ಸುಂದರವಾಗಿ ಮೂರು ವಿಷಯಗಳನ್ನು ವಿವರಿಸುತ್ತಾರೆ.

  1. ಅಧಿಕಾರಿ - ಇದನ್ನು ಕಲಿಯುವ ವಿದ್ಯಾರ್ಥಿ ಯಾವ ಅರ್ಹತೆಗಳನ್ನು ಹೊಂದಿರಬೇಕು? ಅವನು ಸಾಧನ ಚತುಷ್ಟಯ ಸಂಪನ್ನನಾಗಿರಬೇಕು.
  2. ವಿಷಯ - ಈ ಕಲಿಕೆಯ ವಿಷಯ ಏನು - ಇಲ್ಲಿ ವಿಷಯ ತತ್ವವಿವೇಕ ಅಂದರೆ ಆತ್ಮ ಜ್ಞಾನ.
  3. ಪ್ರಯೋಜನ - ಇದರನ್ನು ಕಲಿತು ನಮಗೇನು ಪ್ರಯೋಜನ? ತತ್ವಬೋಧದ ಅಧ್ಯಯನದಿಂದ ಮೋಕ್ಷ ದೊರಕುವದು.
1  ಸಾಧನ ಚತುಷ್ಟಯ
ಸಾಧನಚತುಷ್ಟಯಂ ಕಿಂ ?
ನಿತ್ಯಾನಿತ್ಯವಸ್ತುವಿವೇಕಃ .
ಇಹಾಮುತ್ರಾರ್ಥಫಲಭೋಗವಿರಾಗಃ .
ಶಮಾದಿಷಟ್ಕಸಂಪತ್ತಿಃ .
ಮುಮುಕ್ಷುತ್ವಂ ಚೇತಿ . 

 ಆತ್ಮಜ್ಞಾನದ - ವೇದಾಂತ ಜ್ಞಾನವನ್ನು ಸಂಪಾದಿಸಲು ನಾಲ್ಕು ಸಾಧನಗಳು ಯಾವುವು?

  • ವಿವೇಕ - ಯಾವುದು ಶಾಶ್ವತ, ಯಾವುದು ಅಶಾಶ್ವತ ಎಂದು ಅರಿಯುವ ವಿವೇಚನೆ
  • ವಿರಾಗ - ಇಹದ ಮತ್ತು ಪರದ ಯಾವುದೇ ರೀತಿಯ ಭೋಗದಲ್ಲಿ ನಿರ್ಲಿಪ್ತತೆ. ಇಂದ್ರಿಯ ಸುಖದ ಬಗ್ಗೆ ಗೀಳು, ಹಂಬಲ, ಹುಚ್ಚುತನ ಇಲ್ಲದಿರುವದು
  • ಶಮಾದಿ ಸಂಪತ್ತಿ - ಸಮಚಿತ್ತತೆ ಇತ್ಯಾದಿ  ಆರು ರೀತಿಯ ಶಿಸ್ತು.
  • ಮುಮುಕ್ಷತ್ವ - ಮುಕ್ತಿಯ ತೀವ್ರ ಬಯಕೆ.
 ಈ ನಾಲ್ಕು ಸಾಧನಗಳು ನಿಮ್ಮಲ್ಲಿ ಇಲ್ಲದಿದಲ್ಲಿ? ಇಲ್ಲದಿದ್ದಲ್ಲಿ, ಅವನ್ನು ಪ್ರಯತ್ನಪೂರ್ವಕ ಬೆಳೆಸಿಕೊಳ್ಳಬಹುದು.
1.1 ವಿವೇಕ (Discrimination)
ನಿತ್ಯಾನಿತ್ಯವಸ್ತುವಿವೇಕಃ ಕಃ ?
ನಿತ್ಯವಸ್ತ್ವೇಕಂ ಬ್ರಹ್ಮ ತದ್ವ್ಯತಿರಿಕ್ತಂ ಸರ್ವಮನಿತ್ಯಂ .
ಅಯಮೇವ ನಿತ್ಯಾನಿತ್ಯವಸ್ತುವಿವೇಕಃ .
 
ನಿತ್ಯ ಹಾಗೂ ಅನಿತ್ಯ ವಸ್ತುಗಳ ಭೇದ  ಅರಿಯುವ ವಿವೇಕ ಯಾವುದು?
ಒಂದೇ ಒಂದು  ಶಾಶ್ವತ ವಸ್ತುವೆಂದರೆ ಬ್ರಹ್ಮ, ಮತ್ತು ಅದನ್ನು ಹೊರತುಪಡಿಸಿ ಉಳಿದ ಎಲ್ಲವೂ ಅಶಾಶ್ವತ, ಅನಿತ್ಯ.
ಇದೇ ನಿತ್ಯ ಮತ್ತು ಅನಿತ್ಯ ವಸ್ತುಗಳ ಬಗೆಗಿನ ವಿವೇಚನೆ.
ಯಾವುದು ಅಶಾಶ್ವತ?  ಕಾರಣ, ಅವಯವ, ದೃಶ್ಯ, ಉತ್ಪತ್ತಿ-ನಾಶ ಈ ನಾಲ್ಕರಲ್ಲಿ ಯಾವುದೊಂದು ಇದ್ದರೂ ಆ ವಸ್ತು ಅಶಾಶ್ವತ.
1.2 ವೈರಾಗ್ಯ(Dispassion)
ವಿರಾಗಃ ಕಃ ?
ಇಹಸ್ವರ್ಗಭೋಗೇಷು ಇಚ್ಛಾರಾಹಿತ್ಯಂ
.
ವೈರಾಗ್ಯ ಯಾವುದು?

ಈ ಲೋಕದಲ್ಲಿ ಮತ್ತು ಸ್ವರ್ಗ ಲೋಕದಲ್ಲಿ ನಮ್ಮ ಕರ್ಮದ ಫಲವನ್ನು ಅನುಭವಿಸುವ ಬಯಕೆ ಇಲ್ಲದಿರುವದು. ಭೋಗದಲ್ಲಿ ಇಚ್ಛೆ ಇಲ್ಲದಿರುವದು.

ಇಚ್ಛಾರಾಹಿತ್ಯಂ -  ರಾಗವಿಲ್ಲದಿರುವದು (ವಿ+ರಾಗ),, ಇಚ್ಛೆ ಇಲ್ಲದಿರುವದು ವೈರಾಗ್ಯ. ಯಾವುದೇ ಭೋಗದಲ್ಲಿ, ಇಂದ್ರಿಯ ವಿಷಯಗಳಲ್ಲಿ, ಅಥವಾ ಸ್ವರ್ಗದಲ್ಲಿ ಸಿಗಬಹುದಾದ ಭೋಗದಲ್ಲಿ ಆಸಕ್ತಿ ಇಲ್ಲದಿರುವದು ವೈರಾಗ್ಯ.

 1.3 ಷಟ್ಕ ಸಂಪತ್ತಿ
ಶಮಾದಿಸಾಧನಸಂಪತ್ತಿಃ ಕಾ ?
ಶಮೋ ದಮ ಉಪರಮಸ್ತಿತಿಕ್ಷಾ ಶ್ರದ್ಧಾ ಸಮಾಧಾನಂ ಚ ಇತಿ . 
ಶಮಾ ಇತ್ಯಾದಿ ಸಾಧನ ಸಂಪತ್ತುಗಳು ಯಾವವು?
ಶಮ, ದಮ, ಉಪರಮ, ತಿತೀಕ್ಷಾ, ಶ್ರದ್ಧಾ, ಸಮಾಧಾನ ಇವು ಆರು ಸಾಧನ ಸಂಪತ್ತುಗಳು. 
1.3.1 ಶಮ
ಶಮಃ ಕಃ ?
ಮನೋನಿಗ್ರಹಃ . 
ಶಮ ಎಂದರೆ ಮನೋನಿಗ್ರಹ. 
ಶಮ - ಅಂದರೆ ಮನೋನಿಗ್ರಹವನ್ನು ಸಾಧಿಸಲು ನಮ್ಮ ಮನದಲ್ಲಿ ಬರುವ ಎಲ್ಲಾ ಯೋಚನೆಗಳನ್ನು ಗಮನಿಸಬೇಕು, ಮತ್ತು ನಮ್ಮ ಗುರಿ ಸಾಧಿಸಲು ಈ ಯೋಚನೆ ಅನುಕೂಲಕರವೇ ಎಂಬುದನ್ನು ತಿಳಿಯಬೇಕು. 
ಮೊಟ್ಟ ಮೊದಲು ನಮ್ಮ ಮನಸ್ಸು ಯಾವ ಗುರಿ ಸಾಧಿಸಬಯಸುತ್ತದೆ ಎಂದು ಅರಿತುಕೊಳ್ಳಬೇಕು. ಆ ಗುರಿಯನ್ನು ವಿವೇಚಿಸಿದ ನಂತರ ಪೂರ್ಣ ಹೃದಯದಿಂದ ನಮ್ಮ ಎಲ್ಲಾ ಗಮನವು ಆ ಗುರಿಯ ಮೇಲೆ ಮಾತ್ರ ಇರಬೇಕು. ಬಲವಾದ ಇಚ್ಛಾಶಕ್ತಿ ಆರಂಭದ ದಿನಗಳಲ್ಲಿ ಸಹಾಯಕವಾಗುವದು. ನಮ್ಮ ಗುರಿಯ ಬಗ್ಗೆ ಪ್ರೀತಿ ಮತ್ತು ಸರಿಯಾದ ತಿಳುವಳಿಕೆ ಇರಬೇಕು.

ಶಮೆಯನ್ನು ಸಾಧಿಸಲು ಭಕ್ತಿ, ಧ್ಯಾನ ಅಥವಾ ಪ್ರಯಾಶ್ಚಿತ್ತ ಇತ್ಯಾದಿಗಳು ಆರಂಭದಲ್ಲಿ ಸಹಾಯಕವಾಗುತ್ತವೆ.
      
1.3.2 ದಮ
ದಮಃ ಕಃ ?
ಚಕ್ಷುರಾದಿಬಾಹ್ಯೇಂದ್ರಿಯನಿಗ್ರಹಃ .
 
ದಮ ಎಂದರೆ ಕಣ್ಣು,ಕಿವಿ ಇತ್ಯಾದಿ ಹತ್ತು ಬಾಹ್ಯ ಇಂದ್ರಿಯಗಳ ನಿಗ್ರಹ. 

ಇಂದ್ರಿಯಗಳನ್ನು ಹತ್ತಿಕ್ಕುವ ಬದಲು ಅವನ್ನು ಪಳಗಿಸಬೇಕು. ನಾವು ತೋರುವ ದಿಕ್ಕಿನಲ್ಲಿ ಇಂದ್ರಿಯಗಳು ಹೋಗಬೇಕು.  

ಇಂದ್ರಿಯಗಳು ನಮ್ಮ ಮನದ ಬಾಗಿಲುಗಳಂತೆ - ಯಾವ ಶಬ್ದ, ಯಾವ ರೂಪ, ಯಾವ ವಾಸನೆ ನಮ್ಮೊಳಗೆ ಬರಬೇಕೆಂಬುದನ್ನು ಇಂದ್ರಿಯಗಳು ನಿರ್ಧರಿಸುತ್ತವೆ. ಇಂದ್ರಿಯಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಬೇಕಾದದ್ದು ಮತ್ತು ಬೇಡವಾದದ್ದು ಎಲ್ಲಾ ನಮ್ಮ ಮನಸ್ಸನ್ನು ಪ್ರವೇಶಿಸುತ್ತವೆ. 

ಇದರ ಬಗ್ಗೆ ಕಠೋಪನಿಷತ್ತಿನಲ್ಲಿ ಒಂದು ಒಳ್ಳೆ ಉಪಮೆಯಿದೆ - ನಮ್ಮ ಜೀವನದ ರಥದಲ್ಲಿ ಬುದ್ಧಿ ಸಾರಥಿ, ಮನಸ್ಸು ಲಗಾಮು ಹಾಗೂ ಇಂದ್ರಿಯಗಳು ಕುದುರೆಗಳು. ಬುದ್ಧಿಯ ಮನದ ಲಗಾಮಿನಿಂದ ಇಂದ್ರಿಯಗಳೊಂಬ ಕುದುರೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. 

ಶಮ ಮತ್ತು ದಮ ಬುದ್ಧಿಯೊಂದಿಗೆ ಕೆಲಸ ಮಾಡಿ ತಪ್ಪು ಪ್ರಚೋದನೆಗಳಿಂದ ನಾವು ದಾರಿಗೆಡದಂತೆ ನೋಡಿಕೊಳ್ಳಬೇಕು.

(೧೦ ಇಂದ್ರಿಯಗಳು ಯಾವವೆಂದರೆ  -  
೫ ಜ್ಞಾನೇಂದ್ರಿಯಗಳು - ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ
೫ ಕರ್ಮೇಂದ್ರಿಯಗಳು - ಬಾಯಿ, ಕೈ, ಕಾಲು, ಗುದ, ಜನನೇಂದ್ರಿಯ)
1.3.3 ಉಪರಮ / ಉಪರತಿ
ಉಪರಮಃ ಕಃ ?
ಸ್ವಧರ್ಮಾನುಷ್ಠಾನಮೇವ . 
ಉಪರಮ ಎಂದರೆ ಸ್ವಧರ್ಮ ಅನುಸರಿಸುವದು. 

ಉಪರಮ ಎಂದರೆ ಸ್ವಧರ್ಮಾನುಚರಣೆ. ಸ್ವಧರ್ಮ - ಅದು ವಿದ್ಯಾರ್ಥಿಯ ಧರ್ಮವಾದ ವಿದ್ಯಾರ್ಜನೆ ಇರಬಹುದು, ಅಥವಾ ನೌಕರಿ ಮಾಡುವವನ ಧರ್ಮವಾದ ಅವನ ಕಾರ್ಯಾಲಯದ ಕೆಲಸವಿರಬಹುದು, ಬೇರೆ ಏನಾದರೂ ಇರಬಹುದು. ಆ ಸ್ವಧರ್ಮ ನಿಷ್ಠೆಯಿಂದ, ಪೂಜೆಯಂತೆ, ಪೂರ್ಣ ತತ್ಪರತೆಯಿಂದ ಮಾಡುವದು ಉಪರಮ. ಸ್ವಧರ್ಮ ಅನುಸರಿಸುವದರಿಂದ ವ್ಯಕ್ತಿಯು ತನ್ನ ಆಸೆ ಮತ್ತು ತಿರಸ್ಕಾರಗಳ ಮೇಲೆ ನಿಯಂತ್ರಣ ಸಾಧಿಸುತ್ತಾನೆ. ಯಾವುದು ಪ್ರಿಯವೋ ಅದರನ್ನು ಮಾಡುವ ಬದಲು ಯಾವುದು ಅವಶ್ಯಕವೋ ಆ ಕಾರ್ಯವನ್ನು ಮಾಡುತ್ತಾನೆ.

