ಮುಂಡಕ ಉಪನಿಷತ್ತು
ಪರಿಚಯ
- ಈ ಉಪನಿಷತ್ತು ಸನ್ಯಾಸಿಗಳಿಗಾಗಿ ಬರೆಯಲ್ಪಟ್ಟಿದೆ.
- ಇದು ನಮ್ಮ ಅಜ್ಞಾನವನ್ನು ಮುಂಡನ ಮಾಡುತ್ತದೆ.
- ಮುಂಡಕ ಎಂದರೆ ತಲೆ ಎಂಬ ಅರ್ಥವೂ ಆಗಬಹುದು - ಇದು ಎಲ್ಲ ಜ್ಞಾನಗಳಲ್ಲಿ ಪ್ರಮುಖವಾಗಿದೆ ಎಂಬ ಅರ್ಥವೂ ಆಗಬಹುದು.
- ಮೊದಲನೆಯ ಮುಂಡಕ ಶ್ರೇಷ್ಠ ಹಾಗೂ ಕನಿಷ್ಠ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ಮಂಡಿಸುತ್ತದೆ.
- ಎರಡನೆಯ ಮುಂಡಕ ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ.
- ಮೂರನೆಯ ಮುಂಡಕ ಈ ವಿವರಣೆಯನ್ನು ಮುಂದುವರಿಸುತ್ತದೆ.
.. ಶ್ರೀಃ ..
.. ಮುಂಡಕೋಪನಿಷತ್ ..
ಪ್ರಾರ್ಥನೆ
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ .
ಸ್ಥಿರೈರಂಗೈಸ್ತುಷ್ಟುವಾಗ್ ಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ ..
ಓಂ. ಶಾಂತಿ! ಶಾಂತಿ! ಶಾಂತಿ!
ಓಂ. ಓ ದೇವತೆಗಳೇ, ನಾವು ನಮ್ಮ ಕಿವಿಗಳಿಂದ ಶುಭವಾದದ್ದನ್ನು ಕೇಳೋಣ! ಓ ಪೂಜಿಸುವ ದೇವತೆಗಳೇ, ನಾವು ನಮ್ಮ ಕಣ್ಣುಗಳಿಂದ ಒಳ್ಳೆಯದನ್ನು ನೋಡೋಣ! ಅಂಗಗಳು ಮತ್ತು ದೇಹದಲ್ಲಿ ಬಲಶಾಲಿಗಳಾದ ನಾವು ನಿನ್ನ ಸ್ತುತಿಯನ್ನು ಹಾಡೋಣ ಮತ್ತು ಪ್ರಜಾಪತಿ ನಮಗೆ ನೀಡಿದ ಆಯುಸ್ಸನ್ನು ಆನಂದಿಸೋಣ!
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ .
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ..
.. ಓಂ ಶಾಂತಿಃ ಶಾಂತಿಃ ಶಾಂತಿಃ ..
ಯಾರ ಪ್ರಸಿದ್ಧಿ ಅಪಾರವೋ ಆ ಇಂದ್ರನು ನಮ್ಮನ್ನು ಆಶೀರ್ವದಿಸಲಿ. ಸರ್ವಜ್ಞಾನಿ ಪೂಷನು ನಮ್ಮನ್ನು ಆಶೀರ್ವದಿಸಲಿ. ಸರ್ವರಕ್ಷಕ ಗರುಡನು ನಮ್ಮನ್ನು ಆಶೀರ್ವದಿಸಲಿ. ಭಗವಾನ್ ಬೃಹಸ್ಪತಿಯು ನಮ್ಮನ್ನು ರಕ್ಷಿಸಲಿ. ಭಗವಾನ್ ಬೃಹಸ್ಪತಿಯು ನಮ್ಮನ್ನು ರಕ್ಷಿಸಲಿ.
.. ಓಂ ಬ್ರಹ್ಮಣೇ ನಮಃ ..
.. ಪ್ರಥಮಮುಂಡಕೇ ಪ್ರಥಮಃ ಖಂಡಃ ..
ದೇವಗಣದಲ್ಲಿ ಬ್ರಹ್ಮ ಪ್ರಥಮವಾಗಿ ಪ್ರಕಟನಾದನು, ಅವನು ಈ ವಿಶ್ವದ ಕರ್ತೃವೂ, ಜಗದ ರಕ್ಷಕನೂ ಆಗಿದ್ದಾನೆ. ಅವನು ಸರ್ವ ವಿದ್ಯೆಯೂ ಯಾವುದರ ಮೇಲೆ ಅವಲಂಬಿಸಿದೆಯೋ ಆ ಬ್ರಹ್ಮವಿದ್ಯೆಯನ್ನು ತನ್ನ ಹಿರಿಯ ಮಗನಾದ ಅಥರ್ವನಿಗೆ ಹೇಳಿದ.
ಶಂಕರ ಭಾಷ್ಯ:
- ಬ್ರಹ್ಮ ಎಂದರೆ ಇಲ್ಲಿ ಶ್ರೇಷ್ಠ ಎಂಬ ಅರ್ಥ ಬರುವದು - ಬೇರೆಲ್ಲರಿಗಿಂತ ಗುಣ, ಜ್ಞಾನ, ಶಕ್ತಿ ಇವೆಲ್ಲವುಗಳಲ್ಲಿ ಶ್ರೇಷ್ಠನು.
- ಎಲ್ಲ ದೇವರಲ್ಲ ಪ್ರಪ್ರಥಮವಾಗಿ ಸೃಷ್ಠಿಯಾದವನು ಬ್ರಹ್ಮ.
- ಸಂಬಬೂವ ಎಂದರೆ ನಮ್ಮ ಮನುಜರಂತೆ ಹುಟ್ಟದೆ ಸಂಭೂತನಾದ ಎಂಬ ಅರ್ಥ.
- ದೇವಾನಾಂ ಪ್ರಥಮಃ ಎಂದರೆ ದೇವತೆಗಳಲ್ಲಿ ಪ್ರಥಮವಾಗಿ ಎಂದೂ ಆಗಬಹುದು, ದೇವತೆಗಳಲ್ಲಿ ಶ್ರೇಷ್ಠ ಎಂದೂ ಆಗಬಹುದು.
- ಬ್ರಹ್ಮವಿದ್ಯೆ ಎಂದರೆ ಯಾವ ವಿದ್ಯೆಯನ್ನು ಅರಿತರೆ ಬೇರೆ ಎಲ್ಲ ವಿದ್ಯೆಗಳೂ ತಿಳಿದುಬರುವವೋ ಆ ವಿದ್ಯೆ.
- ಶೃತಿಗಳ ಪ್ರಕಾರ ಈ ವಿದ್ಯೆ ತಿಳಿದರೆ - ಯಾವುದೂ ಕೇಳಿಸಲಾರದೋ ಅದು ಕೇಳಿ ಬರುವದು, ಯಾವುದು ಯೋಚಿಸಲು ಅಸಾಧ್ಯವೋ ಆ ಯೋಚನೆ ಸ್ಪಷ್ಟವಾಗುವದು, ಯಾವುದು ತಿಳಿಯಲಸಾಧ್ಯವೋ ಅದು ತಿಳಿದು ಬರುವದು.
ಅಥರ್ವಣೇ ಯಾಂ ಪ್ರವದೇತ ಬ್ರಹ್ಮಾಽಥರ್ವಾ ತಂ
ಪುರೋವಾಚಾಂಗಿರೇ ಬ್ರಹ್ಮವಿದ್ಯಾಂ .
ಸ ಭಾರದ್ವಾಜಾಯ ಸತ್ಯವಾಹಾಯ ಪ್ರಾಹ
ಭಾರದ್ವಾಜೋಽಂಗೀರಸೇ ಪರಾವರಾಂ .. ೨..
ಅಥರ್ವನಿಗೆ ಹೇಳಿ ಕೊಟ್ಟ ಬ್ರಹ್ಮವಿದ್ಯೆಯನ್ನು ಅವನು ಪುರಾತನ ಕಾಲದಲ್ಲಿ ಅಂಗೀರನಿಗೆ ಹೇಳದನು. ಅವನು ಭಾರದ್ವಾಜ ಕುಲದ ಸತ್ಯವಾಹನಿಗೆ ಹೇಳಿದನು. ಭಾರದ್ವಾಜ (ಸತ್ಯವಾಹನು) ಅಂಗೀರಸನಿಗೆ ಈ ಪೂರ್ವಜರಿಂದ ಮುಂದಿನವವರಿಗೆ ಹಬ್ಬುವ ಈ ಜ್ಞಾನವನ್ನು ಕಲಿಸಿದನು.
ಪರಾವರಮ್ ಅಂದರೆ ಶ್ರೇಷ್ಠ ಋಷಿಗಳಿಂದ ಅವರ ಶಿಷ್ಯ ಋಷಿಗಳಿಗೆ ಕಲಿಸಲ್ಪಟ್ಟ, ಅಥವಾ ಗುರುವಿನಿಂದ ಶಿಷ್ಯನಿಗೆ ಕಲಿಸಲ್ಪಟ್ಟ
ಶೌನಕೋ ಹ ವೈ ಮಹಾಶಾಲೋಽಂಗೀರಸಂ ವಿಧಿವದುಪಸನ್ನಃ ಪಪ್ರಚ್ಛ .
ಕಸ್ಮಿನ್ನು ಭಗವೋ ವಿಜ್ಞಾತೇ ಸರ್ವಮಿದಂ ವಿಜ್ಞಾತಂ ಭವತೀತಿ .. ೩..
ಶ್ರೇಷ್ಠ ಗೃಹಸ್ಥನಾದ ಶೌನಕನು ವಿಧಿವತ್ತಾಗಿ ಆಂಗೀರಸನನ್ನು ಸಮೀಪಸಿ ಹೀಗೆಂದು ಕೇಳಿದನು "ಭಗವಾನ್, ಯಾವ ಜ್ಞಾನವನ್ನು ತಿಳಿದಾಗ ಎಲ್ಲ ಜ್ಞಾನವೂ ಅರಿವಿಗೆ ಬರುತ್ತದೆ?"
- ಶೌನಕ - ಶುನಕನ ಪುತ್ರ
- ವಿಧಿವತ್ - ಶಾಸ್ತ್ರಬದ್ಧವಾಗಿ
- ನಮೃತೆಯಿಂದ ಹಾಗೂ ಗೌರವಪೂರ್ವಕವಾಗಿ
- ಯಾವ ಜ್ಞಾನ.. - ಬಂಗಾರದ ಅರಿವಿದ್ದಾಗ ಅದರ ಬೇರೆ ಬೇರೆ ರೂಪಗಳನ್ನು ನೋಡಿದರೂ ಅದು ಬಂಗಾರವೇ ಎಂದು ಗೊತ್ತಾಗುತ್ತದೆ - ಹಾಗೆಯೇ ಯಾವ ಜ್ಞಾನವನ್ನು ಅರಿತಾಗ ಬೇರೆ ಎಲ್ಲ ಜ್ಞಾನಗಳು ತನ್ನಷ್ಟಕ್ಕೇ ಲಬ್ಧವಾಗುತ್ತವೆಯೋ...
- ಶೌನಕ ಯಾರಿಂದಲೋ ಸಕಲ ಜ್ಞಾನದ ಮೂಲವಾದ ಜ್ಞಾನವೊಂದಿದೆ ಎಂದು ಕೇಳಿರಬೇಕು. ಅದಕ್ಕಾಗಿ ಈ ಪ್ರಶ್ನೆ ಕೇಳುತ್ತಿದ್ದಾನೆ.
ತಸ್ಮೈ ಸ ಹೋವಾಚ .
ದ್ವೇ ವಿದ್ಯೇ ವೇದಿತವ್ಯೇ ಇತಿ ಹ ಸ್ಮ
ಯದ್ಬ್ರಹ್ಮವಿದೋ ವದಂತಿ ಪರಾ ಚೈವಾಪರಾ ಚ .. ೪..
ಅವನು ಶೌನಕನಿಗೆ ಹೇಳಿದನು " ಬ್ರಹ್ಮನನ್ನು ತಿಳಿದವರು ಹೇಳುತ್ತಾರೆ - ಕಲಿಯಬೇಕಾದ ವಿದ್ಯೆಗಳು ಎರಡಿವೆ - ಒಂದು ಪರ (ಉಚ್ಚ), ಇನ್ನೊಂದು ಅಪರ (ನೀಚ)."
- ಪರ ವಿದ್ಯೆ - ಪರಮಾತ್ಮನ ಕುರಿತಾದ ಜ್ಞಾನ.
- ಅಪರ ವಿದ್ಯೆ - ಸತ್ಕರ್ಮ ಹಾಗೂ ದುಷ್ಕರ್ಮಗಳ ಸಾಧನಗಳು ಹಾಗೂ ಪರಿಣಾಮಗಳ ಜ್ಞಾನ. ಬಾಹ್ಯ ಪ್ರಪಂಚದ ಜ್ಞಾನ. ಆದರೆ ಈ ವಿದ್ಯೆ ಬರೀ ಅಜ್ಞಾನಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಇದು ಪರಬ್ರಹ್ಮನ ಜ್ಞಾನವನ್ನು ಕೊಡುವದಿಲ್ಲ.
- ಶೌನಕ ಕೇಳಿದ್ದು - ಯಾವ ವಿದ್ಯೆಯನ್ನು ತಿಳಿದಾಗ ಮನುಷ್ಯನು ಸರ್ವಜ್ಞಾನಿಯಾಗುತ್ತಾನೆ ಎಂದು. ಆದರೆ ಆಂಗೀರಸ ಉತ್ತರಿಸಿದ್ದು ಬೇರೆ. ಆದರೆ ಇದರಲ್ಲಿ ತಪ್ಪಿಲ್ಲ. ಯಾಕೆಂದರೆ ಅಪರ ವಿದ್ಯೆಯ ಜ್ಞಾನದಿಂದ ಇನ್ನೇನೂ ಅರಿವಿಗೆ ಬರುವದಿಲ್ಲ.
ತತ್ರಾಪರಾ ಋಗ್ವೇದೋ ಯಜುರ್ವೇದಃ ಸಾಮವೇದೋಽಥರ್ವವೇದಃ
ಶಿಕ್ಷಾ ಕಲ್ಪೋ ವ್ಯಾಕರಣಂ ನಿರುಕ್ತಂ ಛಂದೋ ಜ್ಯೋತಿಷಮಿತಿ .