ಯಾವುದೇ ಸಮಯದಲ್ಲಿ ನಮ್ಮ ಸ್ವಧರ್ಮವನ್ನು, ನಮ್ಮ ಕರ್ತವ್ಯವನ್ನು ಪರಿಪಾಲಿಸುವದು ಉಪರಮ. 

1.3.4 ತಿತೀಕ್ಷಾ
ತಿತಿಕ್ಷಾ ಕಾ ?
ಶೀತೋಷ್ಣಸುಖದುಃಖಾದಿಸಹಿಷ್ಣುತ್ವಂ . 
ತಿತೀಕ್ಷಾ ಎಂದರೆ ಶೀತ, ಉಷ್ಣ, ಸುಖ, ದುಃಖ ಇತ್ಯಾದಿಗಳನ್ನು ಸಹಿಸುಕೊಳ್ಳವದು. 

ಶಂಕರಾಚಾರ್ಯರು ಹೇಳುತ್ತಾರೆ - ತಿತೀಕ್ಷಾ ಎಂದರೆ ಸಹನಶೀಲತೆ. ಸುಖ-ದುಃಖಗಳಲ್ಲಿ, ಶೀತ-ಉಷ್ಣಗಳಲ್ಲಿ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಗೊಣಗದೇ, ಧೃತಿಗೆಡದೇ, ಇತರರನ್ನು ದೂಷಿಸದೇ, ಶಾಂತ ಚಿತ್ತದಿಂದ ಎಲ್ಲವನ್ನೂ ಸಹಿಸುವದು ತಿತೀಕ್ಷಾ. ತಿತೀಕ್ಷೆಯಿರುವ ವ್ಯಕ್ತಿ  ಅನುಕೂಲ ಮತ್ತು ಪ್ರತಿಕೂಲ ಸಂದರ್ಭಗಳನ್ನು ನಿರ್ಭೀತಿಯಿಂದ ಸ್ವೀಕರಿಸುತ್ತಾನೆ,  ತಪ್ಪಾಗಿದ್ದನ್ನು ಕಂಡುಹಿಡಿದು ಅದನ್ನು ಸರಿಪಡಿಸುತ್ತಾನೆ. 

ಧ್ಯಾನ, ಆತ್ಮಾವಲೋಕನಗಳ ಅಭ್ಯಾಸದ ಮೂಲಕ ಮತ್ತು ಅನುಭವಗಳ ಕ್ಷಣಿಕತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ತಿತೀಕ್ಷೆಯನ್ನು ಬೆಳೆಸಿಕೊಳ್ಳಬಹುದು.

1.3.5 ಶ್ರದ್ಧಾ
ಶ್ರದ್ಧಾ ಕೀದೃಶೀ ?
ಗುರುವೇದಾಂತವಾಕ್ಯಾದಿಷು ವಿಶ್ವಾಸಃ ಶ್ರದ್ಧಾ .
 
ಶ್ರದ್ಧೆ ಎಂದರೆ ಗುರುವಿನ ಹಾಗೂ ವೇದಾಂತಗಳ ಬೋಧನೆಯಲ್ಲಿ ವಿಶ್ವಾಸವಿಡುವುದು. 

ಶ್ರದ್ಧೆ ಎಂದರೆ ನಂಬಿಕೆ - ಗುರುವಿನ ವಾಕ್ಯಗಳಲ್ಲಿ, ವೇದಾಂತದ ಬೋಧನೆಯಲ್ಲಿ ನಂಬಿಕೆ. ಅದು ಅಂಧಶ್ರದ್ಧೆಯಲ್ಲ. ಮುಕ್ತಮನಸ್ಸಿನ ವಿಮರ್ಶಾತ್ಮಕವಲ್ಲದ ನಂಬಿಕೆ. 

ನಮಗೆ ನಂಬಿಕೆಯಿಲ್ಲದಿದ್ದರೆ ನಾವೇನನ್ನೂ ಮಾಡಲಾಗುವದಿಲ್ಲ. ನಂಬಿಕೆಯಿಲ್ಲದೆ ನಾವು ವಾಹನದಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಂಬಿಕೆಯಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಯಾವ ಕೆಲಸಕ್ಕಾದರೂ ನಂಬಿಕೆ ಬೇಕೇ ಬೇಕು.

ಶ್ರದ್ಧೆ ಅಥವಾ ನಂಬಿಕೆಯ ಸುಂದರ ಉದಾಹರಣೆ - ಪಕ್ಷಿ ಬೆಳಗಾಗುವ ಮೊದಲೇ - ಸೂರ್ಯ ಹುಟ್ಟುವ ಮೊದಲೇ, ಸೂರ್ಯನು ಬರುವನೆಂದು ಹಾಡಲು ಆರಂಭಿಸುತ್ತದೆ.

1.3.6 ಸಮಾಧಾನ
ಸಮಾಧಾನಂ ಕಿಂ ?
ಚಿತ್ತೈಕಾಗ್ರತಾ . 
ಸಮಾಧಾನ ಎಂದರೆ ಮನಸ್ಸಿನ ಏಕಾಗ್ರತೆ . 
ಸಮಾಧಾನ ನಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯ.
ಶಮ, ದಮ,  ಉಪರಮ, ತಿತೀಕ್ಷಾ, ಶ್ರದ್ಧಾ, ಸಮಾಧಾನ ಈ ಆರೂ ಸಾಧನ ಸಂಪತ್ತುಗಳು. 
1.4 ಮುಮುಕ್ಷುತ್ವ
ಮುಮುಕ್ಷುತ್ವಂ ಕಿಂ ?
ಮೋಕ್ಷೋ ಮೇ ಭೂಯಾದ್ ಇತಿ ಇಚ್ಛಾ .

ಮುಮುಕ್ಷುತ್ವ ಎಂದರೆ ಮೋಕ್ಷ ದೊರಕಲಿ ಎಂಬ ತೀವ್ರ ಇಚ್ಛೆ. 

ಮುಮುಕ್ಷತ್ವವು ಮೋಕ್ಷವನ್ನು ಪಡೆಯುಬೇಕೆಂಬ ಬಲವಾದ ಮತ್ತು ತೀವ್ರ ಆಸೆಯನ್ನು ಸೂಚಿಸುತ್ತದೆ. ಇದು ಜ್ಞಾನ ಮತ್ತು ಅರಿವಿನ ಅನ್ವೇಷಣೆಗೆ ಕಾರಣವಾಗುತ್ತದೆ.

ಮುಮುಕ್ಷತ್ವ - ಈ ಶಬ್ದ ಮುಮುಕ್ಷು ಎಂಬ ಶಬ್ದದಿಂದ ಬಂದಿದೆ. ಮೋಕ್ಷ ಬಯಸುವವನು ಮುಮುಕ್ಷು. 

ಏತತ್ ಸಾಧನಚತುಷ್ಟಯಂ .
ವಿವೇಕ, ವಿರಾಗ, ಷಟ್ಸಂಪತ್ತು ಮತ್ತು ಮುಮುಕ್ಷತ್ವ ಇವು ಸಾಧನ ಚತುಷ್ಟಯಗಳು.
ತತಸ್ತತ್ತ್ವವಿವೇಕಸ್ಯಾಧಿಕಾರಿಣೋ ಭವಂತಿ . 
ಸಾಧನ ಚತುಷ್ಟಯಗಳನ್ನು ಪಡೆದವರು ತತ್ವವಿವೇಕದ ಅರ್ಹರಾಗುತ್ತಾರೆ. 

ಈ ನಾಲ್ಕು ಸಾಧನಗಳನ್ನು ಮನನ ಮಾಡಿಕೊಂಡು ಸ್ವಾಧೀನಪಡಸಿಕೊಂಡಾದ ನಂತರವೇ ತತ್ವವಿವೇಕವನ್ನು ತಿಳಿಯಲು ಅರ್ಹತೆ ಪಡೆಯುತ್ತಾರೆ. 

2 ತತ್ವ ವಿವೇಕ 

ತತ್ತ್ವವಿವೇಕಃ ಕಃ ?
ಆತ್ಮಾ ಸತ್ಯಂ ತದನ್ಯತ್ ಸರ್ವಂ ಮಿಥ್ಯೇತಿ .
ಆತ್ಮಾ ಕಃ ?
ಸ್ಥೂಲಸೂಕ್ಷ್ಮಕಾರಣಶರೀರಾದ್ವ್ಯತಿರಿಕ್ತಃ ಪಂಚಕೋಶಾತೀತಃ ಸನ್
ಅವಸ್ಥಾತ್ರಯಸಾಕ್ಷೀ ಸಚ್ಚಿದಾನಂದಸ್ವರೂಪಃ ಸನ್
ಯಸ್ತಿಷ್ಠತಿ ಸ ಆತ್ಮಾ . 
ತತ್ವವಿವೇಕ ಯಾವುದು?
ಆತ್ಮವೇ ಸತ್ಯ ಮತ್ತು ಅದರ ಹೊರತಾಗಿ ಅನ್ಯವೆಲ್ಲ ಸುಳ್ಳು ಎಂಬ ಜ್ಞಾನ ತತ್ವವಿವೇಕ.

ವೇದಾಂತದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ಒಂದು ಆಂತರಿಕ ಸಾರವಿರುತ್ತದೆ, ಅದು ಅಮರವಾಗಿದೆ. ಈ ಅಮರ ಆಂತರಿಕ ಸಾರವು  ಕಣ್ಣುಗಳಿಗೆ ಗೋಚರಿಸುವುದಿಲ್ಲ;  ಇದೇ ಆತ್ಮ.

ಆತ್ಮ ಯಾವುದು? 

ಪಂಚಕೋಶಗಳನ್ನು ಮೀರಿ, ಸ್ಥೂಲ ಮತ್ತು ಸೂಕ್ಷ್ಮ ಶರೀರಗಳಿಂದ ಬೇರೆವಾಗಿರುವ, ಜಾಗೃತ, ನಿದ್ರೆ,, ಸುಷುಪ್ತಿ ಅವಸ್ಥೆಗಳಿಗೆ ಸಾಕ್ಷಿಯಾಗಿರುವ ಮತ್ತು ಸಚ್ಚಿದಾನಂದದ ಸ್ವರೂಪವಾಗಿರುವುದು ಯಾವುದೋ ಅದೇ ಆತ್ಮ.

ಅಮರ, ಅಗೋಚರ, ಜೀವಿಯ ಆಂತರಿಕ ಸತ್ವವೇ ಆತ್ಮ 
ಅನಾತ್ಮದ ಪದರಗಳು ಯಾವವೆಂದರೆ ಪಂಚಕೋಶಗಳು, ಮೂರು ಶರೀರಗಳು, ಮೂರು ಅವಸ್ಥೆಗಳು. 
ಆತ್ಮ ಇವು ಯಾವವೂ ಅಲ್ಲ. ಇವೆಲ್ಲವುಗಳಿಂದ ಅತೀತವಾಗಿರುವ ಸಚ್ಚಿದಾನಂದ ಸ್ವರೂಪವೇ ಆತ್ಮ.  
2.1 THE FIVE SHEATHS (Pancha Kosa)
2.2 SHARIRA TRAYA (The Three Bodies)
2.3 AVASTHA TRAYA (The Three States)
2.4 SATCHIDANANDA SVARUPA (Existence-Knowledge-Bliss)
3 ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳು
3.1 ಸ್ಥೂಲಶರೀರಂ 
ಸ್ಥೂಲಶರೀರಂ ಕಿಂ ?
ಪಂಚೀಕೃತಪಂಚಮಹಾಭೂತೈಃ ಕೃತಂ ಸತ್ಕರ್ಮಜನ್ಯಂ
ಸುಖದುಃಖಾದಿಭೋಗಾಯತನಂ ಶರೀರಂ
ಅಸ್ತಿ ಜಾಯತೇ ವರ್ಧತೇ ವಿಪರಿಣಮತೇ ಅಪಕ್ಷೀಯತೇ ವಿನಶ್ಯತೀತಿ
ಷಡ್ವಿಕಾರವದೇತತ್ಸ್ಥೂಲಶರೀರಂ . 
ಸ್ಥೂಲ ಶರೀರ ಎಂದರೇನು?

ಇದು ಪಂಚೀಕೃತವಾದ (ಸೂಕ್ಷ್ಮ ರೂಪದಿಂದ ಸ್ಥೂಲ ರೂಪಕ್ಕೆ ಮಾರ್ಪಾಟ ಹೊಂದುವದು), ಪಂಚಮಹಾಭೂತಗಳಿಂದ ಮಾಡಿದ, ಸತ್ಕರ್ಮಗಳಿಂದ ಉಂಟಾದ, ಸುಖ-ದುಃಖಗಳನ್ನು ಅನುಭವಿಸುವ ಸ್ಥಳವಾದ, ಇರುವಿಕೆ-ಹುಟ್ಟು, ಬೆಳೆವಣಿಗೆ, ಪರಿಪಕ್ವತೆ, ಕೊಳೆತು ನಾಶವಾಗುವಿಕೆ ಈ ಆರು ರೂಪಾಂತರವಾಗುವ ಶರೀರವೇ ಸ್ಥೂಲ ಶರೀರ .

ಸ್ಥೂಲಶರೀರ ನಾವು ನೋಡುವ ಭೌತಿಕ ಶರೀರ. ಇದು ಪಂಚ ಮಹಾಭೂತಗಳಿಂದ ಮಾಡಲ್ಪಟ್ಟಿದೆ. ನಮ್ಮ ಕೈ, ಕಾಲು, ತಲೆ ಇತ್ಯಾದಿಗಳಿರುವ ಶರೀರ ಸ್ಥೂಲ ಶರೀರ. ಇದು ಸದಾ ಬದಲಾವಣೆ ಹೊಂದುತ್ತಲೇ ಇರುತ್ತದೆ.

ಪಂಚಮಹಾಭೂತಗಳು ಯಾವವೆಂದರೆ ಗಾಳಿ,ನೀರು, ಆಕಾಶ, ಭೂಮಿ, ಅಗ್ನಿ. ದೇಹದ ಘನರೂಪ ಆಕಾಶವನ್ನು(ಜಾಗವನ್ನು) ಆವರಿಸಿದೆ, ಉಸಿರಾಟ ವಾಯುವಿನ ರೂಪ, ಶರೀರದ ಬೆಚ್ಚಗಿರುವಿಕೆ ಅಗ್ನಿಯ ರೂಪ, ಶರೀರದಲ್ಲಿರುವ ನೀರು ಜಲ ಹಾಗೂ ಉಳಿದ ಘನಾಂಶಗಳು ಭೂಮಿ.

ಪಂಚ ಮಹಾಭೂತಗಳ ಸಂಯೋಜನೆಯಿಂದ ಸ್ಥೂಲಶರೀರ ಮಾಡಲ್ಪಟ್ಟಿದೆ. ಇದು  ನಶ್ವರ. ಇದು ಹುಟ್ಟು, ಬೆಳವಣಿಗೆ, ರೋಗ-ರುಜಿನ, ವೃದ್ಧಾಪ್ಯ, ಸಾವು ಇವೆಲ್ಲವುಗಳನ್ನು ಅನುಭವಿಸುತ್ತದೆ. 

3.2 ಸೂಕ್ಷ್ಮ ಶರೀರ
ಸೂಕ್ಷ್ಮಶರೀರಂ ಕಿಂ ?
ಅಪಂಚೀಕೃತಪಂಚಮಹಾಭೂತೈಃ ಕೃತಂ ಸತ್ಕರ್ಮಜನ್ಯಂ
ಸುಖದುಃಖಾದಿಭೋಗಸಾಧನಂ
ಪಂಚಜ್ಞಾನೇಂದ್ರಿಯಾಣಿ ಪಂಚಕರ್ಮೇಂದ್ರಿಯಾಣಿ ಪಂಚಪ್ರಾಣಾದಯಃ
ಮನಶ್ಚೈಕಂ ಬುದ್ಧಿಶ್ಚೈಕಾ
ಏವಂ ಸಪ್ತದಶಾಕಲಾಭಿಃ ಸಹ ಯತ್ತಿಷ್ಠತಿ ತತ್ಸೂಕ್ಷ್ಮಶರೀರಂ . 
ಸೂಕ್ಷ್ಮ ಶರೀರ ಎಂದರೇನು?

ಪಂಚೀಕೃತವಾಗದ, ಪಂಚಮಹಾಭೂತಗಳಿಂದ ಮಾಡಲ್ಪಟ್ಟ, ಸತ್ಕರ್ಮಗಳಿಂದ ಜನ್ಯವಾದ, ಸುಖ ಮತ್ತು ದುಃಖವನ್ನು ಅನುಭವಿಸುವ ಸಾಧನವಾದ, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣೇಂದ್ರಿಯಗಳು , ಮನಸ್ಸು, ಬುದ್ಧಿ. ಹೀಗೆ ಹದಿನೇಳು ಭಾಗಗಳಿಂದ ಕೂಡಿರುವ ದೇಹವನ್ನು ಸೂಕ್ಷ್ಮ ಶರೀರ ಎಂದು ಕರೆಯಲಾಗುತ್ತದೆ.

ಸೂಕ್ಷ್ಮ ಶರೀರವೆಂದರೆ  ಮನಸ್ಸು ಮತ್ತು ಜೀವ ಶಕ್ತಿಯಿಂದ ಮಾಡಲ್ಪಟ್ಟ ಅರೆಭೌತಿಕ ಶರೀರ. ಇದನ್ನು ಲಿಂಗಶರೀರವೆಂದೂ ಹೇಳುತ್ತಾರೆ. ಈ ಶರೀರ  ನಮ್ಮನ್ನು ಜೀವಂತವಾಗಿಡುತ್ತದೆ.   

ಮನಸ್ಸನ್ನು ಹೊಂದಿರುವ ಈ ಸೂಕ್ಷ್ಮ ಶರೀರ ನಮ್ಮ ಎಲ್ಲ ಭಾವನೆಗಳು, ಯೋಚನೆಗಳು, ನೆನಪುಗಳ ವಾಸಸ್ಥಾನ. ಇದು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. 

ಸೂಕ್ಷ್ಮ ಶರೀರವು ನಮಗೆ ನಮ್ಮ ಪ್ರಾರಬ್ಧ ಕರ್ಮದ ಪ್ರಕಾರ  ವಿಭಿನ್ನ ಪ್ರತಿಭೆಗಳು, ಬುದ್ಧಿಶಕ್ತಿ, ತೇಜಸ್ಸು, ಪ್ರಭಾವಲಯ, ಕಾಂತೀಯತೆ, ಕೌಶಲ್ಯಗಳು, ಯೋಗ್ಯತೆಗಳು, ಮನೋಧರ್ಮಗಳು ಇತ್ಯಾದಿಗಳನ್ನು ಕೊಡುತ್ತದೆ.

3.2.1 ಜ್ಞಾನೇಂದ್ರಿಯಗಳು
ಶ್ರೋತ್ರಂ ತ್ವಕ್ ಚಕ್ಷುಃ ರಸನಾ ಘ್ರಾಣಂ ಇತಿ ಪಂಚ ಜ್ಞಾನೇಂದ್ರಿಯಾಣಿ .
ಶ್ರೋತ್ರಸ್ಯ ದಿಗ್ದೇವತಾ .
ತ್ವಚೋ ವಾಯುಃ .
ಚಕ್ಷುಷಃ ಸೂರ್ಯಃ .
ರಸನಾಯಾ ವರುಣಃ .
ಘ್ರಾಣಸ್ಯ ಅಶ್ವಿನೌ .
ಇತಿ ಜ್ಞಾನೇಂದ್ರಿಯದೇವತಾಃ .
ಶ್ರೋತ್ರಸ್ಯ ವಿಷಯಃ ಶಬ್ದಗ್ರಹಣಂ .
ತ್ವಚೋ ವಿಷಯಃ ಸ್ಪರ್ಶಗ್ರಹಣಂ .
ಚಕ್ಷುಷೋ ವಿಷಯಃ ರೂಪಗ್ರಹಣಂ .
ರಸನಾಯಾ ವಿಷಯಃ ರಸಗ್ರಹಣಂ .
ಘ್ರಾಣಸ್ಯ ವಿಷಯಃ ಗಂಧಗ್ರಹಣಂ ಇತಿ . 

ಕಿವಿ, ಚರ್ಮ, ಕಣ್ಣು, ನಾಲಿಗೆ ಹಾಗೂ ಮೂಗು ಇವು ಜ್ಞಾನೇಂದ್ರಿಯಗಳು.

 ನಮಗೆ ಹೊರ ಪ್ರಪಂಚದ ಜ್ಞಾನ ಕೊಡುವವು ಜ್ಞಾನೇಂದ್ರಿಯಗಳು. ಬೇರೆ ಬೇರೆ ಜ್ಞಾನೇಂದ್ರಿಯಗಳು ಬೇರೆ ಬೇರೆ ದೇವತೆಗಳಿಂದ ನಿಯಂತ್ರಿಸಲ್ಪಡುತ್ತದೆ.

ಕಿವಿಯ ಅಧಿದೇವತೆ ಆಕಾಶ, 
ಚರ್ಮದ ದೇವತೆ ವಾಯು, 
ಕಣ್ಣುಗಳ ದೇವತೆ ಸೂರ್ಯ, 
ನಾಲಿಗೆಯ ದೇವತೆ ಜಲ, 
ಮೂಗಿನ ದೇವತೆ ಅಶ್ವಿನಿ ಕುಮಾರರು. 

ಕಿವಿಯು ಶಬ್ದವನ್ನು ಗ್ರಹಣ ಮಾಡುತ್ತದೆ. ಚರ್ಮ ಸ್ವರ್ಶದ ಗ್ರಹಣ ಮಾಡುತ್ತದೆ. ಕಣ್ಣು ರೂಪವನ್ನು ಗ್ರಹಣ ಮಾಡುತ್ತದೆ. ನಾಲಿಗೆ ರಸ ಗ್ರಹಣ ಮಾಡುತ್ತದೆ. ಮೂಗು ಗಂಧವನ್ನು (ವಾಸನೆಯನ್ನು) ಗ್ರಹಣ ಮಾಡುತ್ತದೆ.

ಜ್ಞಾನೇಂದ್ರಿಯಗಳು ಹೊರ ಪ್ರಪಂಚದೊಂದಿಗೆ ವ್ಯವಹರಿಸುತ್ತವೆ ಮತ್ತು ಮನಸ್ಸಿಗೆ ಹೊರ ಪ್ರಪಂಚದ ಜ್ಞಾನ ನೀಡುತ್ತವೆ.  

3.2.2 ಕರ್ಮೇಂದ್ರಿಯಗಳು
ವಾಕ್ಪಾಣಿಪಾದಪಾಯೂಪಸ್ಥಾನೀತಿ ಪಂಚಕರ್ಮೇಂದ್ರಿಯಾಣಿ .
ವಾಚೋ ದೇವತಾ ವಹ್ನಿಃ .
ಹಸ್ತಯೋರಿಂದ್ರಃ .
ಪಾದಯೋರ್ವಿಷ್ಣುಃ .
ಪಾಯೋರ್ಮೃತ್ಯುಃ .
ಉಪಸ್ಥಸ್ಯ ಪ್ರಜಾಪತಿಃ .
ಇತಿ ಕರ್ಮೇಂದ್ರಿಯದೇವತಾಃ .
ವಾಚೋ ವಿಷಯಃ ಭಾಷಣಂ .
ಪಾಣ್ಯೋರ್ವಿಷಯಃ ವಸ್ತುಗ್ರಹಣಂ .
ಪಾದಯೋರ್ವಿಷಯಃ ಗಮನಂ .
ಪಾಯೋರ್ವಿಷಯಃ ಮಲತ್ಯಾಗಃ .
ಉಪಸ್ಥಸ್ಯ ವಿಷಯಃ ಆನಂದ ಇತಿ . 
ಐದು ಕರ್ಮ ಇಂದ್ರಿಯಗಳು ಬಾಯಿ, ಕೈಗಳು, ಪಾದಗಳು, ಗುದ ಮತ್ತು ಜನನಾಂಗಗಳು.
ಮಾತಿನ ದೇವರು ಬೆಂಕಿ. 
ಕೈಗಳ ದೇವರು ಇಂದ್ರ. 
ಪಾದಗಳ ದೇವರು ವಿಷ್ಣು. 
ಗುದದ ದೇವರು ಮೃತ್ಯು. 
ಜನನೇಂದ್ರಿಯದ ದೇವರು ಪ್ರಜಾಪತಿ.
ಇವರು ಕರ್ಮೇಂದ್ರಿಯಗಳ ದೇವತೆಗಳು.

ಬಾಯಿಯ ಕಾರ್ಯ ಮಾತನಾಡುವದು. ಕೈಗಳ ಕಾರ್ಯ ಹಿಡಿತ. ಪಾದಗಳ ಕಾರ್ಯ ನಡೆಯುವುದು. ಗುದದ ಕಾರ್ಯ ಮಲವಿಸರ್ಜನೆ. ಜನನಾಂಗದ ಕಾರ್ಯ ಸಂತೋಷ.

ಕರ್ಮೇಂದ್ರಿಯಗಳು ಕೆಲಸ ಮಾಡುವ ಅಂಗಗಳು. 

ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಬಾಹ್ಯ ಪ್ರಪಂಚದ ಜೊತೆ ವ್ಯವಹರಿಸುತ್ತವೆ.  

3.3 ಕಾರಣಶರೀರ

ಕಾರಣಶರೀರಂ ಕಿಂ ?
ಅನಿರ್ವಾಚ್ಯಾನಾದ್ಯವಿದ್ಯಾರೂಪಂ ಶರೀರದ್ವಯಸ್ಯ ಕಾರಣಮಾತ್ರಂ
ಸತ್ಸ್ವರೂಪಾಽಜ್ಞಾನಂ ನಿರ್ವಿಕಲ್ಪಕರೂಪಂ ಯದಸ್ತಿ ತತ್ಕಾರಣಶರೀರಂ .

ಅನಿರ್ವಚನೀಯ, ಅನಾದಿ, ಅಜ್ಞಾನದ ನಿವಾಸವಾದ, (ಸ್ಥೂಲ ಮತ್ತು ಸೂಕ್ಷ್ಮ)ಎರಡು ಶರೀರಗಳಿಗೆ ಏಕೈಕ ಕಾರಣೀಭೂತವಾದ,  ನಿಜವಾದ ಸ್ವಭಾವದ ಬಗ್ಗೆ ಅಜ್ಞಾನವಿರುವ, ದ್ವಂದ್ವತೆಯಿಂದ ಮುಕ್ತವಾದ  ಶರೀರವೇ ಕಾರಣ ಶರೀರ. ನಾವು ಗಾಢ ನಿದ್ರೆಯಲ್ಲಿರುವಾಗ ಕಾರಣ ಶರೀರ ಅನುಭವಕ್ಕೆ ಬರುತ್ತದೆ.

ನಮ್ಮ ಆತ್ಮದ ಜ್ಞಾನದಿಂದ ನಮ್ಮನ್ನು ಬೇರ್ಪಡಿಸುವುದು ಈ ಕಾರಣ ಶರೀರ. ದಟ್ಟವಾದ ಅಜ್ಞಾನದ ಶರೀರ ಎಂದು ಹೇಳಲ್ಪಟ್ಟರೂ, ಜ್ಞಾನದಿಂದ ಭೇದಿಸಲ್ಪಟ್ಟರೆ ಈ ದೇಹದ ಮೂಲಕವೇ ನಾವು ಜ್ಞಾನೋದಯವನ್ನು ಸಹ ಪಡೆಯಬಹುದು.