ಅಥ ಪರಾ ಯಯಾ ತದಕ್ಷರಮಧಿಗಮ್ಯತೇ .. ೫..
ಇವುಗಳಲ್ಲಿ ಅಪರ ವಿದ್ಯೆಯೆಂದರೆ- ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದ ಹಾಗೂ ಜ್ಯೋತಿಷ್ಯಗಳು. ಪರ ವಿದ್ಯೆ ಯಾವುದೆಂದರೆ ಯಾವುದರಿಂದ ಅಕ್ಷರನಾದ ಬ್ರಹ್ಮನು ಪ್ರಾಪ್ತನಾಗುತ್ತಾನೋ ಅದು.
ಶಂಕರ ಭಾಷ್ಯ: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ - ಈ ನಾಲ್ಕು ವೇದಗಳು, ಶಿಕ್ಷಾ, ಆಚಾರ ಸಂಹಿತೆ, ವ್ಯಾಕರಣ, ನಿರುಕ್ತ, ಛಂದಸ್ ಮತ್ತು ಜ್ಯೋತಿಷ್ಯ - ಈ ಆರು (ವೇದಗಳ) ಅಂಗಗಳು ಇವೆಲ್ಲವೂ ಅಪರ ಎಂದು ಕರೆಯಲ್ಪಡುವ ಜ್ಞಾನ; ಪರ ವಿದ್ಯೆ ಎಂದರೆ - ಅತ್ಯುನ್ನತವಾದದ್ದನ್ನು ಸಾಧಿಸುವುದು, ಇದು ಜ್ಞಾನದ ಪ್ರಜ್ಞೆಗಿಂತ ಭಿನ್ನವಾಗಿಲ್ಲ. ಅತ್ಯುನ್ನತವಾದುದನ್ನು ಸಾಧಿಸುವುದು ಎಂದರೆ ಕೇವಲ ಅಜ್ಞಾನವನ್ನು ತೆಗೆದುಹಾಕುವುದಾಗಿದೆ. ಗುರುವನ್ನು ಸಮೀಪಿಸುವುದು ಮತ್ತು ಎಲ್ಲಾ ಆಸೆಗಳನ್ನು ತಿರಸ್ಕರಿಸುವುದು ಮುಂತಾದ ಇತರ ಪ್ರಯತ್ನಗಳಿಲ್ಲದೇ, ಕೇವಲ ಶಬ್ದ ಸಂಯೋಜನೆಯ ಪಾಂಡಿತ್ಯದಿಂದ ಅಮರತ್ವವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮ ಜ್ಞಾನದ ಪ್ರತ್ಯೇಕ ವರ್ಗೀಕರಣ ಮತ್ತು ಅದರ ಹೆಸರನ್ನು ಪರ ವಿದ್ಯಾ ಎಂದು ಕರೆಯುವುದು ಸೂಕ್ತವಾಗಿದೆ.
ಯತ್ತದದ್ರೇಶ್ಯಮಗ್ರಾಹ್ಯಮಗೋತ್ರಮವರ್ಣ-
ಮಚಕ್ಷುಃಶ್ರೋತ್ರಂ ತದಪಾಣಿಪಾದಂ .
ನಿತ್ಯಂ ವಿಭುಂ ಸರ್ವಗತಂ ಸುಸೂಕ್ಷ್ಮಂ
ತದವ್ಯಯಂ ಯದ್ಭೂತಯೋನಿಂ ಪರಿಪಶ್ಯಂತಿ ಧೀರಾಃ .. ೬..
ಪರವಿದ್ಯೆ ಎಂದರೆ ಬ್ರಹ್ಮಜ್ಞಾನ - ಆ ಬ್ರಹ್ಮನ ವರ್ಣನೆ ಈ ಶ್ಲೋಕದಲ್ಲಿದೆ - ಯಾವುದನ್ನು ನೋಡಲು ಅಸಾಧ್ಯವೋ ಅಂದರೆ ಜ್ಞಾನೇಂದ್ರಿಯಗಳಿಗೆ ಅಲಭ್ಯವೋ, ಗ್ರಹಿಸಲು ಅಸಾಧ್ಯವೋ - ಅಂದರೆ ಕರ್ಮೇಂದ್ರಿಯಗಳಿಗೆ ಅಲಭ್ಯವೋ, ಯಾವ ಮೂಲವನ್ನೂ ಹೊಂದಿರದ, ಯಾವುದೇ ಗುಣ-ಲಕ್ಷಣಗಳನ್ನು ಹೊಂದಿರದ, ಕಣ್ಣು, ಕಿವಿಗಳನ್ನು ಹೊಂದಿರದ, ಕೈ-ಕಾಲುಗಳನ್ನು ಹೊಂದಿರದ, ನಿತ್ಯವಾದ - ಅವಿನಾಶಿಯಾದ, ಸರ್ವಭೂತಗಳಲ್ಲೂ ಇರುವ, ಆಕಾಶದಂತೆ ಸರ್ವವ್ಯಾಪಿಯಾದ, ಶಬ್ದ ಇತ್ಯಾದಿಗಳನ್ನು ಹೊಂದಿರದ ಕಾರಣ ಸುಸೂಕ್ಷ್ಮವಾದ, ಅವ್ಯಯವಾದ, ಎಲ್ಲ ಭೂತಗಳ ಮೂಲವೆಂದು ವಿವೇಕಿಗಳ ಅರಿತಿರುವ ಬ್ರಹ್ಮ ಜ್ಞಾನವೇ ಪರವಿದ್ಯೆ.
ಯಥೋರ್ಣನಾಭಿಃ ಸೃಜತೇ ಗೃಹ್ಣತೇ ಚ
ಯಥಾ ಪೃಥಿವ್ಯಾಮೋಷಧಯಃ ಸಂಭವಂತಿ .
ಯಥಾ ಸತಃ ಪುರುಷಾತ್ಕೇಶಲೋಮಾನಿ
ತಥಾಽಕ್ಷರಾತ್ಸಂಭವತೀಹ ವಿಶ್ವಂ .. ೭..
ಹೇಗೆ ಜೇಡರ ಹುಳುವು ಬಲೆಯನ್ನು ರಚಿಸಿ, ಅದನ್ನು ಹಿಡಿಯುವಂತೆ, ಹೇಗೆ ಸಸ್ಯಗಳು ಪೃಥ್ವಿಯಲ್ಲಿ ಹುಟ್ಟುತ್ತ ಸಾಯುತ್ತ ಇರುವಂತೆ, ಹೇಗೆ ಮನುಷ್ಯನ ಕೇಶ-ರೋಮಗಳು ರಚಿತವಾಗುವಂತೆ, ಹಾಗೆಯೇ ಬ್ರಹ್ಮನಿಂದ ಈ ವಿಶ್ವವು ರಚಿತವಾಗುತ್ತದೆ.
ಬ್ರಹ್ಮನಿಂದ ಈ ಸೃಷ್ಠಿಯ ಎಲ್ಲಾ ಜೀವಗಳು ರಚಿತವಾಗಿವೆ - ಹೇಗೆ ಎಂಬುದನ್ನು ವಿವರಿಸಲು ಉದಾಹರಣೆಗಳನ್ನು ಕೊಡಲಾಗಿದೆ.
ತಪಸಾ ಚೀಯತೇ ಬ್ರಹ್ಮ ತತೋಽನ್ನಮಭಿಜಾಯತೇ .
ಅನ್ನಾತ್ಪ್ರಾಣೋ ಮನಃ ಸತ್ಯಂ ಲೋಕಾಃ ಕರ್ಮಸು ಚಾಮೃತಂ .. ೮..
ತಪಸ್ಸಿನಿಂದ ಬ್ರಹ್ಮನ ಸೃಷ್ಠಿಸುವ ಪ್ರೇರಣೆ ವೃದ್ಧಿಯಾಗುತ್ತದೆ. ಬ್ರಹ್ಮನಿಂದ ವಸ್ತು ಉತ್ಪನ್ನವಾಗುತ್ತದೆ. ವಸ್ತುವಿನಿಂದ ಕ್ರಮೇಣವಾಗಿ ಪ್ರಾಣ, ಮನ ಹಾಗೂ ಸತ್ಯ ಹಾಗೂ ಲೋಕ ಹಾಗೂ ಕರ್ಮ ಉತ್ಪನ್ನವಾಗುತ್ತವೆ ಹಾಗೂ ಕೃತಿಗಳಲ್ಲಿ ಅಮರತ್ವ ಉತ್ಪತ್ತಿಯಾಗುತ್ತದೆ
ಈ ಶ್ಲೋಕ ಸೃಷ್ಠಿಯು ರಚನೆಯಾದ ಕ್ರಮವನ್ನು ವಿವರಿಸುತ್ತದೆ.
- ತಪಸ್ಸಿನ ಶಕ್ತಿಯಿಂದ - ಸೃಷ್ಟಿಯ ರಚನೆಯ ಕಲ್ಪನೆಯಿಂದ ಬ್ರಹ್ಮ ಉತ್ಸುಕನಾಗುತ್ತಾನೆ. ಅವನಿಂದ ಆಹಾರ ಅಂದರೆ ಮಾಯೆ ಇಡೀ ವಿಶ್ವ ಅವ್ಯಕ್ತವಾದ ಬೀಜ ರೂಪದಲ್ಲಿ ಸೃಷ್ಠಿಯಾಗುತ್ತದೆ.
- ಅದರಿಂದ ಪ್ರಾಣ - ಅಂದರೆ ಹಿರಣ್ಯಗರ್ಭ ಉತ್ಪತ್ತಿಯಾಗುತ್ತದೆ. ಈ ಪ್ರಾಣ ಎಂದರೆ ಸೃಷ್ಠಿಕರ್ತ ಬ್ರಹ್ಮ. ಇದು ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿಗಳನ್ನು ಹೊಂದಿದೆ.
- ಇದರಿಂದ ಮನ ಹಾಗೂ ಪಂಚಭೂತಗಳು ಹಾಗೂ ಹದಿನಾಲ್ಕು ಲೋಕಗಳು ಸೃಷ್ಠಿಯಾಗುತ್ತವೆ. ಈ ಲೋಕಗಳಲ್ಲಿ ದೇವತೆಗಳು, ಮನುಷ್ಯರು, ಪ್ರಾಣಿ-ಪಕ್ಷಿಗಳು ಇರುತ್ತವೆ.
- ಹೀಗೆ ಸೃಷ್ಠಿಯಾದ ಜೀವಿಗಳು ಮಾಡುವ ಕರ್ಮಗಳಿಂದ ಅವುಗಳ ದೃಷ್ಟ ಹಾಗೂ ಅದೃಷ್ಟ ಫಲಗಳು ಆಗುತ್ತವೆ.
ಯಃ ಸರ್ವಜ್ಞಃ ಸರ್ವವಿದ್ಯಸ್ಯ ಜ್ಞಾನಮಯಂ ತಪಃ .
ತಸ್ಮಾದೇತದ್ಬ್ರಹ್ಮ ನಾಮ ರೂಪಮನ್ನಂ ಚ ಜಾಯತೇ .. ೯..
ಯಾರು ಎಲ್ಲವನ್ನೂ ತಿಳಿದವನು ಮತ್ತು ಎಲ್ಲದರ ಜ್ಞಾನಿಯೋ, ಯಾರ ತಪಸ್ಸು ಜ್ಞಾನಮಯವೋ, ಅವನಿಂದ ಇಲ್ಲಿ ಬ್ರಹ್ಮ ಉತ್ಪತ್ತಿಯಾಗುತ್ತದೆ ಹಾಗೂ ನಾಮ ಮತ್ತು ರೂಪ ಮತ್ತು ವಸ್ತು ಉತ್ಪತ್ತಿಯಾಗುತ್ತದೆ . ಇದೇ ಆ ಸತ್ಯ.
ಸರ್ವಜ್ಞ ಎಂದರೆ ಎಲ್ಲ ತಿಳಿದವನು. ಆದರೆ ಸರ್ವವಿತ್ ಎಂದರೆ ಪ್ರತಿಯೊಂದರ ಬಗ್ಗೆ ಎಲ್ಲವನ್ನೂ ತಿಳಿದವನು ಎಂದು ಅರ್ಥ. ಅವನು ಎಲ್ಲದರಲ್ಲೂ ವಿಶೇಷಜ್ಞ. ಮಾನವರು ಸರ್ವಜ್ಞರಾಗಬಹುದು ಆದರೆ ಕೇವಲ ಬ್ರಹ್ಮನ್ ಮಾತ್ರ ಸರ್ವವಿತ್ ಆಗಬಲ್ಲ.
.. ಇತಿ ಮುಂಡಕೋಪನಿಷದಿ ಪ್ರಥಮಮುಂಡಕೇ ಪ್ರಥಮಃ ಖಂಡಃ ..
.. ಪ್ರಥಮಮುಂಡಕೇ ದ್ವಿತೀಯಃ ಖಂಡಃ ..
ಈ ಖಂಡದಲ್ಲಿ ಕರ್ಮಮಾರ್ಗದಿಂದ - ಯಜ್ಞಗಳಿಂದ ಹೇಗೆ ಭಗವಂತನನ್ನು ಸಮೀಪಿಸಬಹುದು ಎಂದು ವಿವರಿಸಿ, ನಂತರ ಅದರ ಕ್ಷಣಭಂಗುರತೆಯನ್ನು ತಿಳಿಸಿಹೇಳಲಾಗಿದೆ.
ತದೇತತ್ಸತ್ಯಂ ಮಂತ್ರೇಷು ಕರ್ಮಾಣಿ ಕವಯೋ
ಯಾನ್ಯಪಶ್ಯಂಸ್ತಾನಿ ತ್ರೇತಾಯಾಂ ಬಹುಧಾ ಸಂತತಾನಿ .
ತಾನ್ಯಾಚರಥ ನಿಯತಂ ಸತ್ಯಕಾಮಾ ಏಷ ವಃ
ಪಂಥಾಃ ಸುಕೃತಸ್ಯ ಲೋಕೇ .. ೧..
ಇದು ಸತ್ಯ: ಕವಿ-ದೃಷ್ಟಾರರು ಮಂತ್ರಗಳಲ್ಲಿ ಯಾವ ಕರ್ಮಗಳನ್ನು ನೋಡಿದರೋ, ಯಾವುದನ್ನು ಹೆಚ್ಚಾಗಿ ತ್ರಿವೇದಗಳಲ್ಲಿ ವಿವರಿಸಲಾಗಿದೆಯೋ, ಆ ಕರ್ಮಗಳನ್ನು ನಿಯಮಿತವಾಗಿ, ಏಕಾಗ್ರ ಮನಸ್ಸಿನ ಭಕ್ತಿಯಿಂದ ಮತ್ತು ಸತ್ಯದ ಬಯಕೆಯಿಂದ ಅಭ್ಯಾಸ ಮಾಡುವುದು, ಕರ್ಮ ಲೋಕಕ್ಕೆ ನಿನ್ನ ಮಾರ್ಗವಾಗಿದೆ.
ಯದಾ ಲೇಲಾಯತೇ ಹ್ಯರ್ಚಿಃ ಸಮಿದ್ಧೇ ಹವ್ಯವಾಹನೇ .
ತದಾಽಽಜ್ಯಭಾಗಾವಂತರೇಣಾಽಽಹುತೀಃ ಪ್ರತಿಪಾದಯೇತ್ .. ೨..
ಯಜ್ಞ ಅಗ್ನಿ ಪ್ರಜ್ವಲಿತವಾದಾಗ ಮತ್ತು ಅದರ ಜ್ವಾಲೆಗಳು ಎತ್ತರಕ್ಕೆ ಏರಿ ಮಿನುಗಲು ಪ್ರಾರಂಭಿಸಿದಾಗ, ಎರಡು ತುಪ್ಪದ ಅಜ್ಯಭಾಗಗಳ ನಡುವೆ ಭಕ್ತಿಯಿಂದ ಆಹುತಿಗಳನ್ನು ಅರ್ಪಿಸಬೇಕು.
ಎಲ್ಲಾ ಕರ್ಮಗಳ ಪೈಕಿ ಪ್ರಮುಖವಾದ ಅಗ್ನಿಹೋತ್ರವನ್ನು (ಯಜ್ಞ) ಇಲ್ಲಿ ವಿವರಿಸಲಾಗಿದೆ - ಯಜ್ಞದ ಎರಡು ಜ್ವಾಲೆಗಳ ಮಧ್ಯೆ ಆವಾಪ ಸ್ಥಾನವಿರುವದು - ಅಲ್ಲಿ ನಮಸ್ಕರಿಸಬೇಕು ಹಾಗೂ ಆಹುತಿ ಸಮರ್ಪಿಸಬೇಕು .
ಯಸ್ಯಾಗ್ನಿಹೋತ್ರಮದರ್ಶಮಪೌರ್ಣಮಾಸ-
ಮಚಾತುರ್ಮಾಸ್ಯಮನಾಗ್ರಯಣಮತಿಥಿವರ್ಜಿತಂ ಚ .
ಅಹುತಮವೈಶ್ವದೇವಮವಿಧಿನಾ ಹುತ-
ಮಾಸಪ್ತಮಾಂಸ್ತಸ್ಯ ಲೋಕಾನ್ ಹಿನಸ್ತಿ .. ೩..
ಯಾರ ಅಗ್ನಿಹೋತ್ರವು (ಯಜ್ಞವು) ಅಮವಾಸ್ಯೆಯಂದು ಮತ್ತು ಪೌರ್ಣಮೆಯಂದು ಕೊಡುವ ಆಹುತಿಯನ್ನು ಹೊಂದಿರದಿದ್ದರೆ, ಚಾತುರ್ಮಾಸದ ಆಹುತಿ ಮತ್ತು ಸುಗ್ಗಿಯ ಹಬ್ಬದ ಆಹುತಿಯನ್ನು ಹೊಂದಿರದಿದ್ದರೆ, ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದಿದ್ದರೆ, ಅಥವಾ ವಿಶ್ವದೇವವಿಧಿಯನ್ನು ಹೊಂದಿರದಿದ್ದರೆ, ಅಥವಾ ವಿಧಿಪೂರ್ವಕವಲ್ಲದಿದ್ದರೆ, ಅಥವಾ ಅನುಚಿತವಾಗಿ ನಡೆಸಿದರೆ, ಅಂತಹ ಯಜ್ಞವು ಅವನ ಸಪ್ತ ಲೋಕಗಳನ್ನು ನಾಶಪಡಿಸುತ್ತದೆ.
ಅವನಿಗೆ, ತಂದೆ, ಅಜ್ಜ, ಮುತ್ತಜ್ಜರಿಗೆ ಯಜ್ಞದ ಫಲ ದೊರೆಯದು ಹಾಗೂ ಮಗ, ಮೊಮ್ಮಗ ಹಾಗೂ ಮರಿಮಕ್ಕಳಿಗೆ ಯಜ್ಞದ ಫಲ ದೊರೆಯದು. ಅಥವಾ ಅವನ ಭೂ ಲೋಕ, ಸತ್ಯಲೋಕ ಇತ್ಯಾದಿ ಏಳು ಲೋಕಗಳು ಹಾಳಾಗುತ್ತವೆ.
ಕಾಲೀ ಕರಾಲೀ ಚ ಮನೋಜವಾ ಚ
ಸುಲೋಹಿತಾ ಯಾ ಚ ಸುಧೂಮ್ರವರ್ಣಾ .
ಸ್ಫುಲಿಂಗಿನೀ ವಿಶ್ವರುಚೀ ಚ ದೇವೀ
ಲೇಲಾಯಮಾನಾ ಇತಿ ಸಪ್ತ ಜಿಹ್ವಾಃ .. ೪..
ಕಾಲಿ (ಕಪ್ಪು ಬಣ್ಣದ), ಕರಾಲೀ (ಭಯಂಕರೀ), ಮನೋವೇಗದವಳು, ಕೆಂಪು ಬಣ್ಣದವಳು, ಧೂಮ್ರವರ್ಣದವಳು (ನೇರಳೆ ಬಣ್ಣದವಳು), ಹೊಳೆಯುತ್ತಿರುವವಳು, ವಿಶ್ವರುಚಿ ದೇವಿ, ಇವುಗಳ ಬೆಂಕಿಯ ಏಳು ನಾಲಿಗೆಗಳು.
ಕಾಲಿ ಇತ್ಯಾದಿ ಯಜ್ಞದ ಅಗ್ನಿಯ ಸಪ್ತ ನಾಲಿಗೆಗಳು, ಅವು ಯಜ್ಞದಲ್ಲಿ ಆಹುತಿ ಕೊಟ್ಟ ವಸ್ತುಗಳನ್ನು ನುಂಗುತ್ತವೆ
ಏತೇಷು ಯಶ್ಚರತೇ ಭ್ರಾಜಮಾನೇಷು ಯಥಾಕಾಲಂ
ಚಾಹುತಯೋ ಹ್ಯಾದದಾಯನ್ .
ತಂ ನಯಂತ್ಯೇತಾಃ ಸೂರ್ಯಸ್ಯ ರಶ್ಮಯೋ ಯತ್ರ
ದೇವಾನಾಂ ಪತಿರೇಕೋಽಧಿವಾಸಃ .. ೫..
ಈ ಜ್ವಾಲೆಗಳು ಬೆಳಗುತ್ತಿರುವಾಗ ಯಜ್ಞಗಳನ್ನು ಮಾಡುವ ಮತ್ತು ಯಥಾಕಾಲದಲ್ಲಿ ನೈವೇದ್ಯಗಳನ್ನು ಅರ್ಪಿಸುವ ಮನುಷ್ಯನನ್ನು ಸೂರ್ಯನ ಕಿರಣಗಳ ಮೇಲೆ ದೇವತೆಗಳ ಏಕೈಕ ಸಾರ್ವಭೌಮನು ವಾಸಿಸುವ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.
ಏಹ್ಯೇಹೀತಿ ತಮಾಹುತಯಃ ಸುವರ್ಚಸಃ
ಸೂರ್ಯಸ್ಯ ರಶ್ಮಿಭಿರ್ಯಜಮಾನಂ ವಹಂತಿ .
ಪ್ರಿಯಾಂ ವಾಚಮಭಿವದಂತ್ಯೋಽರ್ಚಯಂತ್ಯ
ಏಷ ವಃ ಪುಣ್ಯಃ ಸುಕೃತೋ ಬ್ರಹ್ಮಲೋಕಃ .. ೬..
"ಇಲ್ಲಿಗೆ ಬನ್ನಿ! ಇಲ್ಲಿಗೆ ಬನ್ನಿ! " ಎಂದು ಹೇಳುತ್ತ ಪ್ರಕಾಶಮಾನವಾದ ಆಹುತಿಗಳು ಯಜಮಾನನ್ನು ಸೂರ್ಯನ ಕಿರಣಗಳ ಮೇಲೆ ಕರೆದೊಯ್ದು, ಸಮಯದಲ್ಲೂ ಅವನನ್ನು ಪೂಜಿಸಿ ಮತ್ತು ಆಹ್ಲಾದಕರ ಮಾತುಗಳಿಂದ ಅವನನ್ನು ಸ್ವಾಗತಿಸಿ:" ಇದು ನಿಮ್ಮ ಪುಣ್ಯದಿಂದ ಸತ್ಕಾರ್ಯಗಳಿಂದ ಗಳಿಸಲಾದ ಬ್ರಹ್ಮಲೋಕ." ಎಂದು ಹೇಳುತ್ತವೆ.
ಪ್ಲವಾ ಹ್ಯೇತೇ ಅದೃಢಾ ಯಜ್ಞರೂಪಾ
ಅಷ್ಟಾದಶೋಕ್ತಮವರಂ ಯೇಷು ಕರ್ಮ .
ಏತಚ್ಛ್ರೇಯೋ ಯೇಽಭಿನಂದಂತಿ ಮೂಢಾ
ಜರಾಮೃತ್ಯುಂ ತೇ ಪುನರೇವಾಪಿ ಯಂತಿ .. ೭..
ಆದರೆ ಈ ಶ್ರೇಷ್ಠವಲ್ಲದ ಹದಿನೆಂಟು ಯಜ್ಞರೂಪದ ದೋಣಿಗಳು ನಿಜಕ್ಕೂ ಅದೃಢವಾಗಿವೆ; ಅವು ಕ್ಷಣಿಕವಾಗಿವೆ. ಅವುಗಳನ್ನೇ ಶ್ರೇಯವೆಂದು ಭಾವಿಸಿ ಸಂತೋಷಪಡುವ ಮೂರ್ಖರು ಮತ್ತೆ ಮತ್ತೆ ಮುಪ್ಪು ಮತ್ತು ಸಾವಿನ ಚಕ್ರಕ್ಕೆ ಬಲಿಯಾಗುತ್ತಾರೆ.
- ಹದಿನೆಂಟು ಜನರು - ಹದಿನಾರು ಪುರೋಹಿತರು, ಯಜಮಾನ ಹಾಗೂ ಅವನ ಪತ್ನಿ ನಡೆಸುವ ಯಜ್ಞವೆಂಬ ದೋಣಿ ಎಂದೂ ಹೇಳಬಹುದು
- ಜ್ಞಾನವಿಲ್ಲದೆ ಮಾಡುವ ಯಜ್ಞ ಹಾಗೂ ಅದರ ಫಲ ಕ್ಷಣಿಕ.
- ಈ ಶ್ಲೋಕದಲ್ಲಿ ಅಪರ ವಿದ್ಯೆಯ ಹಾಗೂ ಅದರ ಫಲಗಳ ನಿಷ್ಫಲತೆಯನ್ನು ಹೇಳಲಾಗಿದೆ.
ಅವಿದ್ಯಾಯಾಮಂತರೇ ವರ್ತಮಾನಾಃ
ಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ .
ಜಂಘನ್ಯಮಾನಾಃ ಪರಿಯಂತಿ ಮೂಢಾ
ಅಂಧೇನೈವ ನೀಯಮಾನಾ ಯಥಾಂಧಾಃ .. ೮..
ಅಜ್ಞಾನದ ಅಂಧಕಾರದಲ್ಲಿ ಮುಳುಗಿ, ತಾವು ಪಂಡಿತರು ಎಂದು ಮನಸ್ಸಿನಲ್ಲಿ ಭಾವಿಸುತ್ತಾ, ಮೂಢರು, ಕುರುಡರಿಂದ ದಾರಿ ತೋರಿಸಲ್ಪಟ್ಟ ಕುರುಡರಂತೆ, ತೊಂದರೆಗಳಿಂದ ಬಳಲುತ್ತಾ ತಿರುತಿರುಗಿ ಸುತ್ತಾಡುತ್ತಾರೆ.
ಅವಿದ್ಯಾಯಾಂ ಬಹುಧಾ ವರ್ತಮಾನಾ ವಯಂ
ಕೃತಾರ್ಥಾ ಇತ್ಯಭಿಮನ್ಯಂತಿ ಬಾಲಾಃ .
ಯತ್ಕರ್ಮಿಣೋ ನ ಪ್ರವೇದಯಂತಿ ರಾಗಾ-
ತ್ತೇನಾತುರಾಃ ಕ್ಷೀಣಲೋಕಾಶ್ಚ್ಯವಂತೇ .. ೯..
ಮಕ್ಕಳಂತೆ ಅಜ್ಞಾನಿಗಳಾದ ಇವರು, ವಿವಿಧ ರೀತಿಯಲ್ಲಿ ಅವಿದ್ಯೆಯಲ್ಲಿ ಮುಳುಗಿ, ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾ, "ನಾವು ಜೀವನದ ಉದ್ದೇಶವನ್ನು ಸಾಧಿಸಿದ್ದೇವೆ" ಎಂದು ಹೇಳಿಕೊಳ್ಳುತ್ತಾರೆ. ಈ ಕರ್ಮ ಮಾರ್ಗದಲ್ಲಿ ನಡೆಯುವವರು ತಮ್ಮ ಮೋಹದಿಂದ ಸತ್ಯ ತಿಳಿದಿಲ್ಲದ ಕಾರಣ, ಅವರು ತಮ್ಮ ಕರ್ಮದ ಫಲ ಕ್ಷೀಣವಾದಾಗ ದುಃಖಿತರಾಗಿ ಸ್ವರ್ಗದಿಂದ ಕೆಳಕ್ಕೆ ಬೀಳುತ್ತಾರೆ.