ಕಾರಣ ಶರೀರ ನಮ್ಮ ಪುನರ್ಜನ್ಮಕ್ಕೆ ಕಾರಣವಾಗುತ್ತದೆ.

ನಾವು ಸುಷುಪ್ತಿ ಅಥವಾ ಗಾಢ ನಿದ್ರೆಯಲ್ಲಿರುವಾಗ ಸ್ಥೂಲ ಹಾಗೂ ಸೂಕ್ಷ್ಮ ಶರೀರಗಳು ನಿಷ್ಕ್ರಿಯವಾದಾಗ, ನಾವು ಕಾರಣ ಶರೀರವಾಗಿ ನಿರ್ವಿಕಲ್ಪ ಸ್ಥಿತಿಯಲ್ಲಿರುತ್ತೇವೆ.

4. ಅವಸ್ಥಾತ್ರಯ

ಅವಸ್ಥಾತ್ರಯಂ ಕಿಂ ?
ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥಾಃ . 
ಅವಸ್ಥಾತ್ರಯಗಳು ಅಂದರೆ ಪ್ರಜ್ಞೆಯ ಮೂರು ಸ್ಥಿತಿಗಳು ಯಾವವೆಂದರೆ - ಜಾಗ್ರತ, ಸ್ವಪ್ನ(ಕನಸಿನ), ಸುಷುಪ್ತ(ಗಾಢ ನಿದ್ರೆ)
4.1 ಜಾಗ್ರತ ಅವಸ್ಥಾ
ಜಾಗ್ರದವಸ್ಥಾ ಕಾ ?
ಶ್ರೋತ್ರಾದಿಜ್ಞಾನೇಂದ್ರಿಯೈಃ ಶಬ್ದಾದಿವಿಷಯೈಶ್ಚ ಜ್ಞಾಯತೇ ಇತಿ ಯತ್
ಸಾ ಜಾಗ್ರದಾವಸ್ಥಾ .
ಸ್ಥೂಲ ಶರೀರಾಭಿಮಾನೀ ಆತ್ಮಾ ವಿಶ್ವ ಇತ್ಯುಚ್ಯತೇ . 

ಜಾಗ್ರತ ಅವಸ್ಥೆ ಎಂದರೆ - ಎಚ್ಚರವಿರುವ, ಶಬ್ದವನ್ನು ಕಿವಿಗಳಿಂದ ಗ್ರಹಿಸುವ, ದೃಶ್ವವನ್ನು ಕಣ್ಣುಗಳಿಂದ ಗ್ರಹಿಸುವ ಇತ್ಯಾದಿ ಅನುಭವಿಸುವ ಸ್ಥಿತಿ. ಈ ಸ್ಥಿತಿಯಲ್ಲಿ ಸ್ಥೂಲ ಶರೀರದೊಂದಿಗೆ ಗುರುತಿಸಲ್ಪಟ್ಟ ಆತ್ಮವನ್ನು ವಿಶ್ವ ಎಂದು ಕರೆಯಲಾಗುತ್ತದೆ.

ಜಾಗ್ರತ ಅವಸ್ಥೆಯಲ್ಲಿ ಸ್ಥೂಲ ಶರೀರ ನಮ್ಮನ್ನು ನಿಯಂತ್ರಿಸುತ್ತದೆ. ಈ ಅವಸ್ಥೆಯಲ್ಲಿ ನಾವು ಜ್ಞಾನೇಂದ್ರಿಯಗಳಿಂದ ಬಾಹ್ಯ ಜಗತ್ತಿನ ಅನುಭವವನ್ನು ಪಡೆಯುತ್ತೇವೆ. 

ಈ ಅವಸ್ಥೆಯಲ್ಲಿ ಭೌತಿಕ ದೇಹವು ವಸ್ತುಗಳನ್ನು ಸೇವಿಸುತ್ತದೆ, ಮನಸ್ಸು ಭಾವನೆಗಳನ್ನು ಸೇವಿಸುತ್ತದೆ, ಬುದ್ಧಿಶಕ್ತಿ ವಿಚಾರಗಳನ್ನು ಸೇವಿಸುತ್ತದೆ ಮತ್ತು ಅಹಂಕಾರವು ಸಂತೋಷ ಕೊಡಬಹುದಾದ ಯಾವುದೇ ಅನುಭವವನ್ನು ಸೇವಿಸುತ್ತದೆ. 

4.1 ಸ್ವಪ್ನ ಅವಸ್ಥಾ
ಸ್ವಪ್ನಾವಸ್ಥಾ ಕೇತಿ ಚೇತ್ ?
ಜಾಗ್ರದವಸ್ಥಾಯಾಂ ಯದ್ದೃಷ್ಟಂ ಯದ್ ಶ್ರುತಂ
ತಜ್ಜನಿತವಾಸನಯಾ ನಿದ್ರಾಸಮಯೇ ಯಃ ಪ್ರಪಂಚಃ ಪ್ರತೀಯತೇ ಸಾ
ಸ್ವಪ್ನಾವಸ್ಥಾ .
ಸೂಕ್ಷ್ಮಶರೀರಾಭಿಮಾನೀ ಆತ್ಮಾ ತೈಜಸ ಇತ್ಯುಚ್ಯತೇ . 

ಎಚ್ಚರದ ಸ್ಥಿತಿಯಲ್ಲಿ ನೋಡಿದ ಮತ್ತು ಕೇಳಿದ ಸಂಗತಿಗಳಿಂದ ಹುಟ್ಟಿದ ಅನಿಸಿಕೆಗಳಿಂದ ನಿದ್ರೆಯಲ್ಲಿ ಪ್ರಕ್ಷೇಪಿಸಲ್ಪಟ್ಟ ಸ್ಥಿತಿಯನ್ನು ಕನಸಿನ ಸ್ಥಿತಿ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಸೂಕ್ಷ್ಮ ಶರೀರದೊಂದಿಗೆ ಗುರುತಿಸಲ್ಪಡುವ ಆತ್ಮವನ್ನು ಅನ್ನು ತೈಜಸ್ ಎಂದು ಕರೆಯಲಾಗುತ್ತದೆ.

 ಎಚ್ಚರದ ಸ್ಥಿತಿಯಲ್ಲಿ, ಗ್ರಹಿಕೆ ಎಂದರೆ ಜ್ಞಾನೇಂದ್ರಿಯಗಳು ಭೌತಿಕ ಜಗತ್ತಿನಲ್ಲಿ ತಮ್ಮ ತಮ್ಮ ವಿಷಯಗಳೊಂದಿಗೆ ನೇರ ಸಂಪರ್ಕಕ್ಕೆ ಬರುತ್ತವೆ. ಕನಸಿನ ಸ್ಥಿತಿಯಲ್ಲಿ ಇಂದ್ರಿಯಗಳು ಕಾರ್ಯನಿರ್ವಹಿಸುವುದಿಲ್ಲ, ಮತ್ತು  ಬುದ್ಧಿಯೂ ಲಭ್ಯವಿರುವುದಿಲ್ಲ. ಮನಸ್ಸು ಮಾತ್ರ ಕಾರ್ಯ ನಿರ್ವಹಿಸುತ್ತದೆ. ಎಚ್ಚರದ ಸ್ಥಿತಿಯಲ್ಲಿ ಸಂಗ್ರಹಿಸಿದ ಅನಿಸಿಕೆಗಳಿಂದ ಮನಸ್ಸು ಸ್ವತಃ ಕನಸನ್ನು ಪ್ರಕ್ಷೇಪಿಸುತ್ತದೆ.  

ಬುದ್ಧಿಶಕ್ತಿಯ ಸಂಘಟನಾ ಪ್ರಭಾವದಿಂದಾಗಿ ಎಚ್ಚರದ ಸ್ಥಿತಿಯಲ್ಲಿ ಅರ್ಥಪೂರ್ಣ ಕ್ರಮ ಇರುತ್ತದೆ. ಕನಸಿನ ಸ್ಥಿತಿಯಲ್ಲಿ, ಬುದ್ಧಿಶಕ್ತಿ ಲಭ್ಯವಿರುವುದಿಲ್ಲ, ಆದ್ದರಿಂದ ಕನಸಿನಲ್ಲಿ ನಾವು ಚಿತ್ರಗಳ ಗೊಂದಲಮಯ ರಚನೆಯನ್ನು ನೋಡುತ್ತೇವೆ ಹಾಗೂ ಕನಸಿನ ಘಟನೆಗಳು ಅಸಂಬದ್ಧವಾಗಿರುತ್ತವೆ. ಯಾವುದೇ ಭೌತಿಕ ನಿಯಮಗಳನ್ನು ಅನುಸರಿಸುವದಿಲ್ಲ.

ಎಚ್ಚರವಿದ್ದಾಗಿನಂತೆ, ಕನಸಿನಲ್ಲಿ ಸಹ ವ್ಯಕ್ತಿಯು ತಾನು ನೋಡುವ ಪ್ರಪಂಚವು ನಿಜವೆಂದು ನಂಬುತ್ತಾನೆ. ಇಂದ್ರಿಯಗಳು ನಿಷ್ಕ್ರಿಯವಾಗಿದ್ದರೂ ಕನಸುಗಳು ಬೆಳಕಿನಲ್ಲಿ ಕಾಣಿಸಿಕೊಳ್ಳುತ್ತವೆ.

4.3 ಸುಷುಪ್ತಿ ಅವಸ್ಥಾ (ಗಾಢ ನಿದ್ರೆ)
ಅತಃ ಸುಷುಪ್ತ್ಯವಸ್ಥಾ ಕಾ  ?
ಅಹಂ ಕಿಮಪಿ ನ ಜಾನಾಮಿ ಸುಖೇನ ಮಯಾ ನಿದ್ರಾಽನುಭೂಯತ ಇತಿ
ಸುಷುಪ್ತ್ಯವಸ್ಥಾ .
ಕಾರಣಶರೀರಾಭಿಮಾನೀ ಆತ್ಮಾ ಪ್ರಾಜ್ಞ ಇತ್ಯುಚ್ಯತೇ . 

"ನನಗೆ ಏನೂ ತಿಳಿದಿರಲಿಲ್ಲ, ನಾನು ತುಂಬಾ ಚೆನ್ನಾಗಿ ನಿದ್ರೆಯನ್ನು ಆನಂದಿಸಿದೆ" ಎಂದು ಹೇಳಿಕೊಳ್ಳುವ ಅತೀ ಗಾಢ ನಿದ್ರೆಯ ಸ್ಥಿತಿಯೇ ಸುಷುಪ್ತಿ. ಈ ಸ್ಥಿತಿಯಲ್ಲಿ ಕಾರಣಶರೀರದೊಂದಿಗೆ ಗುರುತಿಸಲ್ಪಟ್ಟ ಆತ್ಮವನ್ನು ಪ್ರಜ್ಞಾ ಎಂದು ಕರೆಯಲಾಗುತ್ತದೆ.

ಜಾಗೃತ ಹಾಗೂ ಸ್ವಪ್ನ ಅವಸ್ಥೆಗಳಲ್ಲಿ ನಾವು ಹಲವು ಅನುಭವಗಳನ್ನು ಪಡೆಯುತ್ತೇವೆ - ಆದರೆ ಸುಷುಪ್ತಿಯಲ್ಲಿ ಯಾವುದೇ ಅನುಭವಗಳಿರುವದಿಲ್ಲ. ಆದರೆ ಸ್ಥೂಲ ಹಾಗೂ ಸೂಕ್ಷ್ಮ ಶರೀರಗಳ ಶೃಂಖಲೆಯಿಲ್ಲದಿರುವದರಿಂದ ನಾವು ಆನಂದದ ಸ್ಥಿತಿಯಲ್ಲಿರುತ್ತೇವೆ. 

 ಸುಷುಪ್ತಿ ಎಂದರೆ ಕನಸುರಹಿತ ನಿದ್ರೆ. ಆಗ ಭೌತಿಕ ಶರೀರ ಹಾಗೂ ಮನಸ್ಸು ಕ್ರಿಯೆಗಳನ್ನು ನಿಲ್ಲಿಸಿರುತ್ತದೆ. ಸುಷುಪ್ತಿಯಲ್ಲಿ, ಮನಸ್ಸು ತನ್ನೊಳಗೇ ಲೀನವಾಗುತ್ತದೆ.

ಈ ಸ್ಥಿತಿಯಲ್ಲಿ ನಾವು ಕಾರಣಶರೀರವಾಗಿರುತ್ತೇವೆ. 

5. ಪಂಚ ಕೋಶ

ಪಂಚ ಕೋಶಾಃ ಕೇ ?
ಅನ್ನಮಯಃ ಪ್ರಾಣಮಯಃ ಮನೋಮಯಃ ವಿಜ್ಞಾನಮಯಃ ಆನಂದಮಯಶ್ಚೇತಿ . 
ಪಂಚಕೋಶಗಳಯ ಯಾವವೆಂದರೆ - ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. 

ನಾವು ವ್ಯಾವಹಾರಿಕ ಭಾಷೆಯಲ್ಲಿ ಹೇಳುವದಿದ್ದರೆ ಅನ್ನಮಯ ಕೋಶವೆಂದರೆ ಶರೀರ, ಪ್ರಾಣಮಯವೆಂದರೆ ಉಸಿರು, ಮನೋಮಯ ಕೋಶವೆಂದರೆ ಮನಸ್ಸು, ವಿಜ್ಞಾನಮಯ ಕೋಶವೆಂದರೆ ಬುದ್ಧಿ.



5.1 ಅನ್ನಮಯ ಕೋಶ  
ಅನ್ನಮಯಃ ಕಃ ?
ಅನ್ನರಸೇನೈವ ಭೂತ್ವಾ ಅನ್ನರಸೇನೈವ ವೃದ್ಧಿಂ ಪ್ರಾಪ್ಯ ಅನ್ನರೂಪಪೃಥಿವ್ಯಾಂ
ಯದ್ವಿಲೀಯತೇ ತದನ್ನಮಯಃ ಕೋಶಃ ಸ್ಥೂಲಶರೀರಂ . 