ಅವಿದ್ಯೆ=ಅಜ್ಞಾನ
ಇಷ್ಟಾಪೂರ್ತಂ ಮನ್ಯಮಾನಾ ವರಿಷ್ಠಂ
ನಾನ್ಯಚ್ಛ್ರೇಯೋ ವೇದಯಂತೇ ಪ್ರಮೂಢಾಃ .
ನಾಕಸ್ಯ ಪೃಷ್ಠೇ ತೇ ಸುಕೃತೇಽನುಭೂತ್ವೇಮಂ
ಲೋಕಂ ಹೀನತರಂ ವಾ ವಿಶಂತಿ .. ೧೦..
ಯಜ್ಞ-ಯಾಗಾದಿಗಳನ್ನು ಮಾಡುವದು, ದಾನ-ಧರ್ಮ ಮಾಡುವದು ಇತ್ಯಾದಿ ಕರ್ಮಗಳನ್ನೇ ಅತ್ಯುತ್ತಮ ಸತ್ಕರ್ಮಗಳೆಂದು ಭಾವಿಸಿ, ಬೇರೆ ಯಾವುದೇ ಶ್ರೇಯ ಕರ್ಮವನ್ನು ತಿಳಿಯದ ಈ ಭ್ರಮಿತ ಜನರು, ಸ್ವರ್ಗದಲ್ಲಿ ಸುಕೃತ ಲೋಕವನ್ನು ಅನುಭವಿಸಿದ ನಂತರ, ಮತ್ತೆ ಪುನಃ ಇಹಲೋಕವನ್ನು ಅಥವಾ ಇದಕ್ಕಿಂತ ಹೀನಲೋಕವನ್ನು ಪ್ರವೇಶಿಸುತ್ತಾರೆ.
ಕರ್ಮಮಾರ್ಗದ ಫಲಗಳು ಕ್ಷಣಿಕ ಎಂಬ ಮಾತನ್ನು ಇಲ್ಲಿ ಮತ್ತೆ ಹೇಳಲಾಗುತ್ತಿದೆ.
ತಪಃಶ್ರದ್ಧೇ ಯೇ ಹ್ಯುಪವಸಂತ್ಯರಣ್ಯೇ
ಶಾಂತಾ ವಿದ್ವಾಂಸೋ ಭೈಕ್ಷ್ಯಚರ್ಯಾಂ ಚರಂತಃ .
ಸೂರ್ಯದ್ವಾರೇಣ ತೇ ವಿರಜಾಃ ಪ್ರಯಾಂತಿ
ಯತ್ರಾಮೃತಃ ಸ ಪುರುಷೋ ಹ್ಯವ್ಯಯಾತ್ಮಾ .. ೧೧..
ಆದರೆ ಕಾಡಿನಲ್ಲಿ ತಪಸ್ಸು ಮತ್ತು ಶ್ರದ್ಧೆಯನ್ನು ಮಾಡುವವರು, ಶಾಂತಚಿತ್ತರಾಗಿ, ವಿದ್ವಾಂಸರಾಗಿದ್ದು ಭಿಕ್ಷಾವೃತ್ತಿ ನಡೆಸುತ್ತ ಇರುವ ಜ್ಞಾನಿಗಳು, ತಮ್ಮ ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಸವೆದು, ಸೂರ್ಯನ ಮಂಡಲದ ಮೂಲಕ ಅಮರ ಮತ್ತು ಅಕ್ಷಯ ಪುರುಷ ಇರುವ ಸ್ಥಳಕ್ಕೆ (ಸತ್ಯಲೋಕಕ್ಕೆ) ಹೋಗುತ್ತಾರೆ.
ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ
ನಿರ್ವೇದಮಾಯಾನ್ನಾಸ್ತ್ಯಕೃತಃ ಕೃತೇನ .
ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್
ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಂ .. ೧೨..
ಒಂದು ಬ್ರಾಹ್ಮಣನು, ಕರ್ಮದಿಂದ ಪಡೆದ ಲೋಕಗಳನ್ನೆಲ್ಲ ಪರೀಕ್ಷಿಸಿದ ನಂತರ, ಆಸೆಗಳಿಂದ ಸ್ವಾತಂತ್ರ್ಯವನ್ನು ಮುಕ್ತನಾಗಲಿ. ಶಾಶ್ವತವಾದ ಯಾವುದನ್ನೂ ಅಶಾಶ್ವತದ ಮೂಲಕ ಉತ್ಪಾದಿಸಲಾಗುವುದಿಲ್ಲ. ಶಾಶ್ವತವಾದ ಜ್ಞಾನವನ್ನು ಪಡೆಯಲು, ಅವನು ಕೈಯಲ್ಲಿ ಸಮಿದ್ ಹಿಡಿದುಕೊಂಡು, ವೇದಗಳಲ್ಲಿ ಪಾರಂಗತನಾದ ಮತ್ತು ಬ್ರಹ್ಮದಲ್ಲಿ ಕೇಂದ್ರೀಕೃತನಾದ ಒಬ್ಬ ಗುರುವನ್ನು ಸಂಪರ್ಕಿಸಲಿ.
ತಸ್ಮೈ ಸ ವಿದ್ವಾನುಪಸನ್ನಾಯ ಸಮ್ಯಕ್
ಪ್ರಶಾಂತಚಿತ್ತಾಯ ಶಮಾನ್ವಿತಾಯ .
ಯೇನಾಕ್ಷರಂ ಪುರುಷಂ ವೇದ ಸತ್ಯಂ ಪ್ರೋವಾಚ
ತಾಂ ತತ್ತ್ವತೋ ಬ್ರಹ್ಮವಿದ್ಯಾಂ .. ೧೩..
ಸಂಪೂರ್ಣವಾಗಿ ಪ್ರಶಾಂತನಾದ ಮತ್ತು ಇಂದ್ರಿಯಗಳನ್ನು ನಿಯಂತ್ರಿಸಿದ ಶಿಷ್ಯನನ್ನು ಸಮೀಪಿಸಿದ ವಿದ್ವಾನನಾದ ಶಿಕ್ಷಕನು, ಯಾವುದರ ಮೂಲಕ ಶಿಷ್ಯನು ಅಕ್ಷರನಾದ ನಿಜವಾದ ಪುರುಷನನ್ನು ತಿಳಿದುಕೊಳ್ಳುತ್ತಾನೋ ಆ ಬ್ರಹ್ಮನ ಜ್ಞಾನವನ್ನು ಸರಿಯಾಗಿ ತಿಳಿಸಬೇಕು.
ಇಲ್ಲಿ ಭಕ್ತಿ, ಶ್ರದ್ಧೆಯಿಂದ ಗುರುವಿನ ಬಳಿ ಬಂದ ಶಿಷ್ಯನನ್ನು ಗುರುವು ತಿರಸ್ಕರಿಸದೇ ಅವನಿಗೆ ಬ್ರಹ್ಮವಿದ್ಯೆಯನ್ನು ಕಲಿಸಬೇಕೆಂದು ಹೇಳಲಾಗಿದೆ.
.. ಇತಿ ಮುಂಡಕೋಪನಿಷದಿ ಪ್ರಥಮಮುಂಡಕೇ ದ್ವಿತೀಯಃ ಖಂಡಃ ..
ತದೇತತ್ಸತ್ಯಂ
ಯಥಾ ಸುದೀಪ್ತಾತ್ಪಾವಕಾದ್ವಿಸ್ಫುಲಿಂಗಾಃ
ಸಹಸ್ರಶಃ ಪ್ರಭವಂತೇ ಸರೂಪಾಃ .
ತಥಾಽಕ್ಷರಾದ್ವಿವಿಧಾಃ ಸೋಮ್ಯ ಭಾವಾಃ
ಪ್ರಜಾಯಂತೇ ತತ್ರ ಚೈವಾಪಿಯಂತಿ .. ೧..
ಈ ಮಾತು ಸತ್ಯ, ಹೇ ಸತ್ ಯುವಕನೇ - ಹೇಗೆ ಬೆಂಕಿಯ ಜ್ವಾಲೆಯಿಂದ ಅದರ ಸುತ್ತ ಅದರಂತೇ ಇರುವ ಸಾವಿರಾರು ಕಿಡಿಗಳು ಉದ್ಭವವಾಗುತ್ತವೋ ಹಾಗೇ, ಅಕ್ಷರನಿಂದ (ಬ್ರಹ್ಮನಿಂದ) ಸಾವಿರಾರು ವಿವಿಧ ಜೀವಿಗಳು ಉದ್ಭವಿಸುತ್ತವೆ. ಹಾಗೂ ತಿರುಗಿ ಅವನಲ್ಲೇ ಲೀನವಾಗುತ್ತವೆ.
ಅಪರವಿದ್ಯೆಯ ವ್ಯರ್ಥತೆಯನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಬಳಿಕ ಈಗ ಪರವಿದ್ಯೆಯ ವರ್ಣನೆ ಆರಂಭವಾಗುತ್ತದೆ.
ದಿವ್ಯೋ ಹ್ಯಮೂರ್ತಃ ಪುರುಷಃ ಸಬಾಹ್ಯಾಭ್ಯಂತರೋ ಹ್ಯಜಃ .
ಅಪ್ರಾಣೋ ಹ್ಯಮನಾಃ ಶುಭ್ರೋ ಹ್ಯಕ್ಷರಾತ್ಪರತಃ ಪರಃ .. ೨..
ಈ ಶ್ಲೋಕದಲ್ಲಿ ಅಕ್ಷರನಾದ ಬ್ರಹ್ಮನ ವರ್ಣನೆ ಇದೆ - ಅವನು ದಿವ್ಯ ಮತ್ತು ಅಮೂರ್ತ ಪುರುಷ, ಅವನಿಗೆ ಜನ್ಮ ಇಲ್ಲ - ಅಜ(ಹಾಗಾಗಿ ನಾಶವೂ ಇಲ್ಲ) ಮತ್ತು ಅವನು ಎಲ್ಲದರ ಒಳಗೆ ಮತ್ತು ಹೊರಗೆ ಇದ್ದಾನೆ. ಅವನು ಪ್ರಾಣ ರಹಿತ, ಮನಸ್ಸಿನ ರಹಿತ, ಶುಭ್ರ ಮತ್ತು ಪರಮ ಅಕ್ಷರನಿಗಿಂತಲೂ ಶ್ರೇಷ್ಠ.
ಏತಸ್ಮಾಜ್ಜಾಯತೇ ಪ್ರಾಣೋ ಮನಃ ಸರ್ವೇಂದ್ರಿಯಾಣಿ ಚ .
ಖಂ ವಾಯುರ್ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ .. ೩..
ಈ ಅಕ್ಷರ ಪುರುಷನಿಂದಲೇ ಪ್ರಾಣ, ಮನಸ್ಸು ಮತ್ತು ಎಲ್ಲಾ ಇಂದ್ರಿಯಗಳು ಹುಟ್ಟುತ್ತವೆ; ಹಾಗೆಯೇ ಅವುಗಳನ್ನು ಪೋಷಿಸುವ ಆಕಾಶ, ವಾಯು, ಬೆಂಕಿ, ನೀರು ಮತ್ತು ಭೂಮಿ ಇವುಗಳೂ ಹುಟ್ಟುತ್ತವೆ.
ಅಗ್ನಿರ್ಮೂರ್ಧಾ ಚಕ್ಷುಷೀ ಚಂದ್ರಸೂರ್ಯೌ
ದಿಶಃ ಶ್ರೋತ್ರೇ ವಾಗ್ವಿವೃತಾಶ್ಚ ವೇದಾಃ .
ವಾಯುಃ ಪ್ರಾಣೋ ಹೃದಯಂ ವಿಶ್ವಮಸ್ಯ ಪದ್ಭ್ಯಾಂ
ಪೃಥಿವೀ ಹ್ಯೇಷ ಸರ್ವಭೂತಾಂತರಾತ್ಮಾ .. ೪..
ಇಲ್ಲಿ ಮತ್ತೆ ಅಕ್ಷರನ ವರ್ಣನೆ ಇದೆ - ಆಕಾಶ ಅವನ ತಲೆ; ಸೂರ್ಯ ಚಂದ್ರರು ಅವನ ಕಣ್ಣುಗಳು; ದಿಕ್ಕುಗಳು ಅವನ ಕಿವಿಗಳು; ಹೇಳಲ್ಪಟ್ಟ ವೇದಗಳು ಅವನ ಮಾತು; ಗಾಳಿ ಅವನ ಉಸಿರು; ವಿಶ್ವವೇ ಅವನ ಹೃದಯ. ಅವನ ಪಾದಗಳಿಂದ ಭೂಮಿ ಉತ್ಪತ್ತಿಯಾಗುತ್ತದೆ. ವಾಸ್ತವವಾಗಿ, ಅವನು ಎಲ್ಲಾ ಜೀವಿಗಳ ಅಂತರಾತ್ಮ.
ಈ ಸರ್ವವ್ಯಾಪಿ, ಅನಂತ ದೇವತೆ, ತನ್ನ ದೇಹದಲ್ಲಿಯೇ ಮೂರು ಲೋಕಗಳನ್ನು ಹೊಂದಿರುವವನು, ಪ್ರಥಮ ಪುರುಷನು, ಸೃಷ್ಟಿಯ ಎಲ್ಲಾ ವಸ್ತುಗಳ ಆತ್ಮವಾಗಿದ್ದಾನೆ; ಏಕೆಂದರೆ, ಎಲ್ಲಾ ಸೃಷ್ಟಿಯಾದ ವಸ್ತುಗಳಲ್ಲಿಯೂ ಅವನೇ ನೋಡುವವನು, ಕೇಳುವವನು, ಚಿಂತಕನು, ಬಲ್ಲವನು ಮತ್ತು ಎಲ್ಲದಕ್ಕೂ ಕಾರಣನಾಗಿದ್ದಾನೆ.
ತಸ್ಮಾದಗ್ನಿಃ ಸಮಿಧೋ ಯಸ್ಯ ಸೂರ್ಯಃ
ಸೋಮಾತ್ಪರ್ಜನ್ಯ ಓಷಧಯಃ ಪೃಥಿವ್ಯಾಂ .
ಪುಮಾನ್ ರೇತಃ ಸಿಂಚತಿ ಯೋಷಿತಾಯಾಂ
ಬಹ್ವೀಃ ಪ್ರಜಾಃ ಪುರುಷಾತ್ಸಂಪ್ರಸೂತಾಃ .. ೫..
ಅವನಿಂದಲೇ ಅಗ್ನಿ ಬರುತ್ತದೆ, ಅಗ್ನಿಯ ಇಂಧನ ಸೂರ್ಯ; ಚಂದ್ರನಿಂದ ಮಳೆ ಬರುತ್ತದೆ; ಮಳೆಯಿಂದ ಭೂಮಿಯ ಮೇಲೆ ಬೆಳೆಯುವ ಗಿಡಮೂಲಿಕೆಗಳು; ಗಿಡಮೂಲಿಕೆಗಳಿಂದ ಪುರುಷನು ಮಹಿಳೆಗೆ ಸುರಿಯುವ ವೀರ್ಯ ದ್ರವ. ಪುರುಷನಿಂದ ಅನೇಕ ಜೀವಿಗಳು ಹುಟ್ಟುತ್ತವೆ.
ತಸ್ಮಾದೃಚಃ ಸಾಮ ಯಜೂಂಷಿ ದೀಕ್ಷಾ
ಯಜ್ಞಾಶ್ಚ ಸರ್ವೇ ಕ್ರತವೋ ದಕ್ಷಿಣಾಶ್ಚ .
ಸಂವತ್ಸರಶ್ಚ ಯಜಮಾನಶ್ಚ ಲೋಕಾಃ
ಸೋಮೋ ಯತ್ರ ಪವತೇ ಯತ್ರ ಸೂರ್ಯಃ .. ೬..
ತಸ್ಮಾಚ್ಚ ದೇವಾ ಬಹುಧಾ ಸಂಪ್ರಸೂತಾಃ
ಸಾಧ್ಯಾ ಮನುಷ್ಯಾಃ ಪಶವೋ ವಯಾಂಸಿ .
ಪ್ರಾಣಾಪಾನೌ ವ್ರೀಹಿಯವೌ ತಪಶ್ಚ
ಶ್ರದ್ಧಾ ಸತ್ಯಂ ಬ್ರಹ್ಮಚರ್ಯಂ ವಿಧಿಶ್ಚ .. ೭..
ಸಪ್ತ ಪ್ರಾಣಾಃ ಪ್ರಭವಂತಿ ತಸ್ಮಾ-
ತ್ಸಪ್ತಾರ್ಚಿಷಃ ಸಮಿಧಃ ಸಪ್ತ ಹೋಮಾಃ .
ಸಪ್ತ ಇಮೇ ಲೋಕಾ ಯೇಷು ಚರಂತಿ ಪ್ರಾಣಾ
ಗುಹಾಶಯಾ ನಿಹಿತಾಃ ಸಪ್ತ ಸಪ್ತ .. ೮..
ಅವನಿಂದಲೇ ಸಪ್ತ ಪ್ರಾಣಗಳು ಉತ್ಪನ್ನವಾಗಿವೆ - ಏಳು ಜ್ವಾಲೆಗಳು, ಏಳು ಸಮಿಧೆಗಳು, ಏಳು ಹೋಮಗಳು, ಸಪ್ತ ಲೋಕಗಳು ಎಲ್ಲವೂ ಅವನಿಂದಲೇ ಪ್ರಭವಿಸಿವೆ. ಈ ಏಳು ಲೋಕಗಳಲ್ಲಿ - ಯಾರ ಹೃದಯ ಗುಹೆಗಳಲ್ಲಿ ಅವನು ಮನೆ ಮಾಡಿದ್ದಾನೋ ಆ ಜೀವಿಗಳು ಸಂಚರಿಸುತ್ತವೆ.
ಅತಃ ಸಮುದ್ರಾ ಗಿರಯಶ್ಚ ಸರ್ವೇಽಸ್ಮಾ-
ತ್ಸ್ಯಂದಂತೇ ಸಿಂಧವಃ ಸರ್ವರೂಪಾಃ .
ಅತಶ್ಚ ಸರ್ವಾ ಓಷಧಯೋ ರಸಶ್ಚ
ಯೇನೈಷ ಭೂತೈಸ್ತಿಷ್ಠತೇ ಹ್ಯಂತರಾತ್ಮಾ .. ೯..
ಅವನಿಂದಲೇ ಎಲ್ಲಾ ಸಾಗರಗಳು ಮತ್ತು ಈ ಎಲ್ಲಾ ಪರ್ವತಗಳು ಸಂಭೂತವಾಗಿವೆ, ಅವನಿಂದಲೇ ಈ ಎಲ್ಲಾ ನದಿಗಳು ಹರಿಯುತ್ತವೆ; ಅವನಿಂದಲೇ ಎಲ್ಲಾ ಸಸ್ಯಗಳು ಮತ್ತು ಸಾರಗಳು ಇತ್ಯಾದಿಗಳು ಇವೆ. ಈ ಸಾರಗಳ ರಸಾನುಭೂತಿಯಿಂದ ಅಂತರಾತ್ಮನು ಜೀವಿಗಳಲ್ಲಿ ನೆಲೆಸುತ್ತಾನೆ.
ಪುರುಷ ಏವೇದಂ ವಿಶ್ವಂ ಕರ್ಮ ತಪೋ ಬ್ರಹ್ಮ ಪರಾಮೃತಂ .
ಏತದ್ಯೋ ವೇದ ನಿಹಿತಂ ಗುಹಾಯಾಂ
ಸೋಽವಿದ್ಯಾಗ್ರಂಥಿಂ ವಿಕಿರತೀಹ ಸೋಮ್ಯ .. ೧೦..
ಈ "ಪುರುಷನೇ" ಇಡೀ ವಿಶ್ವ; ಅವನೇ ಕರ್ಮ, ಅವನೇ ತಪಸ್ಸು, ಮತ್ತು ಅವನೇ ಪರಮ ಮತ್ತು ಅಮರ ಬ್ರಹ್ಮ. ಓ ಸೋಮ್ಯಾ, ಹೃದಯದೊಳಗಿನ ಈ ಸಾರವನ್ನು ಅರ್ಥಮಾಡಿಕೊಳ್ಳುವವನು ಇಲ್ಲಿಯೇ, ಈ ಜಗತ್ತಿನಲ್ಲಿಯೇ ಅಜ್ಞಾನದ ಗಂಟನ್ನು ಛೇದಿಸುತ್ತಾನೆ.
.. ಇತಿ ಮುಂಡಕೋಪನಿಷದಿ ದ್ವಿತೀಯಮುಂಡಕೇ ಪ್ರಥಮಃ ಖಂಡಃ ..
ಆವಿಃ ಸಂನಿಹಿತಂ ಗುಹಾಚರಂ ನಾಮ
ಮಹತ್ಪದಮತ್ರೈತತ್ಸಮರ್ಪಿತಂ .
ಏಜತ್ಪ್ರಾಣನ್ನಿಮಿಷಚ್ಚ ಯದೇತಜ್ಜಾನಥ
ಸದಸದ್ವರೇಣ್ಯಂ ಪರಂ ವಿಜ್ಞಾನಾದ್ಯದ್ವರಿಷ್ಠಂ ಪ್ರಜಾನಾಂ .. ೧..
ಸ್ವಯಂ ಆವಿರ್ಭೂತವಾದ ಪರಮ ತತ್ವ ಇಲ್ಲಿ ಸನ್ನಿಹಿತವಾಗಿದೆ. ಈ ಬ್ರಹ್ಮವು ಹೃದಯ ಗುಹೆಯಲ್ಲಿ ಸಂಚರಿಸುವ ಒಂದು ಮಹಾನ್ ಪದ. ಚಲಿಸುವ, ಜೀವಂತವಾಗಿರುವ ಮತ್ತು ಗೋಚರಿಸುವ ಎಲ್ಲವೂ ಇದರಲ್ಲಿಯೇ ಸಮರ್ಪಿತವಾಗಿದೆ. ಓ ಶಿಷ್ಯರೇ, ನಿಮ್ಮ ಆತ್ಮವಾಗಿರುವುದು ಸ್ಥೂಲ ಮತ್ತು ಸೂಕ್ಷ್ಮ ಎರಡೂ ಆಗಿರುವ, ಆಕರ್ಷಕ, ಶ್ರೇಷ್ಠ ಮತ್ತು ಜೀವಿಗಳ ತಿಳುವಳಿಕೆಯನ್ನು ಮೀರಿದ ಆತ್ಮ ಎಂದು ತಿಳಿಯಿರಿ.
ಯದರ್ಚಿಮದ್ಯದಣುಭ್ಯೋಽಣು ಚ
ಯಸ್ಮಿಁಲ್ಲೋಕಾ ನಿಹಿತಾ ಲೋಕಿನಶ್ಚ .
ತದೇತದಕ್ಷರಂ ಬ್ರಹ್ಮ ಸ ಪ್ರಾಣಸ್ತದು ವಾಙ್ಮನಃ
ತದೇತತ್ಸತ್ಯಂ ತದಮೃತಂ ತದ್ವೇದ್ಧವ್ಯಂ ಸೋಮ್ಯ ವಿದ್ಧಿ .. ೨..
ಯಾವುದು ಪ್ರಕಾಶಮಾನವೋ, ಯಾವುದು ಅಣುವಿಗಿಂತಲೂ ಸೂಕ್ಷ್ಮವೋ, ಯಾವುದು ಎಲ್ಲಾ ಲೋಕಗಳು ಮತ್ತು ಅವುಗಳ ನಿವಾಸಿಗಳಿಗೆ ಆಧಾರವಾಗಿದೆಯೋ ಅದು ನಿಜಕ್ಕೂ ಅವಿನಾಶಿ ಬ್ರಹ್ಮ; ಅದೇ ಪ್ರಾಣ, ವಾಕ್ ಮತ್ತು ಮನಸ್ಸು; ಅದೇ ಸತ್ಯ ಮತ್ತು ಅಮರ. ಅದನ್ನೇ ಎಚ್ಚರಿಕೆಯಿಂದ ಭೇದಿಸತಕ್ಕಂತದ್ದು. ಅದನ್ನು ಭೇದಿಸು, ನನ್ನ ಸ್ನೇಹಿತನೇ.
ಧನುರ್ಗೃಹೀತ್ವೌಪನಿಷದಂ ಮಹಾಸ್ತ್ರಂ
ಶರಂ ಹ್ಯುಪಾಸಾ ನಿಶಿತಂ ಸಂಧಯೀತ .
ಆಯಮ್ಯ ತದ್ಭಾವಗತೇನ ಚೇತಸಾ
ಲಕ್ಷ್ಯಂ ತದೇವಾಕ್ಷರಂ ಸೋಮ್ಯ ವಿದ್ಧಿ .. ೩..
ಆತ್ಮವನ್ನು ಭೇದಿಸುವದು ಮನಗಾಣುವದು ಹೇಗೆಂದು ಈ ಎರಡು ಶ್ಲೋಕಗಳಲ್ಲಿ ಹೇಳಲಾಗಿದೆ. ಉಪನಿಷತ್ತಿನ ಬಿಲ್ಲೆಂಬ ಮಹಾ ಅಸ್ತ್ರವನ್ನು ಹಿಡಿದು, ಭಕ್ತಿಯಿಂದ ಹರಿತವಾದ ಬಾಣವನ್ನು ಅದರ ಮೇಲೆ ಇರಿಸಿ, ಆ ಪರಮ ಸತ್ಯದ ಮೇಲೆ ನಿನ್ನ ಮನಸ್ಸನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿ ಬಿಲ್ಲನ್ನು ಎಳೆದು, ಓ ಸೋಮ್ಯ, ಆ ಅಕ್ಷರ ಬ್ರಹ್ಮನ ಕಡೆಗೆ ಗುರಿಯಿಟ್ಟು ಅದನ್ನು ಹೊಡೆ.
ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ .
ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ .. ೪..
ಓಂ (ಪ್ರಣವ) ಎಂಬುದು ಬಿಲ್ಲು ಮತ್ತು ಆತ್ಮವು ಬಾಣ, ಮತ್ತು "ಬ್ರಹ್ಮ" ಲಕ್ಷ್ಯ ಎಂದು ಹೇಳಲಾಗುತ್ತದೆ. ಹಿಂಜರಿಕೆಯಿಲ್ಲದೆ "ಅವನ" ಕಡೆಗೆ ಗುರಿಯಿಡಬೇಕು; ಬಾಣವು ತನ್ನ ಗುರಿಯಲ್ಲಿ ಕಣ್ಮರೆಯಾಗುವಂತೆಯೇ, "ಅವನು" (ಬ್ರಹ್ಮ) ನಲ್ಲಿ ಲೀನರಾಗಬೇಕು.
ಯಸ್ಮಿನ್ ದ್ಯೌಃ ಪೃಥಿವೀ ಚಾಂತರಿಕ್ಷಮೋತಂ
ಮನಃ ಸಹ ಪ್ರಾಣೈಶ್ಚ ಸರ್ವೈಃ .
ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ
ವಿಮುಂಚಥಾಮೃತಸ್ಯೈಷ ಸೇತುಃ .. ೫..
ಯಾರಲ್ಲಿ ಸ್ವರ್ಗ, ಭೂಮಿ, ಅಂತರಿಕ್ಷ ಮತ್ತು ಎಲ್ಲಾ ಪ್ರಾಣಗಳು ಹಾಗೂ ಮನಸ್ಸು ಹೆಣೆಯಲ್ಪಟ್ಟಿವೆಯೋ. ಆ ಅದ್ವೈತ ಆತ್ಮನನ್ನು ಮಾತ್ರ ತಿಳಿದುಕೊ ಮತ್ತು ಇತರ ಎಲ್ಲಾ ಮಾತುಗಳನ್ನು ಬಿಟ್ಟುಬಿಡು. ಅವನು ಅಮೃತತ್ವಕ್ಕೆ ಸೇತುವೆ.
ಅರಾ ಇವ ರಥನಾಭೌ ಸಂಹತಾ ಯತ್ರ ನಾಡ್ಯಃ .
ಸ ಏಷೋಽನ್ತಶ್ಚರತೇ ಬಹುಧಾ ಜಾಯಮಾನಃ .