ಅನ್ನದ ಸಾರದಿಂದ ಹುಟ್ಟಿ ಮತ್ತು ಅನ್ನದ ಸಾರದಿಂದ ಬೆಳೆಯುವುದು, ಭೂಮಿಯಲ್ಲಿ ಅನ್ನದ ರೂಪದಲ್ಲಿ ಯಾವುದು ಕರಗುವದೋ ಆ ಸ್ಥೂಲ ದೇಹವು ಅನ್ನಮಯಕೋಶವಾಗಿದೆ.

ಅನ್ನಮಯ ಕೋಶವು ಚರ್ಮ, ಮಾಂಸ, ಮೂಳೆ ಹಾಗೂ ಇತರ ಅಂಗಗಳಿಂದ ಉಂಟಾಗಿದೆ. ಇದು ನಾವು ತಿನ್ನುವ ಆಹಾರದಿಂದ ಪೋಷಿಸಲ್ಪಡುತ್ತದೆ. 

 ಅನ್ನಮಯ ಕೋಶವೆಂದರೆ ಸ್ಥೂಲಶರೀರ.

5.2 ಪ್ರಾಣಮಯ ಕೋಶ  
ಪ್ರಾಣಮಯಃ ಕಃ ?
ಪ್ರಾಣಾದ್ಯಾಃ ಪಂಚವಾಯವಃ ವಾಗಾದೀಂದ್ರಿಯಪಂಚಕಂ ಪ್ರಾಣಮಯಃ ಕೋಶಃ . 

 ಪ್ರಾಣ ಇತ್ಯಾದಿ ಪಂಚವಾಯುಗಳು, ವಾಕ್ ಇತ್ಯಾದಿ ಪಂಚೇಂದ್ರಿಯಗಳು ಸೇರಿ ಪ್ರಾಣಮಯ ಕೋಶವಾಗುತ್ತದೆ.

ಪಂಚವಾಯುಗಳು - 

  • ಪ್ರಾಣ ವಾಯು:
    ಎದೆಯ ಭಾಗದಲ್ಲಿ ನೆಲೆಸಿ ಉಸಿರಾಟ, ಹೃದಯದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
  • ಅಪಾನ ವಾಯು:
    ಹೊಟ್ಟೆಯ ಕೆಳಭಾಗದಲ್ಲಿ ನೆಲೆಸಿ ವಿಸರ್ಜನೆ, ಸಂತಾನೋತ್ಪತ್ತಿ ಕಾರ್ಯಗಳನ್ನು ನಿಯಂತ್ರಿಸುತ್ತದೆ.
  • ಸಮಾನ ವಾಯು:
    ಹೊಕ್ಕಳಿನ ಭಾಗದಲ್ಲಿ ನೆಲೆಸಿ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ವಿತರಣೆಯನ್ನು ನಿಯಂತ್ರಿಸುತ್ತದೆ.
  • ವ್ಯಾನ ವಾಯು:
    ದೇಹದಾದ್ಯಂತ ಹರಡಿ ರಕ್ತ ಸಂಚಾರ ಮತ್ತು ಚಲನವಲನಗಳನ್ನು ನಿಯಂತ್ರಿಸುತ್ತದೆ.
  • ಉದಾನ ವಾಯು:
    ಗಂಟಲಿನ ಭಾಗದಲ್ಲಿ ನೆಲೆಸಿ ಮಾತು, ಜ್ಞಾಪಕಶಕ್ತಿ ಮತ್ತು ನಿದ್ರೆಯನ್ನು ನಿಯಂತ್ರಿಸುತ್ತದೆ.. 

ಈ ಐದು ವಾಯುಗಳು ಶರೀರವನ್ನು ಜೀವಂತವಾಗಿಡುತ್ತವೆ. 

ಶರೀರದಲ್ಲಿ ಮೊಟ್ಟ ಮೊದಲು ರಚಿತವಾಗುವ ಕೋಶ ಪ್ರಾಣಮಯಕೋಶ. ಭ್ರೂಣ ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಶರೀರದ ಅಂಗಗಳು ರಚಿತವಾಗುವದಕ್ಕಿಂತಲೂ ಮೊದಲೇ ಪ್ರಾಣಮಯ ಕೋಶ ರಚಿತವಾಗಿ ತನ್ನ ಕೆಲಸ ಆರಂಭಿಸುತ್ತದೆ. ಅದಾದ ಮೇಲೆ ನಾವು ಸಾಯುವವರೆಗೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ.

5.3  ಮನೋಮಯ ಕೋಶ  
ಮನೋಮಯಃ ಕೋಶಃ ಕಃ ?
ಮನಶ್ಚ ಜ್ಞಾನೇಂದ್ರಿಯಪಂಚಕಂ ಮಿಲಿತ್ವಾ ಯೋ ಭವತಿ ಸ ಮನೋಮಯಃ ಕೋಶಃ . 
ಮನಸ್ಸು ಮತ್ತು ಐದು ಜ್ಞಾನೇಂದ್ರಿಯಗಳು ಸೇರಿ ಮನೋಮಯಕೋಶವಾಗುತ್ತದೆ.

ಮನೋಮಯ ಕೋಶ (ಮನಸ್ಸು) ಪ್ರಾಣವನ್ನು - ಇಂದ್ರಿಯಗಳನ್ನು ನಿಯಂತ್ರಿಸುತ್ತದೆ.  

ಮನೋಮಯಕೋಶದ ಕಾರ್ಯಗಳು:

  • ಇಂದ್ರಿಯಗಳು: ಮನೋಮಯ ಕೋಶವು ದೃಷ್ಟಿ, ವಾಸನೆ, ಶ್ರವಣ, ರುಚಿ ಮತ್ತು ಸ್ಪರ್ಶ ಎಂಬ ಐದು ಇಂದ್ರಿಯಗಳಿಂದ ಮಾಹಿತಿಯನ್ನು ಪಡೆಯುತ್ತದೆ.
  • ಆಲೋಚನೆಗಳು: ಮನೋಮಯ ಕೋಶವು ಆಲೋಚನೆಗಳು, ನೆನಪುಗಳು ಮತ್ತು ನಿರ್ಧಾರಗಳನ್ನು ಪ್ರಕ್ರಿಯೆಗೊಳಿಸುತ್ತದೆ.
  • ಭಾವನೆಗಳು: ಮನೋಮಯ ಕೋಶವು ಭಾವನೆಗಳನ್ನು ಅನುಭವಿಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ.
  • ವ್ಯಾಖ್ಯಾನ: ಮನೋಮಯ ಕೋಶ ನಮ್ಮ ಅನುಭವಗಳು ಮತ್ತು ಜೀವನವನ್ನು ವ್ಯಾಖ್ಯಾನಿಸುತ್ತದೆ.
5.4  ವಿಜ್ಞಾನಮಯ ಕೋಶ  
ವಿಜ್ಞಾನಮಯಃ ಕಃ ?
ಬುದ್ಧಿಜ್ಞಾನೇಂದ್ರಿಯಪಂಚಕಂ ಮಿಲಿತ್ವಾ ಯೋ ಭವತಿ ಸ ವಿಜ್ಞಾನಮಯಃ ಕೋಶಃ . 

ವಿಜ್ಞಾನಮಯಕೋಶವೆಂದರೆ ಬುದ್ಧಿ ಮತ್ತು ಐದು ಜ್ಞಾನೇಂದ್ರಿಯಗಳು ಸೇರಿ ಆಗುವ ಕೋಶ. 

 ವಿಜ್ಞಾನಮಯ ಕೋಶ (ಬುದ್ಧಿ) ಎಂದರೆ:
  • ಇದು ಅಂತಃಪ್ರಜ್ಞೆ ಮತ್ತು ಬುದ್ಧಿಶಕ್ತಿಯ ಸ್ಥಾನ.
  • ನಾವು ಏನು ಮಾಡುತ್ತಿದ್ದೇವೆ ಮತ್ತು ಯೋಚಿಸುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದಿರುವುದು ಸಾಕ್ಷಿ ಮನಸ್ಸು ಅಥವಾ ಪ್ರಜ್ಞೆಯ ಅಂಶವಾಗಿದೆ.
  • ಇದು ಆಸ್ಟ್ರಲ್ ಅಥವಾ ಮಾನಸಿಕ ದೇಹ.
  • ಇದು ಕಾರಣಾತ್ಮಕ ಮನಸ್ಸಿನ ಮೊದಲ ಪದರವಾಗಿದೆ.
  • ಅದು ಬೆಳಕಿನ ಮೊದಲ ಸಾಕಾರ
  • ತೀರ್ಮಾನಗಳನ್ನು ತೆಗೆದುಕೊಳ್ಳುವದು ಈ ಕೋಶ.

ವಿಜ್ಞಾನಮಯ ಕೋಶವನ್ನು ನಾವು ಹೇಗೆ ಪ್ರವೇಶಿಸಬಹುದು?

  •  ನಿಯಮಿತ ಯೋಗ ಆಸನ
  •  ಪ್ರಾಣಾಯಾಮ
  •  ಧ್ಯಾನ ಅಭ್ಯಾಸ
  •  ನಿಮ್ಮ ಆಲೋಚನೆಗಳು, ಅಹಂಕಾರ ಅಥವಾ ಸ್ವಯಂ ಪ್ರಜ್ಞೆಯಿಂದ ಬೇರ್ಪಡಿಸಲು ಕಲಿಯುವುದು
 ವಿಜ್ಞಾನಮಯಕೋಶ - ಬುದ್ಧಿ
 
5.5 ಆನಂದಮಯ ಕೋಶ 
ಆನಂದಮಯಃ ಕಃ ?
ಏವಮೇವ ಕಾರಣಶರೀರಭೂತಾವಿದ್ಯಾಸ್ಥಮಲಿನಸತ್ತ್ವಂ
ಪ್ರಿಯಾದಿವೃತ್ತಿಸಹಿತಂ ಸತ್ ಆನಂದಮಯಃ ಕೋಶಃ .
ಏತತ್ಕೋಶಪಂಚಕಂ . 

ಕಾರಣ ಶರೀರದ ರೂಪದ, ಅಶುದ್ಧ ಸ್ವಭಾವದ, ಪ್ರಿಯ ಇತ್ಯಾದಿ ಆಲೋಚನೆಗಳೊಂದಿಗೆ ಒಂದಾಗಿರುವ, ಅಜ್ಞಾನದಲ್ಲಿ ಸ್ಥಾಪಿತವಾಗಿರುವದೇ  ಆನಂದಮಯ ಕೋಶ.
 
ಆನಂದಮಯ ಕೋಶ ಕಾರಣಶರೀರದ ರೂಪದಲ್ಲಿರುತ್ತದೆ. 
ಮನುಷ್ಯನು ತನ್ನ ಮೂಲ ಸ್ವಭಾವವಾದ ಆನಂದ ಮತ್ತು ಶಾಂತಿಯನ್ನು ಅನುಭವಿಸುವ ಕೋಶ ಆನಂದಮಯ ಕೋಶ.  
 
ಜಾಗ್ರತಾವಸ್ಥೆಯಲ್ಲಿ ಮೂರು ರೀತಿಯ ಸಂತೋಷವು ಕಂಡುಬರುತ್ತದೆ
  •  ಪ್ರಿಯ - ನಮಗೆ ಇಷ್ಟವಾದದ್ದನ್ನು ನೋಡುವಾಗ ಆಗುವ ಸಂತೋಷ
  •  ಮೋದ - ಆ ವಸ್ತುವ ದೊರೆತಾಗ ಆಗುವ ಸಂತೋಷ 
  •  ಪ್ರಮೋದ - ಇಷ್ಟವಾದ ವಸ್ತುವನ್ನು ಅನುಭವಿಸುವಾಗಿನ ಸಂತೋಷ

ಇವು ಮೂರೂ ಆನಂದದ ಹಂತಗಳು. 

ಈ ತೃಪ್ತಿ ಮತ್ತು ಆನಂದದ ಭಾವನೆಯು ಕಾರಣಶರೀರವನ್ನು ರೂಪಿಸುವ ಅಜ್ಞಾನದಿಂದ ಬರುತ್ತದೆ. ಅದು ನಮ್ಮನ್ನು ಬೆಳಗಿಸುವುದಿಲ್ಲ, ಬದಲಾಗಿ ನಮ್ಮನ್ನು ಆಳವಾದ ಕತ್ತಲೆಗೆ ತಳ್ಳುತ್ತದೆ. ನಮಗೆ ತಪ್ಪು ಆನಂದದ ಭಾವನೆಯನ್ನು ನೀಡುತ್ತವೆ, ನಾವು ತಕ್ಷಣ ಅನುಭವಿಸುತ್ತಿರುವ ಇಂದ್ರಿಯ ವಸ್ತುಗಳಿಂದ ಬಂದಿರುವದಾಗಿ ಗಣಿಸುತ್ತೇವೆ. 

ಆನಂದಮಯ ಕೋಶವೇ ನಮ್ಮ ಆತ್ಮಕ್ಕೆ ಅತಿ ಹತ್ತಿರವಿರುವ ಕೋಶ.

5.6  ಪಂಚಕೋಶಾತೀತ
ಮದೀಯಂ ಶರೀರಂ ಮದೀಯಾಃ ಪ್ರಾಣಾಃ ಮದೀಯಂ ಮನಶ್ಚ 
ಮದೀಯಾ ಬುದ್ಧಿರ್ಮದೀಯಂ ಅಜ್ಞಾನಮಿತಿ ಸ್ವೇನೈವ ಜ್ಞಾಯತೇ
ತದ್ಯಥಾ ಮದೀಯತ್ವೇನ ಜ್ಞಾತಂ ಕಟಕಕುಂಡಲ ಗೃಹಾದಿಕಂ
ಸ್ವಸ್ಮಾದ್ಭಿನ್ನಂ ತಥಾ ಪಂಚಕೋಶಾದಿಕಂ ಸ್ವಸ್ಮಾದ್ಭಿನ್ನಂ
ಮದೀಯತ್ವೇನ ಜ್ಞಾತಮಾತ್ಮಾ ನ ಭವತಿ ..