ಓಮಿತ್ಯೇವಂ ಧ್ಯಾಯಥ ಆತ್ಮಾನಂ ಸ್ವಸ್ತಿ ವಃ
ಪಾರಾಯ ತಮಸಃ ಪರಸ್ತಾತ್ .. ೬..
ರಥದ ಚಕ್ರದ ನಾಭಿಯಲ್ಲಿ ಜೋಡಿಸಲ್ಪಟ್ಟ ಕಡ್ಡಿಗಳು ಸೇರುವಂತೇ , 'ಅವನು' ಎಲ್ಲಿ ನಾಡಿಗಳೆಲ್ಲ ಬಂದು ಸೇರವವೋ ಲ್ಲಿ ಚಲಿಸುತ್ತ ಬಹುವಿಧ ರೂಪದಲ್ಲಿ ಜನ್ಮ ಪಡೆಯುತ್ತಾನೆ. ಆತ್ಮವನ್ನು ಓಂಕಾರದ ರೂಪದಲ್ಲಿ ಧ್ಯಾನಿಸು - ಅಂಧಕಾರದಿಂದ ಆಚೆ ಬರುವ ನಿನ್ನ ಮಾರ್ಗವು ಮಂಗಲಮಯವಾಗಲಿ.
ಯಃ ಸರ್ವಜ್ಞಃ ಸರ್ವವಿದ್ ಯಸ್ಯೈಷ ಮಹಿಮಾ ಭುವಿ .ದಿವ್ಯೇ ಬ್ರಹ್ಮಪುರೇ ಹ್ಯೇಷ ವ್ಯೋಮ್ನ್ಯಾತ್ಮಾ ಪ್ರತಿಷ್ಠಿತಃ ..
ಮನೋಮಯಃ ಪ್ರಾಣಶರೀರನೇತಾ
ಪ್ರತಿಷ್ಠಿತೋಽನ್ನೇ ಹೃದಯಂ ಸಂನಿಧಾಯ .
ತದ್ವಿಜ್ಞಾನೇನ ಪರಿಪಶ್ಯಂತಿ ಧೀರಾ
ಆನಂದರೂಪಮಮೃತಂ ಯದ್ವಿಭಾತಿ .. ೭..
ಎಲ್ಲವನ್ನೂ ತಿಳಿದಿರುವ ಮತ್ತು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಮತ್ತು ಜಗತ್ತಿನ ಎಲ್ಲಾ ಮಹಿಮೆಯನ್ನು ಹೊಂದಿರುವವನು - ಆತ್ಮ, ಬ್ರಹ್ಮನ ಪ್ರಕಾಶಮಾನವಾದ ನಿವಾಸದಲ್ಲಿ ಪ್ರತಿಷ್ಠಿತನಾಗಿದ್ದಾನೆ. ಅವನು ಮನಸ್ಸಿನ ರೂಪ ಧರಿಸಿ ಮತ್ತು ದೇಹ ಮತ್ತು ಇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಅವನು ದೇಹದಲ್ಲಿ ಹೃದಯದೊಳಗೆ ವಾಸಿಸುತ್ತಾನೆ. ಆನಂದಮಯ ಮತ್ತು ಅಮೃತವಾದ ಆತ್ಮದ ಜ್ಞಾನದಿಂದ, ಜ್ಞಾನಿಗಳು ಸಂಪೂರ್ಣವಾಗಿ ಎಲ್ಲದರಲ್ಲೂ ಆತ್ಮವನ್ನು ನೋಡುತ್ತಾರೆ.
ಭಿದ್ಯತೇ ಹೃದಯಗ್ರಂಥಿಶ್ಛಿದ್ಯಂತೇ ಸರ್ವಸಂಶಯಾಃ .
ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿಂದೃಷ್ಟೇ ಪರಾವರೇ .. ೮..
ಯಾರು ಪರ ಹಾಗೂ ಅಪರನೋ ಅವನ ದರ್ಶನವಾದಾಗ ಹೃದಯಗ್ರಂಥಿಗಳು ತುಂಡಾಗುತ್ತವೆ, ಸರ್ವ ಸಂಶಯಗಳೂ ದೂರವಾಗುತ್ತವೆ, ಎಲ್ಲ ಕರ್ಮಗಳೂ ಕ್ಷಯಿಸುತ್ತವೆ.
- ಹೃದಯಗೃಂಥಿಗಳು - ಕಗ್ಗಂಟಾಗಿ ನಮ್ಮ ಹೃದಯವನ್ನು ಕಾಡುವ ಅಜ್ಞಾನ ಹಾಗೂ ಕಾಮನೆಗಳು
- ಕರ್ಮಗಳು - ಪೂರ್ವಜನ್ಮದ ಕರ್ಮಫಲಗಳು ನಾಶವಾಗುತ್ತವೆ
- ಸಂಶಯಗಳು - ಬ್ರಹ್ಮನ ಸತ್ಯ ತಿಳಿದಾದ ಮೇಲೆ ಎಲ್ಲಾ ಭ್ರಮೆ, ಸಂಶಯಗಳು ನಾಶವಾಗುತ್ತವೆ
ಹಿರಣ್ಮಯೇ ಪರೇ ಕೋಶೇ ವಿರಜಂ ಬ್ರಹ್ಮ ನಿಷ್ಕಲಂ .
ತಚ್ಛುಭ್ರಂ ಜ್ಯೋತಿಷಾಂ ಜ್ಯೋತಿಸ್ತದ್ಯದಾತ್ಮವಿದೋ ವಿದುಃ .. ೯..
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ
ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ .
ತಮೇವ ಭಾಂತಮನುಭಾತಿ ಸರ್ವಂ
ತಸ್ಯ ಭಾಸಾ ಸರ್ವಮಿದಂ ವಿಭಾತಿ .. ೧೦..
ಅಲ್ಲಿ ಸೂರ್ಯನೂ ಬೆಳಗುವುದಿಲ್ಲ, ಚಂದ್ರ ನಕ್ಷತ್ರಗಳೂ ಬೆಳಗುವುದಿಲ್ಲ, ಈ ಮಿಂಚುಗಳೂ ಸಹ ಬೆಳಗುವದಿಲ್ಲ ಈ ಬೆಂಕಿಯದಂತೂ ಮಾತೇ ಇಲ್ಲ, ಅವನು ಪ್ರಕಾಶಿಸಿದಾಗ, ಅವನ ನಂತರ ಎಲ್ಲವೂ ಬೆಳಗುತ್ತದೆ; ಅವನ ಬೆಳಕಿನಿಂದ ಎಲ್ಲವೂ ಬೆಳಗುತ್ತದೆ.
ಆತ್ಮನ ಬೆಳಕು ಎಷ್ಟು ಪ್ರಖರವೆಂದರೆ ಅವನೆದುರು ಸೂರ್ಯ-ಚಂದ್ರ ತಾರೆಗಳೆಲ್ಲ ಬೆಳಗುವದೇ ಇಲ್ಲ. ಅವನ ಬೆಳಕಿಂದಲೇ ಈ ಜಗ ಬೆಳಗುತ್ತದೆ.
ಬ್ರಹ್ಮೈವೇದಮಮೃತಂ ಪುರಸ್ತಾದ್ಬ್ರಹ್ಮ ಪಶ್ಚಾದ್ಬ್ರಹ್ಮ ದಕ್ಷಿಣತಶ್ಚೋತ್ತರೇಣ .
ಅಧಶ್ಚೋರ್ಧ್ವಂ ಚ ಪ್ರಸೃತಂ ಬ್ರಹ್ಮೈವೇದಂ ವಿಶ್ವಮಿದಂ ವರಿಷ್ಠಂ .. ೧೧..
ಆ ಬ್ರಹ್ಮ ಮುಂದಿದೆ, ಆ ಬ್ರಹ್ಮ ಹಿಂದೆ ಇದೆ, ಆ ಬ್ರಹ್ಮ ಬಲ ಮತ್ತು ಎಡಕ್ಕೆ ಇದೆ. ಬ್ರಹ್ಮನೇ ಮೇಲಿನ ಮತ್ತು ಕೆಳಗಿನ ಎಲ್ಲವನ್ನೂ ವ್ಯಾಪಿಸಿದೆ; ಈ ವಿಶ್ವವೆಲ್ಲ ಆ ಪರಮ ಬ್ರಹ್ಮ ಮಾತ್ರ..
ಯಾಕೆಂದರೆ - ಈ ವಿಶ್ವವೆಲ್ಲ ಕೇವಲ ಬ್ರಹ್ಮನೇ - ಯಾವುದಾದರೂ ಬ್ರಹ್ಮವಲ್ಲದ್ದು ಕಂಡುಬಂದರೆ ಅದು ನಮ್ಮ ಅಜ್ಞಾನವಷ್ಟೆ.
.. ಇತಿ ಮುಂಡಕೋಪನಿಷದಿ ದ್ವಿತೀಯಮುಂಡಕೇ ದ್ವಿತೀಯಃ ಖಂಡಃ ..
೩
.. ತೃತೀಯ ಮುಂಡಕೇ ಪ್ರಥಮಃ ಖಂಡಃ ..
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ .
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ .. ೧..
ಈ ದೃಷ್ಟಾಂತವು ಬಹಳ ಪ್ರಸಿದ್ಧವಾಗಿದೆ.
ಯಾವಾಗಲೂ ಜೊತೆಗಿರುವ, ಗೆಳೆಯರಾಗಿರುವ ಎರಡು ಹಕ್ಕಿಗಳು ಒಂದೇ ಮರದ ಮೇಲೆ ಕುಳಿತಿವೆ. ಅವರಲ್ಲಿ ಒಂದು ಹಕ್ಕಿ ಹಣ್ಣನ್ನು (ಪಿಪ್ಪಲಿ ಹಣ್ಣನ್ನು) ತಿನ್ನುತ್ತಿದೆ. ಇನ್ನೊಂದು ಏನನ್ನೂ ತಿನ್ನದೇ ಸುಮ್ಮನೇ ನೋಡುತ್ತಿದೆ.
ಇಲ್ಲಿ ಮರವು ಶರೀರದ ಸಂಕೇತ. ಸುಮ್ಮನೇ ಕುಳಿತಿರುವ ಹಕ್ಕಿ ನಮ್ಮ ಆತ್ಮ . ಹಾಗೂ ಎಲ್ಲವನ್ನೂ ತಿನ್ನುತ್ತಿರುವ ಹಕ್ಕಿ ನಮ್ಮ ಅಹಂಕಾರ. ನಮ್ಮ ಅಹಂಕಾರ ಅಥವಾ ಜೀವಾತ್ಮ ಭೋಗವನ್ನೆಲ್ಲ ಅನುಭವಿಸುತ್ತಾ, ಅದರ ಫಲವಾಗಿ ಸುಖ, ದುಃಖ, ಲಾಭ, ಹಾನಿ ಅನುಭವಿಸುತ್ತ ಕುಳಿತಿದ್ದರೆ, ಆತ್ಮ ಇದೆಲ್ಲಕ್ಕೂ ಸಾಕ್ಷಿಯಾಗಿ ಸುಮ್ಮನೇ ಕುಳಿತಿದೆ - ಅದೂ ಕರ್ತೃವೂ ಅಲ್ಲ, ಭೋಕ್ತೃವೂ ಅಲ್ಲ. ಬರೀ ಸಾಕ್ಷಿ.
ಽನೀಶಯಾ ಶೋಚತಿ ಮುಹ್ಯಮಾನಃ .
ಜುಷ್ಟಂ ಯದಾ ಪಶ್ಯತ್ಯನ್ಯಮೀಶ-
ಮಸ್ಯ ಮಹಿಮಾನಮಿತಿ ವೀತಶೋಕಃ .. ೨..
ಅದೇ ವೃಕ್ಷದಲ್ಲಿ ಕುಳಿತಿರುವ ಜೀವನು ಮೋಹದಲ್ಲಿ ಸಿಲುಕಿ ಅಸಹಾಯಕನಾಗಿ ಶೋಕ ಪಡುತ್ತಾನೆ. ಆದರೆ ಅವನು ಯಾವಾಗ ತನ್ನಿಂದ ಬೇರೆಯವನಾದ ಹಾಗೂ ಭಜಿಸಲ್ಪಡುವ ಈಶನನ್ನು (ಆತ್ಮನನ್ನು) ನೋಡುತ್ತಾನೋ, ಆಗ ಎಲ್ಲವೂ 'ಅವನ' ಮಹಿಮೆ ಎಂದು ಅರಿತು ಶೋಕಮುಕ್ತನಾಗುತ್ತಾನೆ.
ಮನುಷ್ಯನಿಗೆ ತಾನು ಜೀವವಲ್ಲ, ತಾನು ಬರೀ ಆತ್ಮ. ಈ ಸುಖ-ದುಃಖಗಳೆಲ್ಲ ತನ್ನದಲ್ಲ. ತಾನು ಬರೀ ಸಾಕ್ಷಿ ಎಂದು ಅರಿತಾಗ ಅವನ ಶೋಕ ನಾಶವಾಗುತ್ತದೆ.
ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಂ .
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ
ನಿರಂಜನಃ ಪರಮಂ ಸಾಮ್ಯಮುಪೈತಿ .. ೩..
ಯಾವಾಗ ದರ್ಶಕನು ಸ್ವಯಂಪ್ರಕಾಶಮಾನನಾದ ಸೃಷ್ಟಿಕರ್ತ, ಭಗವಂತ, ಪುರುಷ, ಸೃಷ್ಟಿಕರ್ತನಿಗೆ ಕಾರಣಪುರುಷನನ್ನು ನೋಡುತ್ತಾನೋ, ಆಗ ಅವನು - ವಿದ್ವಾನನಾದ ದರ್ಶಕನು, ಪುಣ್ಯ ಮತ್ತು ಪಾಪವನ್ನು ತೊಡೆದುಹಾಕಿ, ನಿರ್ಮಲನಾಗುತ್ತಾನೆ ಮತ್ತು ಪರಮ ಐಕ್ಯತೆಯನ್ನು ತಲುಪುತ್ತಾನೆ.
ವಿಜಾನನ್ ವಿದ್ವಾನ್ ಭವತೇ ನಾತಿವಾದೀ .
ಆತ್ಮಕ್ರೀಡ ಆತ್ಮರತಿಃ ಕ್ರಿಯಾವಾ-
ನೇಷ ಬ್ರಹ್ಮವಿದಾಂ ವರಿಷ್ಠಃ .. ೪..
ಈ ಪ್ರಾಣನೇ ಎಲ್ಲಾ ಜೀವಿಗಳಲ್ಲಿಯೂ ವಿವಿಧ ರೀತಿಯಲ್ಲಿ ಪ್ರಕಾಶಿಸುತ್ತಾನೆ. ಅವನನ್ನು ತಿಳಿದ ಜ್ಞಾನಿಯು ಅತಿವಾದ ಮಾಡುವುದಿಲ್ಲ. ಆತ್ಮದಲ್ಲಿ ಆನಂದಪಡುತ್ತಾ, ಆತ್ಮದಲ್ಲಿ ಸಂತಸ ಪಡುತ್ತ, ಕರ್ಮಗಳನ್ನು ಮಾಡುತ್ತಾ ಇರುವ ಅವನು, ಬ್ರಹ್ಮಜ್ಞಾನಿಗಳಲ್ಲಿ ಅಗ್ರಗಣ್ಯ.
ಸಮ್ಯಗ್ಜ್ಞಾನೇನ ಬ್ರಹ್ಮಚರ್ಯೇಣ ನಿತ್ಯಂ .
ಅಂತಃಶರೀರೇ ಜ್ಯೋತಿರ್ಮಯೋ ಹಿ ಶುಭ್ರೋ
ಯಂ ಪಶ್ಯಂತಿ ಯತಯಃ ಕ್ಷೀಣದೋಷಾಃ .. ೫..
ಸತ್ಯಮೇವ ಜಯತೇ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃ .
ಯೇನಾಕ್ರಮಂತ್ಯೃಷಯೋ ಹ್ಯಾಪ್ತಕಾಮಾ
ಯತ್ರ ತತ್ಸತ್ಯಸ್ಯ ಪರಮಂ ನಿಧಾನಂ .. ೬..
ಸತ್ಯವೇ ಜಯಿಸುತ್ತದೆ, ಸುಳ್ಳು ಅಲ್ಲ. ದೇವತೆಗಳು ನಡೆಯುವ ಮಾರ್ಗವು ಸತ್ಯದಿಂದ ಕೂಡಿದೆ. ಈ ಮಾರ್ಗದಲ್ಲಿ ಆಪ್ತಕಾಮರಾದ ಋಷಿಗಳು ಸತ್ಯದ ಪರಮ ನಿವಾಸಕ್ಕೆ ಹೋಗುತ್ತಾರೆ.
- ಆಪ್ತಕಾಮ- ಎಲ್ಲ ಆಸೆಗಳು ಈಡೇರಿದವರು
- ಸತ್ಯಮೇವ ಜಯತೇ ನಾನೃತಂ ಇದರ ಅರ್ಥವನ್ನು ಶಂಕರಾಚಾರ್ಯರು "ಸತ್ಯವಂತನೇ ಗೆಲ್ಲುತ್ತಾನೆ - ಸುಳ್ಳು ಹೇಳುವವನಲ್ಲ " ಎಂದು ವ್ಯಾಖ್ಯಾನಿಸಿದ್ದಾರೆ.
ಸೂಕ್ಷ್ಮಾಚ್ಚ ತತ್ಸೂಕ್ಷ್ಮತರಂ ವಿಭಾತಿ .
ದೂರಾತ್ಸುದೂರೇ ತದಿಹಾಂತಿಕೇ ಚ
ಪಶ್ಯತ್ಸ್ವಿಹೈವ ನಿಹಿತಂ ಗುಹಾಯಾಂ .. ೭..
ಆ ವಿಶಾಲನು, ಸ್ವಯಂ ಪ್ರಕಾಶಮಾನನು, ಕಲ್ಪನೆಗೆ ಸಿಗದವನು, ಸೂಕ್ಷ್ಮಕ್ಕಿಂತ ಸೂಕ್ಷ್ಮನು ಆದ ಬ್ರಹ್ಮನು ಪ್ರಕಾಶಿಸುತ್ತಾನೆ. ಅವನು ದೂರದಲ್ಲಿರುವುದಕ್ಕಿಂತ ಬಹಳ ದೂರದಲ್ಲಿದ್ದು, ಬಹಳ ಹತ್ತಿರದಲ್ಲೂ ಇದ್ದಾನೆ. ನಿಜಕ್ಕೂ, ಅವನು ಇಲ್ಲೇ , ಅವನನ್ನು ಕಾಣಬಲ್ಲ ಯೋಗಿಗಳ ಹೃದಯದ ಗುಹೆಯಲ್ಲೇ ಸ್ಥಾಪಿತನಾಗಿದ್ದಾನೆ.
ಆ ಬ್ರಹ್ಮನು ಅಜ್ಞಾನಿಗಳಿಗೆ ಕೈಗೆ ನಿಲುಕದಷ್ಟು ದೂರದಲ್ಲಿದ್ದಾನೆ. ಆದರೆ ಅವನನ್ನು ಅರಿತವರ ಆತ್ಮದಲ್ಲೇ ಅತಿಹತ್ತಿರದಲ್ಲಿ ಇದ್ದಾನೆ.
ನಾನ್ಯೈರ್ದೇವೈಸ್ತಪಸಾ ಕರ್ಮಣಾ ವಾ .
ಜ್ಞಾನಪ್ರಸಾದೇನ ವಿಶುದ್ಧಸತ್ತ್ವ-
ಸ್ತತಸ್ತು ತಂ ಪಶ್ಯತೇ ನಿಷ್ಕಲಂ ಧ್ಯಾಯಮಾನಃ .. ೮..
ಬ್ರಹ್ಮನು ಕಣ್ಣುಗಳಿಂದ ಅಥವಾ ಮಾತಿನಿಂದ ಅಥವಾ ಇತರ ಇಂದ್ರಿಯಗಳಿಂದ ಗ್ರಹಿಕೆಗೆ ಸಿಗುವದಿಲ್ಲ. ತಪಸ್ಸಿನಿಂದಾಗಲಿ ಅಥವಾ ಒಳ್ಳೆಯ ಕರ್ಮಗಳಿಂದಾಗಲಿ ಗ್ರಹಿಕೆಗೆ ಸಿಗುವದಿಲ್ಲ. ಮನುಷ್ಯನು ಜ್ಞಾನದ ಪ್ರಸಾದದಿಂದ, ಪ್ರಶಾಂತತೆಯಿಂದ ಶುದ್ಧನಾಗುತ್ತಾನೆ; ಅದರ ನಂತರ, ಧ್ಯಾನಮಗ್ನನಾದ ಅವನು ನಿಷ್ಕಲನಾದ, ನಿರಾಕಾರನಾದ ಬ್ರಹ್ಮನನ್ನು ನೋಡುತ್ತಾನೆ.
ಬ್ರಹ್ಮನು ಕಣ್ಣಿಗೆ ಕಾಣುವದಿಲ್ಲ - ಯಾಕೆಂದರೆ ಅವನು ನಿರಾಕಾರ. ಅವನು ಮಾತಿಗೆ ಸಿಗುವದಿಲ್ಲ - ಯಾಕೆಂದರೆ ಅವನು ವರ್ಣನಾತೀತ. ಅವನು ಯಜ್ಞ ಇತ್ಯಾದಿ ಕರ್ಮಗಳನ್ನು ಮಾಡುವದರಿಂದ ಲಭ್ಯವಾಗುವದಿಲ್ಲ. ಶುದ್ಧ ಜ್ಞಾನದಿಂದ ಮನಸ್ಸು ಪರಿಶುದ್ಧವಾದ ಮೇಲೆ ಬ್ರಹ್ಮನು ಅರಿವಿಗೆ ಬರುತ್ತಾನೆ.
ಯಸ್ಮಿನ್ಪ್ರಾಣಃ ಪಂಚಧಾ ಸಂವಿವೇಶ .
ಪ್ರಾಣೈಶ್ಚಿತ್ತಂ ಸರ್ವಮೋತಂ ಪ್ರಜಾನಾಂ
ಯಸ್ಮಿನ್ವಿಶುದ್ಧೇ ವಿಭವತ್ಯೇಷ ಆತ್ಮಾ .. ೯..
ಈ 'ಆತ್ಮ'ವು ಒಂದು ಪರಮಾಣುವಿನಷ್ಟು ಸೂಕ್ಷ್ಮವಾಗಿದ್ದು, ಪ್ರಾಣವು ಐದು ವಿಧಗಳಲ್ಲಿ ಇದನ್ನು ಆವರಿಸಿದೆ. ಇದನ್ನು ಚಿಂತನಾ ಮನಸ್ಸಿನ (ಚಿತ್ತದ) ಮೂಲಕ ತಿಳಿಯಲ್ಪಡತಕ್ಕದ್ದು: ಜೀವಿಗಳ ಚಿತ್ತವು ಪ್ರಾಣದಿಂದ ತುಂಬಿರುತ್ತದೆ ಮತ್ತು ಈ ಚಿತ್ತವು ಶುದ್ಧವಾದಾಗ ಮಾತ್ರ ಈ 'ಆತ್ಮ'ವು ಅಭಿವ್ಯಕ್ತಿಗೊಳ್ಳುತ್ತದೆ.
ವಿಶುದ್ಧಸತ್ತ್ವಃ ಕಾಮಯತೇ ಯಾಂಶ್ಚ ಕಾಮಾನ್ .
ತಂ ತಂ ಲೋಕಂ ಜಯತೇ ತಾಂಶ್ಚ ಕಾಮಾಂ-
ಸ್ತಸ್ಮಾದಾತ್ಮಜ್ಞಂ ಹ್ಯರ್ಚಯೇದ್ಭೂತಿಕಾಮಃ .. ೧೦..
ಶುದ್ಧ ಸತ್ವದ ಮನುಷ್ಯನು ತನ್ನ ಮನಸ್ಸಿನಲ್ಲಿ ಯಾವ ಯಾವ ಲೋಕವನ್ನು ಕಲ್ಪಿಸಿಕೊಳ್ಳುತ್ತಾನೋ ಮತ್ತು ಅವನು ಯಾವ ಆಸೆಗಳನ್ನು ಹೊಂದುತ್ತಾನೋ, ಆ ಲೋಕವನ್ನು ಅವನು ಗೆಲ್ಲುತ್ತಾನೆ ಮತ್ತು ಆ ಆಸೆಗಳನ್ನು ಅವನು ಪಡೆಯುತ್ತಾನೆ, ಆದ್ದರಿಂದ ಸಮೃದ್ಧಿಯನ್ನು ಬಯಸುವ ಪ್ರತಿಯೊಬ್ಬರೂ ಆತ್ಮವನ್ನು ತಿಳಿದ ಆ ಮನುಷ್ಯನನ್ನು ಪೂಜಿಸಲಿ.
.. ಇತಿ ಮುಂಡಕೋಪನಿಷದಿ ತೃತೀಯಮುಂಡಕೇ ಪ್ರಥಮಃ ಖಂಡಃ ..
.. ತೃತೀಯಮುಂಡಕೇ ದ್ವಿತೀಯಃ ಖಂಡಃ ..
ಯತ್ರ ವಿಶ್ವಂ ನಿಹಿತಂ ಭಾತಿ ಶುಭ್ರಂ .
ಉಪಾಸತೇ ಪುರುಷಂ ಯೇ ಹ್ಯಕಾಮಾಸ್ತೇ
ಶುಕ್ರಮೇತದತಿವರ್ತಂತಿ ಧೀರಾಃ .. ೧..
ಪ್ರಕಾಶಮಾನವಾಗಿ ಹೊಳೆಯುವ ಮತ್ತು ವಿಶ್ವವೇ ನೆಲೆಗೊಂಡಿರುವ ಬ್ರಹ್ಮನನ್ನು ಆತ್ಮಜ್ಞಾನಿಯು ತಿಳಿದಿದ್ದಾನೆ. ಯಾರು ನಿಷ್ಮಾಮರಾಗಿ ಆತ್ಮಜ್ಞಾನಿಯನ್ನು ಪೂಜಿಸುವರೋ ಅವರು ಜನ್ಮ -ಮರಣಗಳ ಚಕ್ರವನ್ನು ಮೀರುತ್ತಾನೆ.
ಆತ್ಮಜ್ಞಾನಿಯನ್ನು ಪೂಜಿಸುವವನು ಅವನ ಅನುಗ್ರಹದಿಂದ ತಾನೂ ಮೋಕ್ಷವನ್ನು ಪಡೆಯುತ್ತಾನೆ.
ಸ ಕಾಮಭಿರ್ಜಾಯತೇ ತತ್ರ ತತ್ರ .
ಪರ್ಯಾಪ್ತಕಾಮಸ್ಯ ಕೃತಾತ್ಮನಸ್ತು
ಇಹೈವ ಸರ್ವೇ ಪ್ರವಿಲೀಯಂತಿ ಕಾಮಾಃ .. ೨..
ಲೌಕಿಕ ವಸ್ತುಗಳನ್ನು ಪ್ರೀತಿಸುವವನು ಅವುಗಳನ್ನು ಬಯಸುವವನು ತನ್ನ ಬಯಕೆಗಳ ಕಾರಣದಿಂದ ಈ ಭೂಮಿಯಲ್ಲಿ ಮತ್ತೆ ಮತ್ತೆ ಹುಟ್ಟುತ್ತಾನೆ. ಆದರೆ ಯಾರ ಆಸೆಗಳು ಪೂರ್ಣಗೊಂಡಿವೆಯೋ ಮತ್ತು ಯಾರು ಆತ್ಮನಲ್ಲಿ ಸ್ಥಾಪಿತನಾಗಿದ್ದಾನೆಯೋ ಅವನಿಗೆ ಎಲ್ಲಾ ಆಸೆಗಳು ಭೂಮಿಯ ಮೇಲೇ ಅಡಗುತ್ತವೆ.
ನ ಮೇಧಯಾ ನ ಬಹುನಾ ಶ್ರುತೇನ .
ಯಮೇವೈಷ ವೃಣುತೇ ತೇನ ಲಭ್ಯ-
ಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಂ .. ೩..