ಪಂಚಕೋಶಗಳು ಇತ್ಯಾದಿಗಳು ನಮ್ಮಿಂದ 'ನನ್ನ ದೇಹ, ನನ್ನ ಪ್ರಾಣಗಳು, ನನ್ನ ಮನಸ್ಸು, ನನ್ನ ಬುದ್ಧಿ ಮತ್ತು ನನ್ನ ಜ್ಞಾನ' ಎಂದು ತಿಳಿಯಲ್ಪಟ್ಟಿವೆ. 'ನನ್ನದು' ಎಂದು ಕರೆಯಲ್ಪಡುವ ಬಳೆಗಳು, ಕಿವಿಯೋಲೆಗಳು, ಮನೆ ಇತ್ಯಾದಿಗಳು 'ನನ್ನಿಂದ' ಭಿನ್ನವಾಗಿದ್ದಂತೆ ಪಂಚಕೋಶಗಳು ಆತ್ಮದಿಂದ ಭಿನ್ನವಾಗಿವೆ. ಮತ್ತು ಅವೆಲ್ಲ ಮಿಥ್ಯೆ.

ಈ ಐದು ಕೋಶಗಳ ಜೊತೆಗೆ ನಮ್ಮನ್ನು ನಾವು ಗುರುತಿಸಿಕೊಂಡಾಗ ನಾವು ದುಃಖ ಅನುಭವಿಸುತ್ತೇವೆ ಹಾಗೂ ಆ ಕೋಶಗಳ ಮಿತಿಗಳು ನಮ್ಮ ಮಿತಿಗಳಾಗುತ್ತವೆ.

6   ಆತ್ಮ
ಆತ್ಮಾ ತರ್ಹಿ ಕಃ ?
ಸಚ್ಚಿದಾನಂದಸ್ವರೂಪಃ .
ಸತ್ಕಿಂ ?
ಕಾಲತ್ರಯೇಽಪಿ ತಿಷ್ಠತೀತಿ ಸತ್ .
ಚಿತ್ಕಿಂ ?
ಜ್ಞಾನಸ್ವರೂಪಃ .
ಆನಂದಃ ಕಃ ?
ಸುಖಸ್ವರೂಪಃ .
ಏವಂ ಸಚ್ಚಿದಾನಂದಸ್ವರೂಪಂ ಸ್ವಾತ್ಮಾನಂ ವಿಜಾನೀಯಾತ್ . 

ಹಾಗಾದರೆ ಆತ್ಮ ಎಂದರೇನು?
ಅದು ಸತ್ ಚಿತ್ ಆನಂದ ಸ್ವರೂಪದ್ದಾಗಿದೆ.

ಸತ್ ಎಂದರೇನು? 

ಮೂರು ಕಾಲಗಳಲ್ಲಿ (ಭೂತ, ವರ್ತಮಾನ ಮತ್ತು ಭವಿಷ್ಯತ್) ಬದಲಾಗದೇ ಉಳಿಯುವುದೇ ಸತ್. ಒಂದು ಮಣ್ಣಿನಿಂದ ಮಡಿಕೆ ಮಾಡಿದಾಗ ಮಡಿಕೆ ಒಡೆದರೂ ಮಣ್ಣು ಹಾಗೆ ಉಳಿಯುತ್ತದೆ. ಸತ್ ಎಂದರೆ ಆ ಮಣ್ಣಿನ ಹಾಗೆ - ಚಿರ ಶಾಶ್ವತ.

ಚಿತ್ ಎಂದರೇನು? 

ಚಿತ್ ಸಂಪೂರ್ಣ ಜ್ಞಾನದ ಸ್ವಭಾವವಾಗಿದೆ. ಆ ಜ್ಞಾನವನ್ನು ಹೊಂದಿದ ಕೂಡಲೇ ಮನುಷ್ಯನು ಪೂರ್ಣತೆಯನ್ನು ಪಡೆಯುತ್ತಾನೆ. ಚಿತ್ ಕೂಡ ಸದಾ-ಸರ್ವದಾ ಶಾಶ್ವತ.

ಆನಂದ ಎಂದರೇನು? 

ಅದು ಸಂಪೂರ್ಣ ಸಂತೋಷದ ಸ್ವಭಾವವಾಗಿದೆ. ಮಾನವನ ಮೂಲ ಸ್ವಭಾವ ಈ ಆನಂದ.

ಹೀಗೆ ಮನುಜನು ತನ್ನನ್ನು ತಾನು ಸತ್-ಚಿತ್-ಆನಂದದ ಸ್ವರೂಪ ಎಂದು ತಿಳಿಯಬೇಕು.

ಆತ್ಮನನ್ನು ವಿವರಿಸಿ ಆದ ನಂತರ ಜಗತ್ತು ಏನೆಂದು ತಿಳಿಯೋಣ. 

7  ಜಗತ್   
ಅಥ ಚತುರ್ವಿಂಶತಿತತ್ತ್ವೋತ್ಪತ್ತಿಪ್ರಕಾರಂ ವಕ್ಷ್ಯಾಮಃ .
ಬ್ರಹ್ಮಾಶ್ರಯಾ ಸತ್ತ್ವರಜಸ್ತಮೋಗುಣಾತ್ಮಿಕಾ ಮಾಯಾ ಅಸ್ತಿ . 
ಈಗ ನಾವು ಇಪ್ಪತ್ನಾಲ್ಕು ತತ್ವಗಳ ಹೇಗೆ ಉತ್ಪತ್ತಿಯಾದವು ಎಂದು ಹೇಳೋಣ.

ಬ್ರಹ್ಮನನ್ನು ಅವಲಂಬಿಸಿ ಸತ್ವ, ರಜಸ್ ಮತ್ತು ತಮಸ್ಸು ಎಂಬ ಮೂರು ಗುಣಗಳ ಸ್ವರೂಪದ ಮಾಯೆ ಅಸ್ತಿತ್ವದಲ್ಲಿದೆ.

7.1  BRAHMAN
7.2 MAYA
7.3 CREATION
7.3.1 EVOLUTION OF THE FIVE ELEMENTS

ತತಃ ಆಕಾಶಃ ಸಂಭೂತಃ .
ಆಕಾಶಾದ್ ವಾಯುಃ .
ವಾಯೋಸ್ತೇಜಃ .
ತೇಜಸ ಆಪಃ .
ಅಭ್ಧಯಃ ಪೃಥಿವೀ .

ಪಂಚ ಮಹಾಭೂತಗಳ ಉತ್ಪತ್ತಿ ಹೇಗಾಯಿತೆಂದರೆ:
 ಆ ಮಾಯೆಯಿಂದ, ಆಕಾಶವು ಹುಟ್ಟಿತು.
ಆಕಾಶದಿಂದ ವಾಯು.
ವಾಯುವಿನಿಂದ ಬೆಂಕಿ.
ಬೆಂಕಿಯಿಂದ ನೀರು.
ನೀರಿನಿಂದ ಭೂಮಿ.
7.3.2  EVOLUTION OF THE SATTVA ASPECT 
7.3.2.1  ಜ್ಞಾನೇಂದ್ರಿಯ ಸಂಭೂತಿ
ಏತೇಷಾಂ ಪಂಚತತ್ತ್ವಾನಾಂ ಮಧ್ಯೇ 
ಆಕಾಶಸ್ಯ ಸಾತ್ವಿಕಾಂಶಾತ್ ಶ್ರೋತ್ರೇಂದ್ರಿಯಂ ಸಂಭೂತಂ .
ವಾಯೋಃ ಸಾತ್ವಿಕಾಂಶಾತ್ ತ್ವಗಿಂದ್ರಿಯಂ ಸಂಭೂತಂ .
ಅಗ್ನೇಃ ಸಾತ್ವಿಕಾಂಶಾತ್ ಚಕ್ಷುರಿಂದ್ರಿಯಂ ಸಂಭೂತಂ .
ಜಲಸ್ಯ ಸಾತ್ವಿಕಾಂಶಾತ್ ರಸನೇಂದ್ರಿಯಂ ಸಂಭೂತಂ .
ಪೃಥಿವ್ಯಾಃ ಸಾತ್ವಿಕಾಂಶಾತ್ ಘ್ರಾಣೇಂದ್ರಿಯಂ ಸಂಭೂತಂ . 

ಈ ಪಂಚತತ್ವಗಳ ಮಧ್ಯದಲ್ಲಿ 

  • ಆಕಾಶದ ಸಾತ್ವಿಕಾಂಶದಿಂದ ಶ್ರೋತ್ರೇಂದ್ರಿಯ ಜನಿತವಾಯಿತು. 
  • ವಾಯುವಿನ ಸಾತ್ವಿಕಾಂಶದಿಂದ ತ್ವಕ್ ಇಂದ್ರಿಯ  ಜನಿತವಾಯಿತು.  
  • ಅಗ್ನಿಯ ಸಾತ್ವಿಕಾಂಶದಿಂದ ಚಕ್ಷು ಇಂದ್ರಿಯ ಜನಿತವಾಯಿತು. 
  • ನೀರಿನ ಸಾತ್ವಿಕಾಂಶದಿಂದ ರಸನೇಂದ್ರಿಯ ಜನಿತವಾಯಿತು. 
  • ಪೃಥ್ವಿಯ ಸಾತ್ವಿಕಾಂಶದಿಂದ ಘ್ರಾಣೇಂದ್ರಿಯ ಜನಿತವಾಯಿತು.

ಈ ಶ್ಲೋಕದಲ್ಲಿ ನಾವು ಭೌತಿಕ ಇಂದ್ರಿಯಗಳ ಬಗ್ಗೆ ಅಲ್ಲ, ಸೂಕ್ಷ್ಮ ಇಂದ್ರಿಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ. ಆದ್ದರಿಂದ "ಕಿವಿ" ಬದಲಿಗೆ ನಾವು ಅದನ್ನು ಶ್ರವಣೇಂದ್ರಿಯ ಎಂದು ಅನುವಾದಿಸುತ್ತಿದ್ದೇವೆ. 

7.3.2.2  ಅಂತಃಕರಣ (ಮನಸ್ಸು)
ಏತೇಷಾಂ ಪಂಚತತ್ತ್ವಾನಾಂ ಸಮಷ್ಟಿಸಾತ್ವಿಕಾಂಶಾತ್ 
ಮನೋಬುದ್ಧ್ಯಹಂಕಾರ ಚಿತ್ತಾಂತಃಕರಣಾನಿ ಸಂಭೂತಾನಿ .
ಸಂಕಲ್ಪವಿಕಲ್ಪಾತ್ಮಕಂ ಮನಃ .
ನಿಶ್ಚಯಾತ್ಮಿಕಾ ಬುದ್ಧಿಃ .
ಅಹಂಕರ್ತಾ ಅಹಂಕಾರಃ .
ಚಿಂತನಕರ್ತೃ ಚಿತ್ತಂ .
ಮನಸೋ ದೇವತಾ ಚಂದ್ರಮಾಃ .
ಬುದ್ಧೇ ಬ್ರಹ್ಮಾ .
ಅಹಂಕಾರಸ್ಯ ರುದ್ರಃ .
ಚಿತ್ತಸ್ಯ ವಾಸುದೇವಃ . 
ಈ ಐದು ತತ್ವಗಳ ಒಟ್ಟು ಸಾತ್ವಿಕಾಂಶಗಳಿಂದ ಮನ, ಬುದ್ಧಿ, ಅಹಂಕಾರ, ಚಿತ್ತ ಈ ಆಂತರಿಕ ಗುಣಗಳು ರಚಿತವಾದವು. 
  • ಸಂಕಲ್ಪ ಮತ್ತು ವಿಕಲ್ಪ ಮಾಡುವದು ಮನಸ್ಸು.
  •  ನಿರ್ಧಾರಿಸುವದು ಬುದ್ಧಿ .
  • ನಾನೇ ಮಾಡುವವನು ಎನ್ನುವವದು ಅಹಂಕಾರ.
  • ಚಿಂತನೆ ಮಾಡುವವದು ಚಿತ್ತ.
  • ಮನಸ್ಸಿನ ದೇವತೆ ಚಂದ್ರ.
  • ಬುದ್ಧಿಯ ದೇವತೆ ಬ್ರಹ್ಮ.
  • ಅಹಂಕಾರದ ದೇವತೆ ರುದ್ರ.
  • ಮನಸ್ಸಿನ ದೇವತೆ ವಾಸುದೇವ.
7.3.3 ರಾಜಸ ತತ್ವಗಳ ಉತ್ಪತ್ತಿ
ಏತೇಷಾಂ ಪಂಚತತ್ತ್ವಾನಾಂ ಮಧ್ಯೇ
ಆಕಾಶಸ್ಯ ರಾಜಸಾಂಶಾತ್ ವಾಗಿಂದ್ರಿಯಂ ಸಂಭೂತಂ .
ವಾಯೋಃ ರಾಜಸಾಂಶಾತ್ ಪಾಣೀಂದ್ರಿಯಂ ಸಂಭೂತಂ .
ವನ್ಹೇಃ ರಾಜಸಾಂಶಾತ್ ಪಾದೇಂದ್ರಿಯಂ ಸಂಭೂತಂ .
ಜಲಸ್ಯ ರಾಜಸಾಂಶಾತ್ ಉಪಸ್ಥೇಂದ್ರಿಯಂ ಸಂಭೂತಂ .
ಪೃಥಿವ್ಯಾ ರಾಜಸಾಂಶಾತ್ ಗುದೇಂದ್ರಿಯಂ ಸಂಭೂತಂ .
ಏತೇಷಾಂ ಸಮಷ್ಟಿರಾಜಸಾಂಶಾತ್ ಪಂಚಪ್ರಾಣಾಃ ಸಂಭೂತಾಃ .
ಈ ಪಂಚತತ್ವಗಳಲ್ಲಿ
  • ಆಕಾಶದ ರಾಜಸ ಅಂಶದಿಂದ, ಮಾತಿನ ಅಂಗವು (ಬಾಯಿಯು) ರೂಪುಗೊಳ್ಳುತ್ತದೆ.
  • ಗಾಳಿಯ ರಾಜಸ ಅಂಶದಿಂದ, ಕೈಗಳು ರೂಪುಗೊಳ್ಳುತ್ತವೆ.
  • ಚಲನೆಯ ಅಂಗವಾದ ಬೆಂಕಿಯ ರಾಜಸ ಅಂಶದಿಂದ, ಕಾಲುಗಳು ರೂಪುಗೊಳ್ಳುತ್ತವೆ.
  • ನೀರಿನ ರಾಜಸ ಅಂಶದಿಂದ, ಸಂತಾನೋತ್ಪತ್ತಿಯ ಅಂಗವು ರೂಪುಗೊಳ್ಳುತ್ತದೆ.
  • ಭೂಮಿಯ ರಾಜಸಿಕ ಅಂಶದಿಂದ, ಗುದದ್ವಾರವು ರೂಪುಗೊಳ್ಳುತ್ತದೆ.
  • ಈ ಐದು ಅಂಶಗಳ ಒಟ್ಟು ರಾಜಸ ಅಂಶದಿಂದ, ಐದು ಪ್ರಾಣಗಳು ರೂಪುಗೊಳ್ಳುತ್ತವೆ.
ಇದರ ಅರ್ಥ ಕರ್ಮೇಂದ್ರಿಯಗಳು ರಾಜಸಿಕ ಅಂಶಗಳಿಂದ ಉದ್ಭವವಾಗಿವೆ. 
7.3.4  ತಾಮಸ ತತ್ವಗಳ ಉತ್ಪತ್ತಿ

ಏತೇಷಾಂ ಪಂಚತತ್ತ್ವಾನಾಂ ತಾಮಸಾಂಶಾತ್
ಪಂಚೀಕೃತಪಂಚತತ್ತ್ವಾನಿ ಭವಂತಿ .
ಪಂಚೀಕರಣಂ ಕಥಂ ಇತಿ ಚೇತ್ .