ಈ ಆತ್ಮವನ್ನು ವೇದಗಳ ವಿವರಣೆಯಿಂದಲಾಗಲೀ, ಬುದ್ಧಿಶಕ್ತಿಯಿಂದಾಗಲೀ, ಹೆಚ್ಚಿನ ಕಲಿಕೆಯಿಂದಾಗಲೀ ಪಡೆಯಲು ಸಾಧ್ಯವಿಲ್ಲ. ಯಾರು ಪರಮಾತ್ಮನನ್ನು ಪಡೆಯಬೇಕೆಂದು ಬಯಸುವವನೋ, ಅವನ ತೀವ್ರ ಬಯಕೆಯಿಂದ ಪರಮಾತ್ಮ ಅವನಿಗೆ ಲಭ್ಯನಾಗುತ್ತಾನೆ. ಅಂತವನಿಗೆ ಆತ್ಮವೇ ಅದರ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತದೆ.
ನ ಚ ಪ್ರಮಾದಾತ್ತಪಸೋ ವಾಪ್ಯಲಿಂಗಾತ್ .
ಏತೈರುಪಾಯೈರ್ಯತತೇ ಯಸ್ತು ವಿದ್ವಾಂ-
ಸ್ತಸ್ಯೈಷ ಆತ್ಮಾ ವಿಶತೇ ಬ್ರಹ್ಮಧಾಮ .. ೪..
ಬಲಹೀನನಿಗಾಗಲೀ ಅಥವಾ ಶ್ರದ್ಧೆ ಇಲ್ಲದವನಿಗಾಗಲೀ ಅಥವಾ ವಿಷಯಾಸಕ್ತಿಗಳ ಪ್ರಮಾದದಿಂದಾಗಲೀ ಕೂಡಿದವನಿಗೆ, ಈ ಆತ್ಮವು ಲಭ್ಯವಾಗುವದಿಲ್ಲ. ಆದರೆ ಒಬ್ಬ ಜ್ಞಾನಿಯು ಈ ಸಹಾಯಗಳ (ಶಕ್ತಿ, ಶ್ರದ್ಧೆ, ಜ್ಞಾನ, ತ್ಯಾಗಗಳ) ಮೂಲಕ ಶ್ರಮಿಸಿದರೆ, ಅವನ ಆತ್ಮವು ಬ್ರಹ್ಮಧಾಮನ್ನು ಪ್ರವೇಶಿಸುತ್ತದೆ.
ಕೃತಾತ್ಮಾನೋ ವೀತರಾಗಾಃ ಪ್ರಶಾಂತಾಃ .
ತೇ ಸರ್ವಗಂ ಸರ್ವತಃ ಪ್ರಾಪ್ಯ ಧೀರಾ
ಯುಕ್ತಾತ್ಮಾನಃ ಸರ್ವಮೇವಾವಿಶಂತಿ .. ೫..
ಆತ್ಮನನ್ನು ಅರಿತುಕೊಂಡ ನಂತರ, ಋಷಿಗಳು ಆ ಜ್ಞಾನದಿಂದ ತೃಪ್ತರಾಗುತ್ತಾರೆ. ಅವರ ಆತ್ಮಗಳು ಪರಮಾತ್ಮನಲ್ಲಿ ನೆಲೆಗೊಂಡಿವೆ, ಅವರು ರಾಗಗಳಿಂದ ಮುಕ್ತರಾಗಿದ್ದಾರೆ ಮತ್ತು ಪ್ರಶಾಂತರಾಗಿದ್ದಾರೆ. ಆತ್ಮಕ್ಕೆ ಸದಾ ಅರ್ಪಿತರಾಗಿರುವ ಅಂತಹ ಶಾಂತ ಆತ್ಮಗಳು ಎಲ್ಲೆಡೆ ಸರ್ವವ್ಯಾಪಿಯಾದ ಬ್ರಹ್ಮನನ್ನೇ ನೋಡುತ್ತಾರೆ ಮತ್ತು ಕೊನೆಯಲ್ಲಿ ಅದರೊಳಗೆ ಪ್ರವೇಶಿಸುತ್ತಾರೆ.
ಸಂನ್ಯಾಸಯೋಗಾದ್ಯತಯಃ ಶುದ್ಧಸತ್ತ್ವಾಃ .
ತೇ ಬ್ರಹ್ಮಲೋಕೇಷು ಪರಾಂತಕಾಲೇ
ಪರಾಮೃತಾಃ ಪರಿಮುಚ್ಯಂತಿ ಸರ್ವೇ .. ೬..
ವೇದಾಂತಿಕ ಜ್ಞಾನದ ಗುರಿಯಾದ ಆತ್ಮವನ್ನು ಚೆನ್ನಾಗಿ ತಿಳಿದುಕೊಂಡು, ಸಂನ್ಯಾಸದ ಅಭ್ಯಾಸದ ಮೂಲಕ ತಮ್ಮ ಮನಸ್ಸನ್ನು ಶುದ್ಧೀಕರಿಸಿದ ಋಷಿಗಳು, ಅಂತ್ಯ ಸಮಯದಲ್ಲಿ ಬ್ರಹ್ಮನಲ್ಲಿ ಲೀನವಾಗಿ ಸಂಪೂರ್ಣವಾಗಿ ಮುಕ್ತರಾಗುತ್ತಾರೆ.
ದೇವಾಶ್ಚ ಸರ್ವೇ ಪ್ರತಿದೇವತಾಸು .
ಕರ್ಮಾಣಿ ವಿಜ್ಞಾನಮಯಶ್ಚ ಆತ್ಮಾ
ಪರೇಽವ್ಯಯೇ ಸರ್ವೇ ಏಕೀಭವಂತಿ .. ೭..
ಮುಕ್ತಿಯ ಸಮಯದಲ್ಲಿ ಹದಿನೈದು ಭಾಗಗಳು ಅವುಗಳ ಕಾರಣಗಳಿಗೆ ಮತ್ತು ಎಲ್ಲಾ ಇಂದ್ರಿಯಗಳು ಅವುಗಳ ದೇವತೆಗಳಿಗೆ ಹಿಂತಿರುಗುತ್ತವೆ; ಬುದ್ಧಿಯಲ್ಲಿ ಪ್ರತಿಫಲಿಸುವ ಕ್ರಿಯೆಗಳು ಮತ್ತು ಆತ್ಮವು, ಎಲ್ಲರ ಆತ್ಮವಾದ ಅತ್ಯುನ್ನತ ಅವಿನಾಶಿ ಬ್ರಹ್ಮದೊಂದಿಗೆ ಒಂದಾಗುತ್ತದೆ.
ಹದಿನೈದು ಭಾಗಗಳು ಎಂದರೆ ಪಂಚ ಪ್ರಾಣಗಳು, ಪಂಚ ಕರ್ಮೇಂದ್ರಿಯಗಳು ಹಾಗೂ ಪಂಚ ಜ್ಞಾನೇಂದ್ರಿಯಗಳು - ಮೋಕ್ಷ ಪಡೆಯುವ ಕಾಲದಲ್ಲಿ ಇವೆಲ್ಲವೂ ಕರಗಿ ಬಿಡುತ್ತವೆ. ಇಂದ್ರಿಯಗಳನ್ನು ನಿರ್ದೇಶಿಸುವ ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳುತ್ತವೆ.
ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇ-
ಽಸ್ತಂ ಗಚ್ಛಂತಿ ನಾಮರೂಪೇ ವಿಹಾಯ .
ತಥಾ ವಿದ್ವಾನ್ ನಾಮರೂಪಾದ್ವಿಮುಕ್ತಃ
ಪರಾತ್ಪರಂ ಪುರುಷಮುಪೈತಿ ದಿವ್ಯಂ .. ೮..
ಹರಿಯುವ ನದಿಗಳು ತಮ್ಮ ನಾಮ ಮತ್ತು ರೂಪಗಳನ್ನು ಕಳೆದುಕೊಂಡು ಸಮುದ್ರದಲ್ಲಿ ಕಣ್ಮರೆಯಾಗುವಂತೆ, ಜ್ಞಾನಿಯು ನಾಮ ಮತ್ತು ರೂಪಗಳನ್ನು ಕಳೆದುಕೊಂಡು ಪರಾತ್ಪರನಾದ ದಿವ್ಯನಾದ ಪುರುಷನನ್ನು ಪಡೆಯುತ್ತಾನೆ.
ಬ್ರಹ್ಮೈವ ಭವತಿ ನಾಸ್ಯಾಬ್ರಹ್ಮವಿತ್ಕುಲೇ ಭವತಿ .
ತರತಿ ಶೋಕಂ ತರತಿ ಪಾಪ್ಮಾನಂ ಗುಹಾಗ್ರಂಥಿಭ್ಯೋ
ವಿಮುಕ್ತೋಽಮೃತೋ ಭವತಿ .. ೯..
ಪರಮ ಬ್ರಹ್ಮವನ್ನು ನಿಜವಾಗಿಯೂ ತಿಳಿದಿರುವವನು ಬ್ರಹ್ಮನಾಗುತ್ತಾನೆ. ಅವನ ಕುಟುಂಬದಲ್ಲಿ ಯಾರೂ ಬ್ರಹ್ಮವನ್ನು ಅರಿಯದೆ ಹುಟ್ಟುವುದಿಲ್ಲ. ಅವನು ದುಃಖವನ್ನು ಜಯಿಸುತ್ತಾನೆ; ಅವನು ದುಷ್ಟತನವನ್ನು ಜಯಿಸುತ್ತಾನೆ; ಹೃದಯದ ಬಂಧನಗಳಿಂದ ಮುಕ್ತನಾಗಿ, ಅವನು ಅಮರನಾಗುತ್ತಾನೆ.
ಕ್ರಿಯಾವಂತಃ ಶ್ರೋತ್ರಿಯಾ ಬ್ರಹ್ಮನಿಷ್ಠಾಃ
ಸ್ವಯಂ ಜುಹ್ವತ ಏಕರ್ಷಿಂ ಶ್ರದ್ಧಯಂತಃ .
ತೇಷಾಮೇವೈತಾಂ ಬ್ರಹ್ಮವಿದ್ಯಾಂ ವದೇತ
ಶಿರೋವ್ರತಂ ವಿಧಿವದ್ಯೈಸ್ತು ಚೀರ್ಣಂ .. ೧೦..
ಒಂದು ಋಕ್ (ಋಗ್ವೇದದ)-ಶ್ಲೋಕವು ಹೀಗೆ ಹೇಳುತ್ತದೆ: ಬ್ರಹ್ಮನ ಈ ಜ್ಞಾನವನ್ನು - ಅಗತ್ಯ ಕರ್ತವ್ಯಗಳನ್ನು ನಿರ್ವಹಿಸಿದವರಿಗೆ, ವೇದಗಳಲ್ಲಿ ಪಾರಂಗತರಾದವರಿಗೆ ಮತ್ತು ಬ್ರಹ್ಮನಿಗೆ ಭಕ್ತಿಯುಳ್ಳವರಿಗೆ ಮತ್ತು ನಂಬಿಕೆಯಿಂದ ತುಂಬಿ, ಏಕಾರ್ಷಿ ಅಗ್ನಿಯಲ್ಲಿ ನೈವೇದ್ಯಗಳನ್ನು ಅರ್ಪಿಸಿದವರಿಗೆ ಮತ್ತು ನಿಯಮದಂತೆ, ತಲೆಯ ಮೇಲೆ ಬೆಂಕಿಯನ್ನು ಹೊತ್ತುಕೊಳ್ಳುವ ವಿಧಿಯನ್ನು ಮಾಡಿದವರಿಗೆ ಮಾತ್ರ ಹೇಳಬೇಕು.
ಬ್ರಹ್ಮಜ್ಞಾನವನ್ನು ಯಾರಿಗೆ ಕಲಿಸಬೇಕೆಂಬ ನಿಯಮವನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.
ಪುರೋವಾಚ ನೈತದಚೀರ್ಣವ್ರತೋಽಧೀತೇ .
ನಮಃ ಪರಮಋಷಿಭ್ಯೋ ನಮಃ ಪರಮಋಷಿಭ್ಯಃ .. ೧೧..
ಹೀಗೆಯೇ ಋಷಿ ಅಂಗೀರಸನು ಪ್ರಾಚೀನ ಕಾಲದಲ್ಲಿ ಈ ಸತ್ಯವನ್ನು ಘೋಷಿಸಿದನು. ವ್ರತವನ್ನು ಪಾಲಿಸದ ವ್ಯಕ್ತಿಯು ಅದನ್ನು ಓದಬಾರದು. ಋಷಿಗಳಿಗೆ ನಮಸ್ಕಾರ! ಋಷಿಗಳಿಗೆ ನಮಸ್ಕಾರ!
.. ಇತಿ ಮುಂಡಕೋಪನಿಷದಿ ತೃತೀಯಮುಂಡಕೇ ದ್ವಿತೀಯಃ ಖಂಡಃ ..
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ .
ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂ ಯದಾಯುಃ ..
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ .
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ..
ಓಂ. ಓ ದೇವತೆಗಳೇ, ನಾವು ನಮ್ಮ ಕಿವಿಗಳಿಂದ ಶುಭವಾದದ್ದನ್ನು ಕೇಳೋಣ! ಓ ಪೂಜಾ ದೇವತೆಗಳೇ, ನಾವು ನಮ್ಮ ಕಣ್ಣುಗಳಿಂದ ಒಳ್ಳೆಯದನ್ನು ನೋಡೋಣ! ಅಂಗಗಳು ಮತ್ತು ದೇಹದಲ್ಲಿ ಬಲಶಾಲಿಗಳಾದ ನಾವು ನಿನ್ನ ಸ್ತುತಿಯನ್ನು ಹಾಡೋಣ ಮತ್ತು ಪ್ರಜಾಪತಿ ನಮಗೆ ನೀಡಿದ ಜೀವನವನ್ನು ಆನಂದಿಸೋಣ! ಓಂ. ಶಾಂತಿ! ಶಾಂತಿ! ಶಾಂತಿ!
.. ಓಂ ಶಾಂತಿಃ ಶಾಂತಿಃ ಶಾಂತಿಃ ..
.. ಇತ್ಯಥರ್ವವೇದೀಯ ಮುಂಡಕೋಪನಿಷತ್ಸಮಾಪ್ತಾ ..

Comments
Post a Comment