ಈ ಐದು ಪಂಚತತ್ವಗಳ ತಾಮಸ ಅಂಶದಿಂದ ಪಂಚೀಕೃತವಾದ ಪಂಚತತ್ವಗಳು ಉತ್ಪನ್ನವಾಗುತ್ತವೆ. ಪಂಚೀಕರಣ ಹೇಗೆ ಎಂದರೆ...

ಏತೇಷಾಂ ಪಂಚಮಹಾಭೂತಾನಾಂ ತಾಮಸಾಂಶಸ್ವರೂಪಂ
ಏಕಮೇಕಂ ಭೂತಂ ದ್ವಿಧಾ ವಿಭಜ್ಯ ಏಕಮೇಕಮರ್ಧಂ ಪೃಥಕ್
ತೂಷ್ಣೀಂ ವ್ಯವಸ್ಥಾಪ್ಯ ಅಪರಮಪರಮರ್ಧಂ ಚತುರ್ಧಾಂ ವಿಭಜ್ಯ
ಸ್ವಾರ್ಧಮನ್ಯೇಷು ಅರ್ಧೇಷು ಸ್ವಭಾಗಚತುಷ್ಟಯಸಂಯೋಜನಂ ಕಾರ್ಯಂ .
ತದಾ ಪಂಚೀಕರಣಂ ಭವತಿ .
  • ಐದು ಅಂಶಗಳಲ್ಲಿ ಪ್ರತಿಯೊಂದರ ತಾಮಸ ಅಂಶವು ಎರಡು ಸಮಾನ ಭಾಗಗಳಾಗಿ ವಿಭಜನೆ ಮಾಡಲಾಗುತ್ತದೆ.
  • ಪ್ರತಿಯೊಂದರ ಅರ್ಧದಷ್ಟು ಭಾಗವು ಹಾಗೆಯೇ ಇಡಲಾಗುತ್ತದೆ.
  • ಪ್ರತಿಯೊಂದರ ಉಳಿದ ಅರ್ಧವನ್ನು ನಾಲ್ಕು ಸಮಾನ ಭಾಗಗಳಾಗಿ ವಿಂಗಡಿಸಲಾಗುತ್ತದೆ.
  • ನಂತರ ಒಂದು ಅಂಶದ ಅಖಂಡ ಅರ್ಧಕ್ಕೆ, ಇತರ ನಾಲ್ಕು ಅಂಶಗಳಿಂದ ಪ್ರತಿಯೊಂದರಿಂದ ಎಂಟನೇ ಒಂದು ಭಾಗವು ಸೇರಿಸಲಾಗುತ್ತದೆ.
  • ನಂತರ ಪಂಚೀಕರಣವು ಪೂರ್ಣಗೊಳ್ಳುತ್ತದೆ.
ಏತೇಭ್ಯಃ ಪಂಚೀಕೃತಪಂಚಮಹಾಭೂತೇಭ್ಯಃ ಸ್ಥೂಲಶರೀರಂ ಭವತಿ .
ಏವಂ ಪಿಂಡಬ್ರಹ್ಮಾಂಡಯೋರೈಕ್ಯಂ ಸಂಭೂತಂ . 
ಈ ಪಂಚೀಕೃತವಾದ ಪಂಚಮಹಾಭೂತಗಳಿಂದ ಸ್ಥೂಲಶರೀರವಾಗುತ್ತದೆ.
ಹೀಗಾಗಿ, ಪಿಂಡ ಮತ್ತು ಬ್ರಹ್ಮಾಂಡಗಳ ನಡುವೆ ಒಂದು ಐಕ್ಯತೆ ಇದೆ.
8  ಈಶ್ವರ  ಜೀವ ವಿವೇಕ
9 ಜೀವ ಮತ್ತು ಈಶ್ವರ

ಸ್ಥೂಲಶರೀರಾಭಿಮಾನಿ ಜೀವನಾಮಕಂ ಬ್ರಹ್ಮಪ್ರತಿಬಿಂಬಂ ಭವತಿ .
ಸ ಏವ ಜೀವಃ ಪ್ರಕೃತ್ಯಾ ಸ್ವಸ್ಮಾತ್ ಈಶ್ವರಂ ಭಿನ್ನತ್ವೇನ ಜಾನಾತಿ .
ಅವಿದ್ಯೋಪಾಧಿಃ ಸನ್ ಆತ್ಮಾ ಜೀವ ಇತ್ಯುಚ್ಯತೇ .
ಮಾಯೋಪಾಧಿಃ ಸನ್ ಈಶ್ವರ ಇತ್ಯುಚ್ಯತೇ .
ಏವಂ ಉಪಾಧಿಭೇದಾತ್ ಜೀವೇಶ್ವರಭೇದದೃಷ್ಟಿಃ ಯಾವತ್ಪರ್ಯಂತಂ ತಿಷ್ಠತಿ
ತಾವತ್ಪರ್ಯಂತಂ ಜನ್ಮಮರಣಾದಿರೂಪಸಂಸಾರೋ ನ ನಿವರ್ತತೇ .
ತಸ್ಮಾತ್ಕಾರಣಾನ್ನ ಜೀವೇಶ್ವರಯೋರ್ಭೇದಬುದ್ಧಿಃ ಸ್ವೀಕಾರ್ಯಾ . 
 
ಸ್ಥೂಲ ದೇಹದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಬ್ರಹ್ಮದ ಪ್ರತಿಬಿಂಬವನ್ನು ಜೀವ ಎಂದು ಕರೆಯಲಾಗುತ್ತದೆ. ಈ ಜೀವ ಸ್ವಭಾವತಃ ಈಶ್ವರನನ್ನು ತನ್ನಿಂದ ಬೇರೆಯನ್ನಾಗಿ ತಿಳಿದುಕೊಳ್ಳುತ್ತದೆ. ಅಜ್ಞಾನದಿಂದ (ಮಾಯೆ) ಬದ್ಧವಾಗಿರುವ ಆತ್ಮವನ್ನು ಜೀವ ಎಂದು ಕರೆಯಲಾಗುತ್ತದೆ. ಮಾಯೆಯಿಂದ ಬದ್ಧವಾಗಿರುವ ಆತ್ಮವನ್ನು ಈಶ್ವರ  ಎಂದು ಕರೆಯಲಾಗುತ್ತದೆ. ಜೀವ ಮತ್ತು ಈಶ್ವರರು ಬೇರೆ ಬೇರೆ ಎಂಬ ಕಲ್ಪನೆಯು ಉಳಿಯುವವರೆಗೆ, ಪುನಃ ಪುನಃ ಜನನ, ಮರಣಗಳ ಸಂಸಾರಚಕ್ರದಿಂದ ಮುಕ್ತಿ ದೊರೆಯುವುದಿಲ್ಲ. ಆ ಕಾರಣದಿಂದಾಗಿ, ಜೀವವು ಈಶ್ವರನಿಗಿಂತ ಭಿನ್ನವಾಗಿದೆ ಎಂಬ ಕಲ್ಪನೆಯನ್ನು ಒಪ್ಪಿಕೊಳ್ಳಬಾರದು.

10 ತತ್ ತ್ವಂ ಅಸಿ
ನನು ಸಾಹಂಕಾರಸ್ಯ ಕಿಂಚಿಜ್ಜ್ಞಸ್ಯ ಜೀವಸ್ಯ ನಿರಹಂಕಾರಸ್ಯ ಸರ್ವಜ್ಞಸ್ಯ
ಈಶ್ವರಸ್ಯ ತತ್ತ್ವಮಸೀತಿ ಮಹಾವಾಕ್ಯಾತ್ ಕಥಮಭೇದಬುದ್ಧಿಃ ಸ್ಯಾದುಭಯೋಃ
ವಿರುದ್ಧಧರ್ಮಾಕ್ರಾಂತತ್ವಾತ್ .
ಇತಿ ಚೇನ್ನ . ಸ್ಥೂಲಸೂಕ್ಷ್ಮಶರೀರಾಭಿಮಾನೀ ತ್ವಂಪದವಾಚ್ಯಾರ್ಥಃ .
ಉಪಾಧಿವಿನಿರ್ಮುಕ್ತಂ ಸಮಾಧಿದಶಾಸಂಪನ್ನಂ ಶುದ್ಧಂ ಚೈತನ್ಯಂ
ತ್ವಂಪದಲಕ್ಷ್ಯಾರ್ಥಃ .
ಏವಂ ಸರ್ವಜ್ಞತ್ವಾದಿವಿಶಿಷ್ಟ ಈಶ್ವರಃ ತತ್ಪದವಾಚ್ಯಾರ್ಥಃ .
ಉಪಾಧಿಶೂನ್ಯಂ ಶುದ್ಧಚೈತನ್ಯಂ ತತ್ಪದಲಕ್ಷ್ಯಾರ್ಥಃ .
ಏವಂ ಚ ಜೀವೇಶ್ವರಯೋ ಚೈತನ್ಯರೂಪೇಣಾಽಭೇದೇ ಬಾಧಕಾಭಾವಃ . 

ಆದರೆ ಜೀವನು ಅಹಂಕಾರದಿಂದ ಕೂಡಿರುತ್ತಾನೆ ಮತ್ತು ಅವನ ಜ್ಞಾನವು ಸೀಮಿತವಾಗಿರುತ್ತದೆ, ಆದರೆ ಈಶ್ವರನು ನಿರಹಂಕಾರನು ಮತ್ತು ಸರ್ವಜ್ಞನು.   
ಹಾಗಾದಾಗ, "ಅದು ನೀನೇ" ಎಂಬ ಮಹಾವಾಕ್ಯ -  ಪರಸ್ಪರ ವಿರುದ್ಧ ಗುಣಲಕ್ಷಣಗಳನ್ನು ಹೊಂದಿರುವ ಈ ಇಬ್ಬರ ನಡುವೆ ಐಕ್ಯತೆ ಹೇಗೆ ಸಾಧ್ಯ? 
ಅದು ಹಾಗಲ್ಲ. 
'ನೀನು' ಎಂಬ ಪದದ ವಾಚ್ಯ (ಅಕ್ಷರಶಃ) ಅರ್ಥವು ಸ್ಥೂಲ ಮತ್ತು ಸೂಕ್ಷ್ಮ ಶರೀರ.
'ನೀನು' ಎಂಬ ಪದದ ಸೂಚ್ಯ ಅರ್ಥವು ಎಲ್ಲಾ ಉಪಾಧಿಗಳಿಂದ ಮುಕ್ತವಾದ ಮತ್ತು ಸಮಾಧಿ ಸ್ಥಿತಿಯಲ್ಲಿರುವ ಶುದ್ಧ ಚೈತನ್ಯ. ಹಾಗೆಯೇ 'ಅದು' ಪದದ  ಅಕ್ಷರಶಃ ಅರ್ಥ ಈಶ್ವರನು, ಸರ್ವಜ್ಞನು ಇತ್ಯಾದಿ; 
ಎಲ್ಲಾ ಉಪಾಧಿಗಳಿಂದ ಮುಕ್ತವಾದ ಶುದ್ಧ ಚೈತನ್ಯ ಎಂಬುದು 'ಅದು'  ಪದದ ಸೂಚ್ಯಾರ್ಥ. 
 
ಹೀಗಾಗಿ ಅರಿವಿನ ದೃಷ್ಟಿಕೋನದಿಂದ ಜೀವ ಮತ್ತು ಈಶ್ವರನ ನಡುವಿನ ಐಕ್ಯತೆಯ ಬಗ್ಗೆ ಯಾವುದೇ ವಿರೋಧಾಭಾಸಗಳಿಲ್ಲ.

11 ಜೀವನ್ಮುಕ್ತ
ಏವಂ ಚ ವೇದಾಂತವಾಕ್ಯೈಃ ಸದ್ಗುರೂಪದೇಶೇನ ಚ ಸರ್ವೇಷ್ವಪಿ
ಭೂತೇಷು ಯೇಷಾಂ
ಬ್ರಹ್ಮಬುದ್ಧಿರುತ್ಪನ್ನಾ ತೇ ಜೀವನ್ಮುಕ್ತಾಃ ಇತ್ಯರ್ಥಃ .
ನನು ಜೀವನ್ಮುಕ್ತಃ ಕಃ ?
ಯಥಾ ದೇಹೋಽಹಂ ಪುರುಷೋಽಹಂ ಬ್ರಾಹ್ಮಣೋಽಹಂ ಶೂದ್ರೋಽಹಮಸ್ಮೀತಿ
ದೃಢನಿಶ್ಚಯಸ್ತಥಾ ನಾಹಂ ಬ್ರಾಹ್ಮಣಃ ನ ಶೂದ್ರಃ ನ ಪುರುಷಃ
ಕಿಂತು ಅಸಂಗಃ ಸಚ್ಚಿದಾನಂದ ಸ್ವರೂಪಃ ಪ್ರಕಾಶರೂಪಃ ಸರ್ವಾಂತರ್ಯಾಮೀ
ಚಿದಾಕಾಶರೂಪೋಽಸ್ಮೀತಿ ದೃಢನಿಶ್ಚಯ
ರೂಪೋಽಪರೋಕ್ಷಜ್ಞಾನವಾನ್ ಜೀವನ್ಮುಕ್ತಃ ..

ಹೀಗೆ ವೇದಾಂತದ ಮಾತುಗಳು ಮತ್ತು ಸದ್ಗುರುವಿನ ಬೋಧನೆಗಳಿಂದ, ಎಲ್ಲ ಜೀವಿಗಳಲ್ಲಿ ಸತ್ಯದ ದರ್ಶನ ಜಾಗ್ರತಗೊಂಡವರು ಜೀವನ್ಮುಕ್ತರಾಗುತ್ತಾರೆ.

ಹಾಗಾದರೆ ಜೀವನ್ಮುಕ್ತ ಎಂದರೆ ಯಾರು? 
ಒಬ್ಬ ವ್ಯಕ್ತಿಯು 'ನಾನು ದೇಹ' ಎಂಬ ದೃಢ ನಂಬಿಕೆಯನ್ನು ಹೊಂದಿರುವಂತೆ; 'ನಾನು ಒಬ್ಬ ಮನುಷ್ಯ'; ‘ನಾನು ಬ್ರಾಹ್ಮಣ’; 'ನಾನು ಶೂದ್ರ',  ಎಂಬ ನಂಬಿಕೆಯನ್ನು ಹೊಂದಿರುವಂತೆ,  ತನ್ನ ಅಪರೋಕ್ಷ ಜ್ಞಾನದಿಂದ 'ನಾನು ಬ್ರಾಹ್ಮಣನಲ್ಲ' ‘ನಾನು ಶೂದ್ರನಲ್ಲ’; 'ನಾನು ಮನುಷ್ಯನಲ್ಲ' ಆದರೆ 'ನಾನು ಅಸಂಗನು' ಮತ್ತು 'ಅಸ್ತಿತ್ವ-ಪ್ರಜ್ಞೆ-ಆನಂದದ ಸ್ವಭಾವದವನು, ಪ್ರಕಾಶಮಾನನು, ಎಲ್ಲದರಲ್ಲೂ ಅಂತರ್ಗತನಾಗಿರುವವನು ಮತ್ತು ನಿರಾಕಾರನು ' ಎಂದು ದೃಢವಾಗಿ ಖಚಿತಪಡಿಸಿಕೊಂಡವನು ಜೀವನ್ಮುಕ್ತನು.

ಬ್ರಹ್ಮೈವಾಹಮಸ್ಮೀತ್ಯಪರೋಕ್ಷಜ್ಞಾನೇನ ನಿಖಿಲಕರ್ಮಬಂಧವಿನಿರ್ಮುಕ್ತಃ
ಸ್ಯಾತ್ .
 
ನಾನು ಕೇವಲ ಬ್ರಹ್ಮ ಎಂಬ ತಕ್ಷಣದ ಜ್ಞಾನದಿಂದ, ಒಬ್ಬ ವ್ಯಕ್ತಿಯು ಎಲ್ಲಾ ಕರ್ಮಗಳ ಬಂಧನದಿಂದ ಮುಕ್ತನಾಗುತ್ತಾನೆ.

ಕರ್ಮಗಳು

ಕರ್ಮಾಣಿ ಕತಿವಿಧಾನಿ ಸಂತೀತಿ ಚೇತ್
ಆಗಾಮಿಸಂಚಿತಪ್ರಾರಬ್ಧಭೇದೇನ ತ್ರಿವಿಧಾನಿ ಸಂತಿ .

ಎಷ್ಟು ರೀತಿಯ ಕರ್ಮಗಳಿವೆ ಎಂದು ಕೇಳಿದರೆ, ಮೂರು ರೀತಿಯ ಕರ್ಮಗಳಿವೆ, ಅಂದರೆ, ಆಗಾಮಿ, ಸಂಚಿತ ಮತ್ತು ಪ್ರಾರಬ್ಧ ಕರ್ಮಗಳು.
ಜ್ಞಾನೋತ್ಪತ್ತ್ಯನಂತರಂ ಜ್ಞಾನಿದೇಹಕೃತಂ ಪುಣ್ಯಪಾಪರೂಪಂ ಕರ್ಮ
ಯದಸ್ತಿ ತದಾಗಾಮೀತ್ಯಭಿಧೀಯತೇ .
ಜ್ಞಾನೋದಯವಾದ, ಸಾಕ್ಷಾತ್ಕಾರಗೊಂಡ ವ್ಯಕ್ತಿಯ (ಜ್ಞಾನಿ) ದೇಹವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲಿತಾಂಶಗಳನ್ನು ಆಗಾಮಿ ಕರ್ಮ ಎಂದು ಕರೆಯಲಾಗುತ್ತದೆ.
ಸಂಚಿತಂ ಕರ್ಮ ಕಿಂ ?
ಅನಂತಕೋಟಿಜನ್ಮನಾಂ ಬೀಜಭೂತಂ ಸತ್ ಯತ್ಕರ್ಮಜಾತಂ ಪೂರ್ವಾರ್ಜಿತಂ
ತಿಷ್ಠತಿ ತತ್ ಸಂಚಿತಂ ಜ್ಞೇಯಂ .
 
ಹಿಂದಿನ ಎಲ್ಲಾ ಜನ್ಮಗಳಲ್ಲಿ ಮಾಡಿದ ಕರ್ಮಗಳ ಫಲಿತಾಂಶವು ಬೀಜ ರೂಪದಲ್ಲಿದ್ದು, ಭವಿಷ್ಯದಲ್ಲಿ ಅಂತ್ಯವಿಲ್ಲದ ಕೋಟಿ ಜನ್ಮಗಳಿಗೆ ಕಾರಣವಾಗುತ್ತದೆ, ಇದನ್ನು ಸಂಚಿತ ಕರ್ಮ ಎಂದು ಕರೆಯಲಾಗುತ್ತದೆ.
ಪ್ರಾರಬ್ಧಂ ಕರ್ಮ ಕಿಮಿತಿ ಚೇತ್ .
ಇದಂ ಶರೀರಮುತ್ಪಾದ್ಯ ಇಹ ಲೋಕೇ ಏವಂ ಸುಖದುಃಖಾದಿಪ್ರದಂ ಯತ್ಕರ್ಮ
ತತ್ಪ್ರಾರಬ್ಧಂ
ಭೋಗೇನ ನಷ್ಟಂ ಭವತಿ ಪ್ರಾರಬ್ಧಕರ್ಮಣಾಂ ಭೋಗಾದೇವ ಕ್ಷಯ ಇತಿ . 
ಈ ದೇಹಕ್ಕೆ ಜನ್ಮ ನೀಡಿದ ನಂತರ (ಈ ದೇಹದಲ್ಲಿ ಹುಟ್ಟಿದ ನಂತರ), ಈ ಲೋಕದಲ್ಲಿಯೇ ಸುಖ ಅಥವಾ ದುಃಖದ ರೂಪದಲ್ಲಿ ಫಲ ನೀಡುವ ಮತ್ತು ಅವುಗಳನ್ನು ಅನುಭವಿಸುವುದರಿಂದ ಅಥವಾ ದುಃಖಿಸುವುದರಿಂದ ಮಾತ್ರ ನಾಶವಾಗುವ ಕರ್ಮಗಳನ್ನು ಪ್ರಾರಬ್ಧ ಕರ್ಮ ಎಂದು ಕರೆಯಲಾಗುತ್ತದೆ. ಸುಖದುಃಖಗಳನ್ನು ಭೋಗಿಸುರದರಿಂದ ಮಾತ್ರ ಪ್ರಾರಬ್ಧಕರ್ಮದ ನಾಶವು ಆಗುತ್ತದೆ.

13 ಬಂಧನದಿಂದ ಮುಕ್ತಿ

ಸಂಚಿತಂ ಕರ್ಮ ಬ್ರಹ್ಮೈವಾಹಮಿತಿ ನಿಶ್ಚಯಾತ್ಮಕಜ್ಞಾನೇನ ನಶ್ಯತಿ .
ಆಗಾಮಿ ಕರ್ಮ ಅಪಿ ಜ್ಞಾನೇನ ನಶ್ಯತಿ ಕಿಂಚ ಆಗಾಮಿ ಕರ್ಮಣಾಂ
ನಲಿನೀದಲಗತಜಲವತ್ ಜ್ಞಾನಿನಾಂ ಸಂಬಂಧೋ ನಾಸ್ತಿ .
'ನಾನು ಬ್ರಹ್ಮ' ಎಂಬ ದೃಢ ಜ್ಞಾನದಿಂದ ಸಂಚಿತ ಕರ್ಮ ನಾಶವಾಗುತ್ತದೆ. ಜ್ಞಾನದಿಂದ ಆಗಮಿ ಕರ್ಮವೂ ನಾಶವಾಗುತ್ತದೆ. ತಾವರೆ ಎಲೆಯು ಅದರ ಮೇಲಿನ ನೀರಿನಿಂದ ಪ್ರಭಾವಿತವಾಗದ ಹಾಗೆ,  ಜ್ಞಾನಿಯು ಆಗಾಮಿ ಕರ್ಮದಿಂದ ಪ್ರಭಾವಿತನಾಗುವುದಿಲ್ಲ.
ಕಿಂಚ ಯೇ ಜ್ಞಾನಿನಂ ಸ್ತುವಂತಿ ಭಜಂತಿ ಅರ್ಚಯಂತಿ ತಾನ್ಪ್ರತಿ
ಜ್ಞಾನಿಕೃತಂ ಆಗಾಮಿ ಪುಣ್ಯಂ ಗಚ್ಛತಿ .
ಯೇ ಜ್ಞಾನಿನಂ ನಿಂದಂತಿ ದ್ವಿಷಂತಿ ದುಃಖಪ್ರದಾನಂ ಕುರ್ವಂತಿ ತಾನ್ಪ್ರತಿ
ಜ್ಞಾನಿಕೃತಂ ಸರ್ವಮಾಗಾಮಿ ಕ್ರಿಯಮಾಣಂ ಯದವಾಚ್ಯಂ ಕರ್ಮ
ಪಾಪಾತ್ಮಕಂ ತದ್ಗಚ್ಛತಿ .
ಸುಹೃದಃ ಪುಣ್ಯಕೃತಂ ದುರ್ಹೃದಃ ಪಾಪಕೃತ್ಯಂ ಗೃಹ್ಣಂತಿ .
 
ಇದಲ್ಲದೆ, ಜ್ಞಾನಿಯನ್ನು ಸ್ತುತಿಸುವ, ಸೇವೆ ಮಾಡುವ ಮತ್ತು ಪೂಜಿಸುವವರಿಗೆ, ಜ್ಞಾನಿ ಮಾಡಿದ ಕರ್ಮಗಳ ಫಲಗಳು ಹೋಗುತ್ತವೆ. ಜ್ಞಾನಿಯನ್ನು ಟೀಕಿಸುವ, ದ್ವೇಷಿಸುವ ಅಥವಾ ನೋವನ್ನುಂಟುಮಾಡುವವರಿಗೆ, ಜ್ಞಾನಿ ಮಾಡಿದ ಎಲ್ಲಾ ಪ್ರಶಂಸನೀಯವಲ್ಲದ ಮತ್ತು ಪಾಪಕರ ಕರ್ಮಗಳ ಫಲಿತಾಂಶಗಳು ಹೋಗುತ್ತವೆ. 

ತಥಾ ಚಾತ್ಮವಿತ್ಸಂಸಾರಂ ತೀರ್ತ್ವಾ ಬ್ರಹ್ಮಾನಂದಮಿಹೈವ ಪ್ರಾಪ್ನೋತಿ .
ತರತಿ ಶೋಕಮಾತ್ಮವಿತ್ ಇತಿ ಶ್ರುತೇಃ .
ತನುಂ ತ್ಯಜತು ವಾ ಕಾಶ್ಯಾಂ ಶ್ವಪಚಸ್ಯ ಗೃಹೇಽಥ ವಾ .
ಜ್ಞಾನಸಂಪ್ರಾಪ್ತಿಸಮಯೇ ಮುಕ್ತಾಽಸೌ ವಿಗತಾಶಯಃ . ಇತಿ ಸ್ಮೃತೇಶ್ಚ .

ಹೀಗೆ ಆತ್ಮಜ್ಞಾನಿಯು ಸಂಸಾರವನ್ನು ದಾಟಿ ಇಹದಲ್ಲಿಯೇ ಬ್ರಹ್ಮಾನಂದವನ್ನು ಪಡೆಯುತ್ತಾನೆ. ಎಲ್ಲಾ ದುಃಖಗಳನ್ನು ಮೀರುತ್ತಾನೆ. ಎಂದು ಶ್ರುತಿಯು(ವೇದಗಳು) ದೃಢಪಡಿಸುತ್ತದೆ.
ಜ್ಞಾನಿಯು ಕಾಶಿಯಲ್ಲಿ ದೇಹ ತ್ಯಜಿಸಲಿ ಅಥವಾ ನಾಯಿಭಕ್ಷಕನ ಮನೆಯಲ್ಲಿ ದೇಹವನ್ನು ತ್ಯಜಿಸಲಿ {ಅದು ಮುಖ್ಯವಲ್ಲ} ಏಕೆಂದರೆ ಜ್ಞಾನವನ್ನು ಪಡೆಯುವ ಸಮಯದಲ್ಲಿಯೇ ಅವನು ತನ್ನ ಎಲ್ಲಾ ಕರ್ಮಗಳ ಫಲಗಳಿಂದ ಬಿಡುಗಡೆಯಾಗಿ, ಮುಕ್ತನಾಗುತ್ತಾನೆ. ಹೀಗೆಂದು ಸ್ಮೃತಿಗಳನ್ನು ಸಹ ಪ್ರತಿಪಾದಿಸಿವೆ.

ಇತಿ ಶ್ರೀಶಂಕರಭಗವತ್ಪಾದಾಚಾರ್ಯಪ್ರಣೀತಃ ತತ್ತ್ವಬೋಧಪ್ರಕರಣಂ ಸಮಾಪ್ತಂ .

Comments

Popular posts from this blog

ಶಿವಾನಂದಲಹರಿ

ಭಗವದ್ಗೀತಾ ಆರತಿ